ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಚಾಲ್ತಿಯಲ್ಲಿರುವ ಕ್ರಮ ವಿಧಾನವನ್ನು ಪಾಲಿಸದೆ ರಸ್ತೆ ಅಗಲೀಕರಣ ಕೈಗೊಂಡಲ್ಲಿ ನಗರ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿ, ಪೌರಾಯುಕ್ತರು, ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು. ನಿಯಮಬಾಹಿರ ಪ್ರಕರಣದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಅವರಿಂದಲೇ ವಸೂಲು ಮಾಡಲಾಗುವುದೆಂದು ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.
ರಸ್ತೆ ಅಗಲೀಕರಣದ ಬೇಕಾ ಬಿಟ್ಟಿ ನಡೆಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಈ ಸಂಬಂಧ ಅಕ್ಟೋಬರ್-3-2024ರಂದೇ ಪೌರಾಡಳಿತ ನಿರ್ದೇಶನಾಲಯ ಪತ್ರ ಬರೆದು ಮುಂಜಾಗ್ರತೆ ಕ್ರಮಗಳ ನೆನಪಿಸಿದೆ. ರಸ್ತೆ ಅಗಲೀಕರಣ ವಿಚಾರದಲ್ಲಿ ನಿಯಮಗಳ ಅನುಸರಿಸದೆ ನ್ಯಾಯಾಲಯದ ಮುಂದೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೆಲಸ ಮಾಡಬಾರದೆಂದು ಜಿಲ್ಲಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಅಗಲೀಕರಣ ವಿಚಾರದಲ್ಲಿ ನ್ಯಾಯಾಲಯಕ್ಕೆ ಪ್ರಕರಣಗಳು ಹೋಗದಂತೆ ಎಚ್ಚರವಹಿಸಿ ಎಂಬುದು ಸರ್ಕಾರದ ಎಚ್ಚರಿಕೆಯ ಮೂಲ ತಿರುಳು.ರಾಜ್ಯದಲ್ಲಿನ ಹಲವು ನಗರ ಮತ್ತು ಪಟ್ಟಣಗಳಲ್ಲಿ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಜಮೀನನ್ನು ನಿಯಮಾನುಸಾರ ನಗರ ಸ್ಥಳೀಯ ಸಂಸ್ಥೆ ವಶಕ್ಕೆ ತೆಗೆದುಕೊಳ್ಳದೆ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಭೂಸ್ವಾಧೀನ ಪಡಿಸಿಕೊಳ್ಳದೆ ರಸ್ತೆ ಅಗಲೀಕರಣ ಕಾರ್ಯದಲ್ಲಿ ಹಲವು ಸಂದರ್ಭದಲ್ಲಿ ಖಾಸಗಿ ಮಾಲೀಕತ್ವದಲ್ಲಿ ಇರುವ ಜಮೀನುಗಳಲ್ಲಿಯೂ ಸಹ ರಸ್ತೆ ಅಗಲೀಕರಣ ಮಾಡಿರುವುದರಿಂದ ಪ್ರಕರಣಗಳು ಮಾನ್ಯ ನ್ಯಾಯಾಲಯಕ್ಕೆ ಬರುವ ಸಾಧತೆ ಇದೆ. ಈಗಾಗಲೇ ಹಲವು ಪ್ರಕರಣಗಳು ನ್ಯಾಯಾಲಯದ ಮುಂದೆ ಬಂದಿವೆ. ನ್ಯಾಯಾಲಯದ ಮುಂದೆ ನಗರ ಸ್ಥಳೀಯ ಸಂಸ್ಥೆಗಳ ಕ್ರಮವನ್ನು ಸಮರ್ಥಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ. ನ್ಯಾಯಾಲಯದ ಮುಂದೆ ಮುಜುಗರಕ್ಕೆ ಈಡಾಗುವ ಪರಿಸ್ಥಿತಿ ತರಬೇಡಿ ಎಂದು ಸ್ಪಷ್ಟವಾಗಿ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಮೀನನ್ನು ವಶಪಡಿಸಿಕೊಳ್ಳುವ ಮುನ್ನ ಅವಶ್ಯವಿರುವ ಜಮೀನಿನ ಸರ್ವೇ ಮಾಡಿಸಿ ಮಾಲೀಕತ್ವ ಮತ್ತು ವಿಸ್ತೀರ್ಣದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಜಮೀನನ್ನು ಖರೀದಿಸುವ, ಭೂಸ್ವಾಧೀನ ಪಡಿಸಿಕೊಳ್ಳುವ ಮುನ್ನ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ನಂತರವೆ ಮುಂದಿನ ಕ್ರಮ ಜರುಗಿಸಬೇಕು ಎಂದಿದೆ.ಸರ್ಕಾರದ ನಿರ್ದೇಶನ ಬಿಗಿ ನಿರ್ದೇಶನವಿದ್ದರೂ ರಾಜ್ಯದಲ್ಲಿ ಹಲವು ನಗರ ಮತ್ತು ಪಟ್ಟಣಗಳಲ್ಲಿ ರಸ್ತೆ ಆಗಲೀಕರಣಕ್ಕೆ ಅಗತ್ಯವಿರುವ ಜಮೀನನ್ನು ನಿಯಮಾನುಸಾರ ನಗರ ಸ್ಥಳೀಯ ಸಂಸ್ಥೆ ವಶಕ್ಕೆ ತೆಗೆದುಕೊಳ್ಳದೆ ಮೌಖಿಕ ಸೂಚನೆಗಳ ಆಧಾರದ ಮೇಲೆ ಹಾಗೂ ಆಡಳಿತ ಮಂಡಳಿ ಠರಾವುಗಳ ಮೂಲಕ ಕಾನೂನು ರೀತಿ ಭೂಸ್ವಾಧೀನ ಮಾಡಿ ಕೊಳ್ಳಲಾಗುತ್ತಿಲ್ಲ. ಖಾಸಗಿ ಭೂಮಿಯನ್ನು ಬಳಕೆ ಮಾಡಿಕೊಂಡು ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಕಾನೂನಾತ್ಮಕ ಮತ್ತು ಆರ್ಥಿಕ ಹಾಗೂ ಸಾಮಾಜಿಕ ತೊಡಕುಂಟಾಗುತ್ತಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯ ಪಟ್ಟಿದೆ.
ರಸ್ತೆ ಅಗಲೀಕರಣ ಕಾರ್ಯಕ್ಕೆ ಖಾಸಗಿ ಜಮೀನನ್ನು ಭೂಸ್ವಾಧೀನ ಪ್ರಕ್ರಿಯೆ ಇಲ್ಲವೇ ನೇರ ಖರೀದಿ ಮಾಡುವ ಮುನ್ನ ಕಡ್ಡಾಯವಾಗಿ ಸರ್ಕಾರದ ಅನುಮೋದನೆ ಪಡೆಯಬೇಕು. ಸರ್ವೇ ಮಾಡಿಸಿ ಜಮೀನಿನ ಮಾಲೀಕತ್ವ ಮತ್ತು ವಿಸ್ತೀರ್ಣದ ಬಗ್ಗೆ ನಿರ್ದಿಷ್ಟವಾಗಿ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಜಮೀನು ಸರ್ಕಾರ, ಅರೆ ಸರ್ಕಾರಿ ಸಂಸ್ಥೆಗಳಿಗೆ ಸೇರಿದ್ದಾದಲ್ಲಿ ಲಿಖಿತ ಒಪ್ಪಿಗೆ ಪಡೆದುಕೊಂಡ ನಂತರವೇ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬೇಕು ಎಂದು ಸೂಚಿಸಿದೆ.