ಕನ್ನಡಪ್ರಭ ವಾರ್ತೆ ವಿಜಯಪುರ
ಕೆಪಿಎಸ್ಸಿಯಲ್ಲಿ ಪದೇ ಪದೇ ಬೆಳಕಿಗೆ ಬರುತ್ತಿರುವ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ವ್ಯವಸ್ಥೆಯನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಹೇಳಿದರು.ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಹಾಗೂ ಅರ್ಹರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಹಾಗೂ ಎಐಡಿವೈಓ ಯುವಜನ ಸಂಘಟನೆಗಳು ನಗರದ ಡಾ.ಅಂಬೇಡ್ಕರ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಯುವಜನರ ಕನಸುಗಳಿಗೆ ಬೆಳಕಾಗಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಇಂದು ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಅಕ್ರಮಗಳಿಂದ ಪ್ರಶ್ನಾರ್ಹವಾಗಿದೆ. ಪ್ರತಿ ಹಗರಣವೂ ಸಾವಿರಾರು ಯುವಜನರ ಶ್ರಮ, ಸಮಯ ಮತ್ತು ಭವಿಷ್ಯದ ಮೇಲೆ ಹೊಡೆತ ನೀಡಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪಿ.ಸಿ. ಹೋಟಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತಂದು, ನೇಮಕಾತಿ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕ, ತಂತ್ರಜ್ಞಾನ ಆಧಾರಿತ ಹಾಗೂ ಜನರ ವಿಶ್ವಾಸ ಗಳಿಸುವ ರೀತಿಯಲ್ಲಿ ರೂಪಿಸಬೇಕು. ಆದ್ದರಿಂದ ಕೆಪಿಎಸ್ಸಿಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ಉದ್ಯೋಗಾಕಾಂಕ್ಷಿಗಳಾದ ನವೀನ ಹಾಗೂ ಭಾಗ್ಯಶ್ರೀ ಮಾತನಾಡಿ, ಸರ್ಕಾರ ಬ್ರಷ್ಟಾಚಾರ ತಡೆಗಟ್ಟದ ಸರ್ಕಾರ ಪ್ರತಿ ಹುದ್ದೆಗೆ ಇಂತಿಷ್ಟು ಎಂದು ದರವನ್ನು ನಿಗದಿ ಮಾಡಲಿ, ಆಗ ನಾವು ಕಷ್ಟಪಟ್ಟು ಓದುವುದೂ ತಪ್ಪುತ್ತದೆ. ಅವರ ಯೋಗ್ಯತೆಯು ಬಹಿರಂಗವಾಗುತ್ತದೆ. ನಮ್ಮ ಅರ್ಹತೆಗೆ ತಕ್ಕ ಒಂದು ಉದ್ಯೋಗ ಕೊಡಲು ಆಗದವರಿಗೆ ಮಂತ್ರಿಗಳಾಗಲು ಯಾವ ಅರ್ಹತೆ ಇದೆ ಎಂದು ಪ್ರಶ್ನಿಸಿದರು. ಎಐಡಿವೈಓನ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಅಶೋಕ ದೇಸಾಯಿ ಹಾಗೂ ಉದ್ಯೋಗಾಕಾಂಕ್ಷಿಗಳಾದ ಕಲ್ಯಾಣಿ, ಐಶ್ವರ್ಯ, ಭಾಗ್ಯಾ, ಸೃಷ್ಟಿ, ಕೋಮಲ, ರೋಹನ, ಮುತ್ತು, ಮಲ್ಲು, ಮೇಘರಾಜ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.