ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಿಗೆ 25 ವರ್ಷಗಳು ತುಂಬಿದ್ದು, ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅಂಬಿಕಾ ಸಂಸ್ಥೆಗಳಿಗೆ ಭೇಟಿ ನೀಡುವರು ಹಾಗೂ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು.
ಈ ಸಂದರ್ಭ ‘ಹಿಂದೂ ಸಂಪರ್ಕ ಸಾರಿಗೆ’ ಹೆಸರಿನ ನೂತನ ಆ್ಯಪ್ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ತಿಳಿಸಿದ್ದಾರೆ. ಶುಕ್ರವಾರ ಪುತ್ತೂರು ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ಎರಡೂವರೆ ದಶಕಗಳ ಹಿಂದೆ ‘ಅಂಬಿಕಾ ವಿದ್ಯಾಲಯ’ ಎಂಬ ಅಭಿದಾನದೊಂದಿಗೆ ಕೋಚಿಂಗ್ ಸೆಂಟರ್ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಅಡಿಯಿರಿಸಿದ್ದ ‘ಅಂಬಿಕಾ’ ಇದೀಗ ತನ್ನ ಸಾರ್ಥಕ 25 ವರ್ಷಗಳ ಶಿಕ್ಷಣ ಯಾನವನ್ನು ಪೂರೈಸಿದೆ. ದಕ್ಷಿಣ ಭಾರತದ ಮೊದಲ ಅಮರ್ ಜವಾನ್ ಜ್ಯೋತಿ ಸ್ಥಾಪನೆ, ಮಂಗಲ್ ಪಾಂಡೆ ಚೌಕ ನಿರ್ಮಾಣವೇ ಮೊದಲಾದ ರಾಷ್ಟ್ರ ಸಮರ್ಪಿತ ಕಾರ್ಯವನ್ನು ಅಂಬಿಕಾ ನೆರವೇರಿಸಿ ದಾಖಲೆ ಬರೆದಿದೆ ಎಂದರು. ಅಂಬಿಕಾ ಶಿಕ್ಷಣ ಸಂಸ್ಥೆಗಳು ಇದೀಗ 25 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿವೆ. ಆ ಪ್ರಯುಕ್ತ ವರ್ಷಪೂರ್ತಿ ನಾನಾ ಬಗೆಯ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಮೇ ೭ರಂದು ಬಪ್ಪಳಿಗೆಯ ಅಂಬಿಕಾ ಆವರಣದಲ್ಲಿನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ವಿಧುಶೇಖರ ಶ್ರೀ ಭೇಟಿ: ಶೃಂಗೇರಿ ಜಗದ್ಗುರುಗಳ ಪ್ರೇರಣೆ, ಆಶೀರ್ವಾದ, ಮಾರ್ಗದರ್ಶನದ ನೆಲೆಯಲ್ಲೇ ಅಂಬಿಕಾ ಸಂಸ್ಥೆಗಳು ಬೆಳೆದುಬರುತ್ತಿವೆ. ಇದೀಗ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸಮಾರೋಪಕ್ಕೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಗಮಿಸುತ್ತಿರುವುದು ಸುಕೃತಪುಣ್ಯದಂತೆನಿಸಿದೆ.ಮೇ ೭ರಂದು ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು, ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು. ಮೇ ೬ರಂದು ಸಂಜೆ ಶ್ರೀ ಗುರುಗಳು ಆಗಮಿಸಲಿದ್ದು, ಅಂಬಿಕಾ ಪರಿವಾರದ ವತಿಯಿಂದ ಪೂರ್ಣಕುಂಭ ಸ್ವಾಗತ, ಧೂಳೀ ಪಾದಪೂಜೆ ನಡೆಯಲಿದೆ ರಾತ್ರಿ ಸುಮಾರು ೮ ಗಂಟೆಯಿಂದ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರಿಂದ ಶ್ರೀ ಶಂಕರ ಸಭಾಭವನದಲ್ಲಿ ಶ್ರೀ ಚಂದ್ರಮೌಳೀಶ್ವರ ಪೂಜೆ ನಡೆಯಲಿದೆ.
