ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಶನಿವಾರ ಆರಂಭಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮೊದಲ ದಿನದ ಕನ್ನಡ ಭಾಷಾ ವಿಷಯ ಪರೀಕ್ಷೆಗೆ ಒಟ್ಟು175 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಮೂಲಕ ಶೇ.96.31 ರಷ್ಟು ಹಾಜರಾತಿ ಆಗಿದೆ.

ಒಟ್ಟು175 ವಿದ್ಯಾರ್ಥಿಗಳು ಗೈರು । ಶೇ.96.31 ರಷ್ಟು ಹಾಜರಾತಿ । 19 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ವೆಬ್‌ ಕಾಸ್ಟಿಂಗ್‌ ಕಣ್ಗಾವಲು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಯಾವುದೇ ಗೊಂದಲಗಳಿಲ್ಲದೆ ಸುಸೂತ್ರವಾಗಿ ಶನಿವಾರ ಆರಂಭಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ-1ರ ಮೊದಲ ದಿನದ ಕನ್ನಡ ಭಾಷಾ ವಿಷಯ ಪರೀಕ್ಷೆಗೆ ಒಟ್ಟು175 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಈ ಮೂಲಕ ಶೇ.96.31 ರಷ್ಟು ಹಾಜರಾತಿ ಆಗಿದೆ.

ಜಿಲ್ಲೆಯ 19 ಪರೀಕ್ಷಾ ಕೇಂದ್ರಗಳು ಸಿಸಿಟಿವಿ ಕ್ಯಾಮರಾದೊಂದಿಗೆ ವೆಬ್‌ ಕಾಸ್ಟಿಂಗ್‌ ಕಣ್ಗಾವಲಿನಲ್ಲಿ ನಡೆದಿದೆ. 8,890 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಈ ಪೈಕಿ 351 ವಿದ್ಯಾರ್ಥಿಗಳು ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದು, 222 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. ಇಬ್ಬರು ಮರು ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಿದ್ದಾರೆ.

ಮೊದಲ ದಿನ ನಡೆದ ಕನ್ನಡ ಭಾಷಾ ವಿಷಯ ಪರೀಕ್ಷೆಯನ್ನು ಒಟ್ಟು 7,458 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು, ಈ ಪೈಕಿ 175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ, ಉಳಿದ 7,183 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಜಿಪಂನಲ್ಲಿ ನಿಗಾ ಕೇಂದ್ರಚಿಕ್ಕಮಗಳೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೆಬ್‌ ಕಾಸ್ಟಿಂಗ್‌ ನಿಗಾ ಕೇಂದ್ರ ಸ್ಥಾಪಿಸಲಾಗಿದೆ. ಜಿಲ್ಲೆಯ 19 ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಯಲ್ಲಿ ಅಳವಡಿಕೆ ಮಾಡಲಾಗಿರುವ ಸಿಸಿಟಿವಿ ಕ್ಯಾಮರಾದ ದೃಶ್ಯಗಳನ್ನು ಈ ನಿಗಾ ಕೇಂದ್ರದಲ್ಲಿ ವೀಕ್ಷಣೆ ಮಾಡಬಹುದಾಗಿದೆ. ವೆಬ್‌ ಕಾಸ್ಟಿಂಗ್‌ ನಿಗಾ ವಹಿಸಲು 9 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮೂರು ಜಿಲ್ಲಾ ಮಟ್ಟದ ಸ್ಕ್ವಾಡ್‌

ಜಿಲ್ಲಾ ಮಟ್ಟದ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ಮೂರು ಸ್ಕ್ವಾಡ್‌ ತಂಡಗಳನ್ನು ರಚಿಸಲಾಗಿದೆ. ಇದರೊಂದಿಗೆ ಪರೀಕ್ಷಾ ಕೇಂದ್ರದ ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಒಬ್ಬರು ಅಥವಾ ಇಬ್ಬರನ್ನು ಸಿಟ್ಟಿಂಗ್ ಸ್ಕ್ವಾಡ್‌ ನಿಯೋಜಿಸಲಾಗಿದೆ.

ಜಿಪಿಎಸ್‌ ಆಧಾರಿತ ವಾಹನದಲ್ಲಿ ಪ್ರಶ್ನೆ ಪತ್ರಿಕೆಯನ್ನು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರಕ್ಕೆ ಪೂರೈಸಿ. ಪರೀಕ್ಷಾ ಸಿಬ್ಬಂದಿ ಸೇರಿದಂತೆ ಯಾರೊಬ್ಬರಿಗೂ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್‌ ಬಳಕೆ ನಿಷೇಧಿಸಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಕೆ.ಮಂಜುಳಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಉಚಿತ ಬಸ್‌, ನಿರಂತರ ವಿದ್ಯುತ್

ಪರೀಕ್ಷೆ ಬರೆಯುವುದಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಸರ್ಕಾರಿ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪರೀಕ್ಷಾ ಹಾಜರಾತಿ ಚೀಟಿ (ಹಾಲ್‌ ಟಿಕೆಟ್‌) ತೋರಿಸಿದರೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಪರೀಕ್ಷಾ ಅವಧಿಯಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಮಸ್ಯೆ ಆಗಬಾರದು. ಪರೀಕ್ಷಾ ಅವಧಿ ಮುಕ್ತಾಯವಾಗುವವರೆ ವಿದ್ಯುತ್‌ ನಿರಂತರವಾಗಿ ಇರಬೇಕೆಂದು ಜಿಲ್ಲಾಧಿಕಾರಿ ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.-- ಕೋಟ್‌ --

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಪತ್ರಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿನ ವದಂತಿಗಳಿಗೆ ಕಿವಿಗೊಡಬಾರದು. ಅತ್ಯಂತ ವ್ಯವಸ್ಥಿತವಾಗಿ, ಎಚ್ಚರಿಕೆಯಿಂದ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಕೆಲಸ ಇಲಾಖೆ ಮಾಡುತ್ತಿದೆ. ಆ ಕುರಿತು ಇಲಾಖೆ ಕ್ರಮವಹಿಸಲಿದೆ.

ಕೆ.ಮಂಜುಳಾ,

ಉಪ ನಿರ್ದೇಶಕಿ

ಪದವಿ ಪೂರ್ವ ಶಿಕ್ಷಣ ಇಲಾಖೆ, ಚಿಕ್ಕಮಗಳೂರುಫೋಟೋ:

ಚಿಕ್ಕಮಗಳೂರು ನಗರದ ಪರೀಕ್ಷಾ ಕೇಂದ್ರ ಒಂದರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ಕನ್ನಡ ಭಾಷೆ ವಿಷಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು.