ಸಾರಾಂಶ
ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಬೇಕು, ಇದರಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.
ಯಾದಗಿರಿ : ಗುತ್ತಿಗೆದಾರ ಸಚಿನ್ ಪಂಚಾಳ್ ಆತ್ಮಹತ್ಯೆ ಪ್ರಕರಣ ಸಿಬಿಐಗೆ ಒಪ್ಪಿಸಬೇಕು, ಇದರಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯಿತು.
ಸಮಾಜದ ನೂರಾರು ಜನರು ಪ್ರತಿಭಟನಾ ಮೆರವಣಿಗೆ ಹೊರಟು ತಹಸೀಲ್ದಾರ್ ಕಚೇರಿಯಿಂದ ಪಾದಯಾತ್ರೆ ಮೂಲಕ ಸುಭಾಷ್ ವೃತ್ತದವರೆಗೆ ತಲುಪಿತು.ಮಾನವ ಸರಪಳಿ ನಿರ್ಮಿಸಿ ಟೈರ್ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕೂಡಲೇ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಸ್ವಾಮಿಗಳು, ಸಚಿವ ಪ್ರಿಯಾಂಕ್ ಖರ್ಗೆ ಆಪ್ತರು ನೀಡಿದ ಹಿಂಸೆಯಿಂದಲೇ ಸಚಿನ್ ಪಾಂಚಾಳ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಡ ಕುಟುಂಬದ ರೋಧನೆ ಕೇಳುವವರೇ ಇಲ್ಲದಂತ ಸ್ಥಿತಿ ಇದೆ. ಕೂಡಲೇ ಸಚಿವರು ರಾಜೀನಾಮೆ ನೀಡಬೇಕು. ಆರೋಪಿಗಳನ್ನು ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಗುರಿ ಮಾಡಬೇಕು ಮತ್ತು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದ ಅವರು, ಸಚಿನ್ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಮುಖಾಂತರ ರಾಜ್ಯದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮಿಗಳು, ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಕುಮಾರಸ್ವಾಮಿಗಳು, ರವೀಂದ್ರ ಸ್ವಾಮಿಗಳು ಹಾಗೂ ಸುಲೇಪೇಠದ ದೊಡ್ಡೆಂದ್ರ ಸ್ವಾಮಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಮಹೇಶ ವಿಶ್ವಕರ್ಮ, ಬಸವರಾಜ ಪಂಚಾಳ, ವಿಜಯ ಪಾಟೀಲ್ ಮಾತನಾಡಿದರು.
ಪ್ರಣವ ನಿರಂಜನ್ ಸ್ವಾಮಿ, ಶಿವಣ್ಣ ವಿಶ್ವಕರ್ಮ, ಅಶೋಕ ಚಂಡ್ರಕಿ, ಲೋಹಿತ್ ಕಲ್ಲೂರ್, ರಮೇಶ ವಿಶ್ವಕರ್ಮ, ಬನ್ನಪ್ಪ ಕಾಳೆಬೆಳಗುಂದಿ, ಕಾಳಪ್ಪ ದುಪ್ಪಲಿ, ಶ್ರೀನಿವಾಸ, ದೇವು ತಳವಾರಗೇರಾ, ಮನೋಹರ, ಗಣೇಶ ಪತ್ತಾರ, ಬನ್ನಪ್ಪ, ರಾಮಾಚಾರಿ, ಉತ್ತಪ್ಪ ತಾತಾ, ಶಂಭು ಇದ್ದರು.