ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ಬೂದನೂರು ಗ್ರಾಮ ಪಂಚಾಯ್ತಿಯಲ್ಲಿ ಅಕ್ರಮ ನಡೆದಿದ್ದು ಅದರ ಸಂಪೂರ್ಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಬ್ಯಾನರ್ಗೆ ರಕ್ತ ಚೆಲ್ಲಿ ನಗರದಲ್ಲಿ ಸೋಮವಾರ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ಎದುರು ಸೇರಿದ ಕಾರ್ಯಕರ್ತರು ತಮ್ಮ ಬೆರಳನ್ನು ಕೊಯ್ದು ರಕ್ತ ತೆಗೆದು ಬ್ಯಾನರ್ಗೆ ಸವರಿ ಧರಣಿ ನಡೆಸಿದರು. ಕಳೆದ ನಾಲ್ಕು ವರ್ಷದಿಂದ ಬೂದನೂರು ಗ್ರಾಪಂನಲ್ಲಿ ಆಡಳಿತ ಮಂಡಳಿ ಅಧಿಕಾರಿಗಳು ನಿಯಮಬಾಹಿರವಾಗಿ ಅಕ್ರಮ, ಭ್ರಷ್ಟಾಚಾರ ನಡೆಸಿದ್ದು, ಇದರ ಬಗ್ಗೆ ಜೂ.೧೦ರಂದು ತಮ್ಮ ಕಚೇರಿ ಎದುರು ಪ್ರತಿಭಟನೆ ನಡೆಸಿ ೧೫ ವಿಷಯಗಳ ಕುರಿತು ಮನವಿ ಸಲ್ಲಿಸಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾವು ನೇಮಿಸಿದ್ದ ಸಮಿತಿ ಯಾವುದೇ ವಿಚಾರಣೆ ನಡೆಸಿಲ್ಲದ ಕಾರಣ ಅವ್ಯವಹಾರ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಸಾರ್ವಜನಿಕ ಸಹಭಾಗಿತ್ವ, ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬೂದನೂರು ಗ್ರಾಮ ಪಂಚಾಯ್ತಿ ವಿಫಲವಾಗಿದೆ. ಗ್ರಾಮದಲ್ಲಿ ನಿರ್ಮಾಣವಾಗಿರುವ ಆಶ್ರಯ ಬಡಾವಣೆಗೆ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರ ನಾಮಕರಣ ಮಾಡಲು ಫಲಾನುಭವಿಗಳ ಪರವಾಗಿ ಮನವಿ ನೀಡಿದರೆ, ಪ್ರಭಾವ, ಅಮಿಷಗಳಿಗೆ ಒಳಗಾಗಿರುವ ಸದಸ್ಯರು ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಹೆಸರನ್ನು ನಾಮಕರಣ ಮಾಡಿ ಬಳಿಕ ಮತ್ತೆ ಪರಿಷ್ಕರಿಸುವ ಭರವಸೆ ನೀಡಿ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ಕರೆಯದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಗ್ರಾಪಂ ಅಧ್ಯಕ್ಷೆ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು ಸೇರಿ ಬೂದನೂರು ಸ.ನಂ.೩೮೨, ೩೮೨/೭ ರ ಭೂಮಿಯ ಆರ್ಟಿಎಸ್ ಇಂಡೀಕರಣವಾಗಿಲ್ಲದಿದ್ದರೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನಕ್ಕೆ ಖಾಸಗಿ ವ್ಯಕ್ತಿಯ ನಿವೇಶನದ ಸಂಖ್ಯೆ ಬಳಸಿ ಕ್ರಮ ಸಂಖ್ಯೆಯ ಇ-ಸ್ವತ್ತು ತೆಗೆದು ಅಕ್ರಮ ಹಾಗೂ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ. ಹುಕ್ಕಾಬಾರ್ಗೆ ಅನಧಿಕೃತವಾಗಿ, ಅನ್ಯಕ್ರಾಂತವಾಗಿಲ್ಲದ ಹಾಗೂ ಸ್ವತ್ತಿನ ನೋಂದಣಿಗೆ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಕಿಡಿಕಾರಿದರು.
ಘನತ್ಯಾಜ್ಯ ಘಟಕ ನಿರ್ಮಿಸಲು ಅಗತ್ಯ ಭೂಮಿ ಮಂಜೂರಾಗಿ ಎರಡು ವರ್ಷ ಕಳೆದರೂ ಕ್ರಮ ವಹಿಸಲು ಮೀನಾಮೇಷ ಎಣಿಸಲಾಗುತ್ತಿದೆ. ಅಲ್ಲದೇ, ಬೂದು ಬಣ್ಣ ನೀರು ನಿರ್ವಹಣೆಗೆ ಚರಂಡಿ ನಿರ್ಮಿಸಲು ಮಂಜೂರಾಗಿರುವ ಅನುದಾನದಲ್ಲಿ ಸರ್ಕಾರ ನಿರ್ದೇಶನ ಮಾಡಿರುವಂತೆ ಕಾಮಗಾರಿ ನಡೆಸದೆ ನಿಯಮ ಉಲ್ಲಘಿಸಿ ಹಣ ದುರುಪಯೋಗ ಮಾಡಲಾಗಿದೆ. ಇದರಿಂದ ೧೦ ಲಕ್ಷ ಕಾಮಗಾರಿ ಮೊತ್ತ ದುರ್ಬಳಕೆಯಾಗಿದೆ ಎಂದು ದೂರಿದರು.ಆಹೋರಾತ್ರಿ ಧರಣಿ ಆರಂಭ:
ಸಮಿತಿ ಅಧ್ಯಕ್ಷ ಬಿ.ಕೆ.ಸತೀಶ್ ಮಾತನಾಡಿ, ಪಂಚಾಯ್ತಿಯಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಿ ತನಿಖೆ ನಡೆಸುವವರೆಗೂ ಸೋಮವಾರದಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದೇವೆ. ಈಗಾಗಲೇ ಪ್ರತಿಭಟನಾ ಬ್ಯಾನರ್ಗೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದೇವೆ, ಇದಕ್ಕೆ ಪೊಲೀಸರು ಅಡ್ಡಿ ಪಡಿಸಿದರೂ ಲೆಕ್ಕಿಸುವುದಿಲ್ಲ. ನಮ್ಮ ಹೋರಾಟ ಪ್ರತಿದಿನ ಹೋರಾಟ ವಿಭಿನ್ನತೆಯಿಂದ ಕೂಡಿರಲಿದೆ. ಇದಕ್ಕೆ ಅವಕಾಶ ಮಾಡಿಕೊಡದೇ ಮೇಲಾಕಾರಿಗಳು ತಕ್ಷಣ ನಮ್ಮ ಗ್ರಾಮ ಪಂಚಾಯ್ತಿಯಲ್ಲಿನ ಅಕ್ರಮದಲ್ಲಿ ಭಾಗಿಯಾಗಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಚ್.ಡಿ.ಜಯರಾಂ, ಸವಿತಾ, ವಿಜಯಾ, ಮಂಗಳಾ, ಶಿವರಾಜು, ಕಾರ್ತಿಕ್ ಭಾಗವಹಿಸಿದ್ದರು.