ಸಾರಾಂಶ
ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಕೈಬಿಡುವಂತೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಕೊಪ್ಪಳ
ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಕೈಬಿಡುವಂತೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ಚುನಾವಣೆ ವಿಭಾಗದ ತಹಸೀಲ್ದಾರ್ ರವಿ ವಸ್ತ್ರದ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಹಿಂದಿನ ಬಿಜೆಪಿ ಸರಕಾರ ಸ್ಥಾಪಿಸಿದ ವಿಶ್ವವಿದ್ಯಾಲಯಗಳನ್ನು ಮುಂದುವರೆಸಿಕೊಂಡು ಹೋಗದೆ ಇರುವುದು ವಿಷಾದನೀಯ. ಯು.ಜಿ.ಸಿ ಪ್ರಕಾರ ಎರಡು ಜಿಲ್ಲೆಗೆ ಒಂದರಂತೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿ ಹೆಚ್ಚಿನ ಉನ್ನತ ಶಿಕ್ಷಣವನ್ನು ಕೆಳಹಂತಕ್ಕೆ ಒಯ್ಯಬೇಕೆಂಬ ಆಶಯಕ್ಕೆ ನಿಮ್ಮ ಈ ನಡೆ ವಿರೋಧವಾಗಿದೆ. ಕಲ್ಯಾಣ ಕರ್ನಾಟಕ/ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಆ ಕಾರಣಕ್ಕಾಗಿ ನಂಜುಂಡಪ್ಪ ವರದಿ ಜಾರಿಯಾಯಿತು. ಮತ್ತು ಸಂವಿಧಾನದ 371 (ಜೆ) ಕೂಡ ಜಾರಿಯಾಯಿತು. ಕಲ್ಯಾಣ ಕರ್ನಾಟಕದ ಬೀದರ ವಿಶ್ವವಿದ್ಯಾಲಯ ಉಳಿಸಿಕೊಂಡಂತೆ, ಶೈಕ್ಷಣಿಕವಾಗಿ ತೀರ ಹಿಂದುಳಿದ ಪ್ರದೇಶವಾದ ಮತ್ತು ಕೊಪ್ಪಳದಲ್ಲಿ ಅಪರೂಪಕ್ಕೆ ಸ್ಥಾಪನೆಯಾದ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.ಬೀದರ ವಿವಿ ವಿದ್ಯಾರ್ಥಿಗಳ ಶುಲ್ಕದಿಂದ ಉಳಿದಂತೆ, ಕೊಪ್ಪಳದ ವಿವಿಯವೂ ವಿದ್ಯಾರ್ಥಿಗಳ ಶುಲ್ಕದ ಬೆಂಬಲದಿಂದ ಉಳಿದಿತ್ತು. ಕನ್ನಡದ ಶಾಲೆಗಳನ್ನು ಮುಚ್ಚುತ್ತಾ ಬಂದ ಸರಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಕೊಪ್ಪಳ ವಿಶ್ವವಿದ್ಯಾಲಯ ಮುಚ್ಚುವ ತೀರ್ಮಾನ ಹಿಂಪಡೆಯಬೇಕೆಂದು ಒತ್ತಾಯಿಸಿದರು.ಹಿರಿಯ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಶೀಲವಂತರ್, ವಿದ್ಯಾರ್ಥಿಗಳಾದ ಪವನ್ ಕುಮಾರ್, ನಾಗರಾಜ ರಾಥೋಡ್, ಜುನುಸಾಬ್ ವಡ್ಡಟ್ಟಿ, ರೈತ ಸಂಘಟನೆಯ ರಾಜ್ಯ ನಾಯಕ ಡಿ.ಎಚ್. ಪೂಜಾರ್, ಕೆ.ಬಿ. ಗೋನಾಳ, ಶರಣು ಗಡ್ಡಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಸಾಹಿತಿಗಳಾದ ಎ.ಎಂ. ಮದರಿ, ಈಶ್ವರ ಹತ್ತಿ, ಕಾಶಪ್ಪ ಚಲವಾದಿ, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್, ಮಖಬೂಲ್ ರಾಯಚೂರು ಮುಂತಾದವರಿದ್ದರು.