ಮೇ ೭ರಂದು ಬೆಳಗ್ಗೆ ೯ ಗಂಟೆಗೆ ಸ್ವಾಮೀಜಿ ಅಂಬಿಕಾ ಸಂಸ್ಥೆಗಳ ರಜತ ಮಹೋತ್ಸವ ಸಮಾರೋಪಕ್ಕೆ ಸಾನ್ನಿಧ್ಯ ಒದಗಿಸಿಕೊಡಲಿದ್ದಾರೆ. ಶಿಕ್ಷಣ ಸಂಸ್ಥೆಗಳ ವತಿಯಿಂದ ಗುರುವಂದನೆ ನಡೆಯಲಿದೆ. ನಂತರ ಆಶೀರ್ವಚನ ನಡೆಯಲಿದೆ ಎಂದು ತಿಳಿಸಿದರು.ನೂತನ ಆ್ಯಪ್ ಅನಾವರಣ: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತ ಮಹೋತ್ಸವದ ಸವಿನೆನಪಿಗಾಗಿ ವಿನೂತನ ಮೊಬೈಲ್ ಆ್ಯಪ್ ಸಮಾಜಕ್ಕೆ ಸಮರ್ಪಿಸಲಾಗುತ್ತಿದೆ. ಮಹಾನಗರಗಳಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಓಲಾ, ಉಬರ್ ಮೊದಲಾದ ಬಾಡಿಗೆ ವಾಹನ ಸಂಬಂಧಿ ವ್ಯವಸ್ಥೆಯ ಮಾದರಿಯಲ್ಲಿ ಪುತ್ತೂರಿನ ಜನರಿಗೆ ಬಾಡಿಗೆ ಆಟೋ ರಿಕ್ಷಾಗಳನ್ನು ನಿಗದಿಪಡಿಸುವುದಕ್ಕೆ ಅನುವು ಮಾಡಿಕೊಡುವಂತಹ ಆಪ್ ಅನ್ನು ಅಂಬಿಕಾದ ವತಿಯಿಂದ ರೂಪಿಸಲಾಗಿದೆ. ‘ಹಿಂದೂ ಸಂಪರ್ಕ ಸಾರಿಗೆ’ ಎಂಬ ಹೆಸರಿನಲ್ಲಿ ಈ ಆಪ್ ಅನ್ನು ರೂಪಿಸಲಾಗಿದ್ದು, ಪುತ್ತೂರಿಗರಿಗೆ ಆಟೋ ರಿಕ್ಷಾಗಳನ್ನು ಬಾಡಿಗೆಗೆ ಪಡೆಯುವುದಕ್ಕೆ ಇದು ಅವಕಾಶ ಮಾಡಿಕೊಡಲಿದೆ ಎಂದು.ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಆಪ್ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಆಪ್ ಮಹಾನಗರಗಳಲ್ಲಿ ಬಳಕೆಯಲ್ಲಿರುವ ವಾಹನ ಸಂಬಂಧಿ ಆಪ್ಗಳಂತೆ ಲಾಭಾಪೇಕ್ಷೆ ಅಥವ ಉದ್ಯಮದೃಷ್ಟಿ ಹೊಂದಿರದೆ ಕೇವಲ ಸೇವಾ ದೃಷ್ಟಿಯೊಂದಿಗೆ ಅಂಬಿಕಾದ ವತಿಯಿಂದ ರೂಪಿಸಲ್ಪಟ್ಟು ಸಮಾಜಕ್ಕೆ ಸಮರ್ಪಣೆಗೊಳ್ಳುತ್ತಿದೆ. ಈ ಆಪ್ ನಿಂದ ಯಾವುದೇ ಆರ್ಥಿಕ ಲಾಭವನ್ನು ಅಂಬಿಕಾ ಪಡೆದುಕೊಳ್ಳುವುದಿಲ್ಲ. ಆಟೋ ಚಾಲಕರು ಹಾಗೂ ಪ್ರಯಾಣಿಕರು ಈ ಆಪ್ ಅನ್ನು ಡೌನ್ಲೋಡ್ ಮಾಡುವ ಮುಖಾಂತರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.ಬಪ್ಪಳಿಗೆಯಲ್ಲಿನ ಮಾರಿಯಮ್ಮ ಗುಡಿಗೆ ಅಂಬಿಕಾದ ವತಿಯಿಂದ 3 ಲಕ್ಷ ರು. ವೆಚ್ಚದಲ್ಲಿ ಶೀಟ್ ಅಳವಡಿಕೆ ಮಾಡಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಇದ್ದರು.