ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗಡಿಜಿಲ್ಲೆ ಚಾಮರಾಜನಗರದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಗಿದೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಧುಮುಕಿದ ಮಳೆರಾಯ ಎಡಬಿಡದೇ ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಚಾಮರಾಜನಗರ ತಾಲೂಕಿನ ಮರಿಯಾಲ, ಹರದನಹಳ್ಳಿ, ಉತ್ತುವಳ್ಳಿ ಭಾಗದಲ್ಲಿ ಜೋರು ಮಳೆಯಾಗಿದೆ.ದಿಢೀರನೇ ಮಳೆ ಎರಗಿದ ಪರಿಣಾಮ ವಾಹನ ಸವಾರರು ಮಳೆಯಲ್ಲಿ ಸಿಲುಕಿ ಪರದಾಡಿದರು. ಚಾಮರಾಜನಗರಕ್ಕೆ ಪ್ರವೇಶಿಸುವ ಮುನ್ನ ಮೂಡಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡಡಿ ಗುಂಡಿಗಳಾಗಿದ್ದು ಭಾರೀ ವಾಹನಗಳು ಕೂಡ ಸಂಚರಿಸಲು ಪ್ರಯಾಸಪಟ್ಟರು.
ಕೊಚ್ಚಿ ಹೋದ ಬೆಳೆ:ಜೋರು ಮಳೆಗೆ ಕೊಚ್ಚಿಹೋದ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ, ಹತ್ತಿ ಬೀಜಗಳು ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕೊಚ್ಚಿಹೋದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಗ್ರಾಮಗಳಲ್ಲಿ ನಡೆದಿದೆ. ಹಿರೇಬೇಗೂರಿನ ಚೇರ್ಮನ್ ಮಧು, ರಾಜೇಶ್ ಸೇರಿದಂತೆ ಹತ್ತಾರು ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಮಳೆ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಹಿರೇಬೇಗೂರಲ್ಲಿ ಟೊಮೊಟೊ ಪೈರು ಕೂಡ ಕೊಚ್ಚಿ ಹೋಗಿದ್ದು ವೀರಭದ್ರಪ್ಪ 1 ಎಕರೆಗೆ ಹಾಕಿದ್ದ ಟೊಮ್ಯಾಟೊ ಪೈರು ಮಳೆ ಪಾಲಾಗಿದೆ. ಚೇರ್ಮನ್ ಮಧು ಅವರು 8 ಬ್ಯಾಗ್ ಸೂರ್ಯಕಾಂತಿ ಬಿತ್ತಿದ್ದರು ಈಗ ಎಲ್ಲವೂ ಕೊಚ್ಚಿಹೋಗಿದ್ದು ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ. ಬಂಡಳ್ಳಿ ಸುತ್ತಮುತ್ತ ಮಳೆಹನೂರು: ಬಂಡಳ್ಳಿ ಸುತ್ತಮುತ್ತ ಜೋರು ಮಳೆಯಾದ ಕಾರಣ ಹಳ್ಳಕೊಳ್ಳ ತುಂಬಿವೆ. ಹನೂರು ತಾಲೂಕಿನ ಬಂಡಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿದ್ದು ಕೆರೆ ಕಟ್ಟೆಗಳು ತುಂಬಿವೆ.ಸಗರಿ ಗದರಿದ ಕೃಷಿ ಚಟುವಟಿಕೆ:
ಬಂಡಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ಬಿಳುತ್ತಿರುವ ಜೋರು ಮಳೆಯಿಂದ ಕಳ್ಳ ಕೊಳ್ಳಗಳು ತುಂಬಿ ಹರಿದಿದೆ. ಮಳೆಯಿಂದ ಗ್ರಾಮದ ಕೆರೆ ಅರ್ಧದಷ್ಟು ತುಂಬಿದೆ. ಬಂಡಳ್ಳಿ ಗ್ರಾಮದ ಹಲವಾರು ತಿಂಗಳುಗಳಿಂದ ಮಳೆ ಇಲ್ಲದೆ ಬರಿದಾಗಿದ್ದ ಗ್ರಾಮದ ದೊಡ್ಡ ಕೆರೆಗೆ ಕಳೆದ ಎರಡು ದಿನಗಳಿಂದ ಬಿದ್ದ ಜೋರು ಮಳೆಯಿಂದ ಕೆರೆಯ ಅರ್ಧದಷ್ಟು ತುಂಬಿರುವುದರಿಂದ ಗ್ರಾಮದ ಜನ ಜಾನುವಾರಗಳಿಗೆ ಮತ್ತು ಸುತ್ತಮುತ್ತಲಿನ ಜಮೀನುಗಳು ಸೇರಿದಂತೆ ಗ್ರಾಮದ ಬೋರ್ವೆಲ್ ಗಳ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಿದೆ ಹೀಗಾಗಿ ರೈತರು ಸಹ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.