ಗದಗ: ಕಣ್ಣಿಲ್ಲದವರ ಕಣ್ಣಾಗಿ ಅವರ ಜೀವನ ಬೆಳಕಾದ ಲಿಂ. ಡಾ. ಪಂ. ಪುಟ್ಟರಾಜ ಗವಾಯಿಗಳು ಕಣ್ಣಿಲ್ಲದ, ದಿಕ್ಕಿಲ್ಲದ, ದೀನ- ದಲಿತರ, ಅನಾಥರ ಮಕ್ಕಳನ್ನು ತಮ್ಮ ಆಶ್ರಮಕ್ಕೆ ಕರೆತಂದು ಸಂಗೀತ ಶಿಕ್ಷಣ, ಸಂಸ್ಕೃತಿ, ಅನ್ನ, ವಿದ್ಯೆಯನ್ನು ನೀಡಿ ಅವರ ಬಾಳಿಗೆ ಬೆಳಕನ್ನು ನೀಡಿ ಅವರ ಹೃದಯದಲ್ಲಿ ದೇವರಾಗಿ ನೆಲೆಸಿದ್ದಾರೆ ಎಂದು ಧಾರವಾಡದ ಹಿರಿಯ ಸಾಹಿತಿ ಡಾ. ಸಂಗಮನಾಥ ಲೋಕಾಪೂರ ತಿಳಿಸಿದರು.

ನಗರದ ವೀರನಾರಾಯಣ ಬಡಾವಣೆ ಹಾಗೂ ಕೆ.ಎಚ್. ಪಾಟೀಲ ಬಡಾವಣೆಯಲ್ಲಿ ಇತ್ತೀಚೆಗೆ ಪಂ. ಪುಟ್ಟರಾಜ ಸಮಾಜಸೇವಾ ಟ್ರಸ್ಟ್‌ನ 4ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪಂ. ಪುಟ್ಟರಾಜ ಕವಿ ಗವಾಯಿಗಳ 112ನೇ ಜಯಂತ್ಯುತ್ಸವದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪುಟ್ಟರಾಜ ಗವಾಯಿಗಳು ಮಾಡಿರುವ ಕೆಲಸವನ್ನು ಕಣ್ಣಿದ್ದವರು ಮಾಡಲು ಅಸಾಧ್ಯ. ಅವರು ಸಂಗೀತ, ಸಾಹಿತ್ಯ, ಕಲೆ, ಸಂಸ್ಕೃತಿ, ದಾಸೋಹ ಪರಂಪರೆ, ವಿದ್ಯಾದಾನ ಅನೇಕ ಕೆಲಸವನ್ನು ನಾಡಿಗೆ ಸಮರ್ಪಿಸಿದ್ದಾರೆ. ಅವರ ಜೀವನದ ಆದರ್ಶ, ತತ್ವ, ಸಿದ್ಧಾಂತ, ಸಂಸ್ಕೃತಿಯನ್ನು ಅಳವಡಿಕೊಳ್ಳುವುದರ ಜತೆಗೆ ನಮ್ಮ ಮಕ್ಕಳಿಗೆ ಅವುಗಳನ್ನು ಕಲಿಸಬೇಕಾಗಿದೆ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಪುಟ್ಟರಾಜ ಗವಾಯಿಗಳು ನಮ್ಮೆಲ್ಲರ ಪಾಲಿಗೆ ನಡೆದಾಡುವ ದೇವರಾಗಿದ್ದಾರೆ. ಅವರು ಸಂಗೀತದ ಜತೆಗೆ ಅನೇಕ ಪುರಾಣಗಳನ್ನು ರಚಿಸಿ ಸಂಗೀತ, ಕಲೆ, ಸಂಸ್ಕೃತಿಯನ್ನು ಬೆಳಗಿದ ಮಹಾಚೇತನ ಎಂದರು.

ವಿರೂಪಾಕ್ಷಪ್ಪ ಪಟ್ಟದಕಲ್ಲ, ಶಿವಯ್ಯ ಬೆಳ್ಳೇರಿಮಠ, ಸುನಿಲ್ ಚಿನ್ನಾಪೂರ, ಶಿವಪ್ಪ ಲಗಳಿ, ಗುರುಲಿಂಗಪ್ಪ ಕೊಟ್ಟೂರಶೇಟ್ರು, ಬಸನಗೌಡ ಪಾಟೀಲ, ಗಂಗನಗೌಡ ಬೆಣಕಲ್, ಶಾಂತಣ್ಣ ಮುಳವಾಡ, ಮಹಾಲಿಂಗಪ್ಪ ಬರಬರಿ, ಎನ್.ಎಚ್. ನಾಗನೂರ, ಈಶಪ್ಪ ಅಂಗಡಿ, ಮಾಂತೇಶ ಲಗಳಿ, ಬಸವರಾಜ ಡಾವಣಗೇರಿ, ಶರಣಪ್ಪ ಮೇಟಿ, ಭೀಮಪ್ಪ ಮಕಾಶಿ, ಮಂಜುನಾಥ ಕ್ಯಾಡದ ಮುಂತಾದವರು ಇದ್ದರು. ಸಂಗೀತ ಸೇವೆಯನ್ನು ವೈ.ಆರ್. ಮೂಲಿಮನಿ, ಎಂ.ಎಸ್. ಮಠದ, ಕಳಕಪ್ಪ ಮುದ್ಲಾಪೂರ, ರತ್ನಾ ಮಂಟೂರಮಠ, ಶ್ರೀಶೈಲ ಚಿಕ್ಕಮಠ, ಶಿವಶಂಕರ ದೊಡ್ಡಮನಿ ಹಾಗೂ ಪ್ರಶಾಂತ ಚಿನ್ನಾಪೂರ ನೀಡಿದರು. ಗಂಗನಗೌಡ ಬೆಣಕಲ್ ಸ್ವಾಗತಿಸಿದರು. ಅಕ್ಕಮಹಾದೇವಿ ಹಾರೊಗೇರಿಮಠ ನಿರೂಪಿಸಿದರು. ಬಸನಗೌಡ ಪಾಟೀಲ ವಂದಿಸಿದರು. ನಂತರ ಮಹಾ ಅನ್ನಸಂತರ್ಪಣೆ ಜರುಗಿತು.