ಕನ್ನಡಪ್ರಭ ವಾರ್ತೆ ಲೋಕಾಪುರ
ಮುಧೋಳ ತಾಲೂಕಿನ ಬೆಳೆಹಾನಿ ಹಾಗೂ ಬರ ಪರಿಸ್ಥಿತಿ ಪರೀಶಿಲನೆಗೆ ಆಗಮಿಸಿದ್ದ ಸಚಿವ ವಿಜಯಾನಂದ ಕಾಶಪ್ಪನವರ ರೈತರ ಜಮೀನುಗಳಿಗೆ ಭೇಟಿ ನೀಡಿ ಬರ ಸ್ಥಿತಿ ಅವಲೋಕಿಸದೇ ಬರಗೈಯಲ್ಲಿ ವಾಪಸ್ಸು ತೆರಳಿದ್ದಾರೆ ಎಂದು ಮುಧೋಳ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಆರೋಪಿಸಿದ್ದಾರೆ.ಗುರುವಾರ ಸಂಜೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೈತರ ಮಳೆ, ಬೆಳೆ ಇಲ್ಲದೇ ಕಂಗೆಟ್ಟಿದ್ದಾರೆ. ಬರಗಾಲದಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಇಂತಹ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದವರು ಸಚಿವರಾಗುವ ನಿರೀಕ್ಷೆಯಲ್ಲಿ 2 ತಿಂಗಳ ಕಾಲಹರಣ ಮಾಡಿದ್ದಾರೆ. ಮುಧೋಳ ಮತಕ್ಷೇತ್ರಕ್ಕೆ ನೂತನ ಸಚಿವರು ಬಂದು ಬರ ವೀಕ್ಷಿಸದೇ ಹಾಗೆ ಹೋಗಿದ್ದು, ರೈತಾಪಿ ವರ್ಗಕ್ಕೆ ಮಾಡಿದ ಅವಮಾನವಾಗಿದೆ ಎಂದು ದೂರಿದರು.
ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಹಾಗೂ ನೂತನ ಸಚಿವ ವಿಜಯಾನಂದ ಕಾಶಪ್ಪನವರ ಅವರ ಮನಸ್ತಾಪ ಹಾಗೂ ಸಮನ್ವಯ ಕೊರತೆಯಿಂದ ಗುರುವಾರ ಮುಧೋಳಕ್ಕೆ ಸಚಿವ ಕಾಶಪ್ಪನವರು ಭೇಟಿ ನೀಡಿದ್ದರು. ಬರವೀಕ್ಷಣೆಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಬಿಜೆಪಿ ಮೀನುಗಾರರ ಪ್ರಕ್ರೋಷ್ಠ ಸಂಚಾಲಕ ನಾಗಪ್ಪ ಅಂಬಿ, ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿದರು. ಮುಖಂಡರಾದ ವಿ.ಎಂ.ತೆಗ್ಗಿ, ಶಿವಪ್ಪ ಚೌಧರಿ, ಮುಧೋಳ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕುಳಲಿ, ರಾಘವೇಂದ್ರ ಶಿಂಧೆ, ಟಿಎಂಪಿಸಿ ನಿರ್ದೇಶಕ ಮಾರುತಿ ರಂಗಣ್ಣವರ ಇತರರು ಇದ್ದರು.