ಪುತ್ತೂರು: 89ನೇ ವರ್ಷದ ಪುತ್ತೂರು ಶಾರದೋತ್ಸವ ಶೋಭಾಯಾತ್ರೆ.

| Published : Oct 25 2023, 01:15 AM IST

ಪುತ್ತೂರು: 89ನೇ ವರ್ಷದ ಪುತ್ತೂರು ಶಾರದೋತ್ಸವ ಶೋಭಾಯಾತ್ರೆ.
Share this Article
  • FB
  • TW
  • Linkdin
  • Email

ಸಾರಾಂಶ

ಶಾರದಾ ವಿಸರ್ಜನೆಯ ಶೋಭಾಯಾತ್ರೆಯು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಗೊಂಡು ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿತು. ಸುಮಾರು ೮೦ ಭಜನಾ ತಂಡ, ೧೩೦೦ ಮಂದಿ ಕುಣಿತ ಭಜಕರು, ೧೫೦೦ ಮಂದಿ ಇತರ ಭಜಕರು ಭಜನೆ ಮೂಲಕ ಶೋಭಾಯಾತ್ರೆಯಲ್ಲಿ ತೆರಳಿದರು.
ಕನ್ನಡಪ್ರಭವಾರ್ತೆ ಪುತ್ತೂರು: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.೧೫ ರಿಂದ ೨೪ರ ತನಕ ನಡೆದ ೮೯ನೇ ವರ್ಷದ ‘ಪುತ್ತೂರು ಶಾರದೋತ್ಸವ’ ಕಾರ್ಯಕ್ರಮದಲ್ಲಿ ಮಂಗಳವಾರ ಮುಸ್ಸಂಜೆ ನಡೆದ ಶಾರದಾ ವಿಸರ್ಜನೆಯ ಶೋಭಾಯಾತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು. ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರ್ಥನೆ ನಡೆಸಿ ತೆಂಗಿನ ಕಾಯಿ ಒಡೆದ ಸಂಸದರು ಬೊಳುವಾರಿನಲ್ಲಿ ಭಗವಾಧ್ವಜ ಏರಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶಾರದಾ ವಿಸರ್ಜನೆಯ ಶೋಭಾಯಾತ್ರೆಯು ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿಯಿಂದ ಆರಂಭಗೊಂಡು ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿ ಸಾಗಿತು. ಸುಮಾರು ೮೦ ಭಜನಾ ತಂಡ, ೧೩೦೦ ಮಂದಿ ಕುಣಿತ ಭಜಕರು, ೧೫೦೦ ಮಂದಿ ಇತರ ಭಜಕರು ಭಜನೆ ಮೂಲಕ ಶೋಭಾಯಾತ್ರೆಯಲ್ಲಿ ತೆರಳಿದರು. ಸುಮಾರು ೧೫ ಟ್ಯಾಬ್ಲೋ, ಪೂಜಾನೃತ್ಯ, ಡೊಳ್ಳುಕುಣಿತ, ೧೦ಕ್ಕೂ ಅಧಿಕ ಸ್ತಬ್ಧಚಿತ್ರಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಶೋಭಾಯಾತ್ರೆ ಸಂದರ್ಭದಲ್ಲಿ ಬೊಳುವಾರಿನಿಂದ ದರ್ಬೆ ವೃತ್ತದ ತನಕ ವರ್ತಕರು ತಮ್ಮ ತಮ್ಮ ಅಂಗಡಿ ಮಳಿಗೆಗಳಿಗೆ ವಿದ್ಯುತ್ ಅಲಂಕಾರಗಳನ್ನು ಮಾಡಿದ್ದರು. ಶಾರದೋತ್ಸವ ಸಮಿತಿ ವತಿಯಿಂದ ವಿದ್ಯುತ್ ದೀಪಗಳಿಂದ ಪೇಟೆಯಲ್ಲಿ ಅಲಂಕಾರ ಮಾಡಲಾಗಿತ್ತು. ದಾರಿಯುದ್ದಕ್ಕೂ ಶಾರದಾ ಮಾತೆಗೆ ಹಣ್ಣುಕಾಯಿ ಅರ್ಪಿಸಲು ಅವಕಾಶ ನೀಡಲಾಗಿತ್ತು. ಮಾಜಿ ಶಾಸಕ ಸಂಜೀವ ಮಠಂದೂರು, ಶೋಭಾಯಾತ್ರೆ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಬನ್ನೂರು, ಭಜನಾ ಮಂದಿರ ಅಧ್ಯಕ್ಷ ಕೆ.ಸಾಯಿರಾಮ ರಾವ್, ಕಾರ್ಯದರ್ಶಿ ಕೆ.ಜಯಂತ ಉರ್ಲಾಂಡಿ, ಶೋಭಾಯಾತ್ರೆ ಸಹಸಂಚಾಲಕ ನವೀನ್ ಕುಲಾಲ್, ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ್ ರಾವ್, ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.