ಕಂಪ್ಲಿ: ಪಟ್ಟಣದ ಮುದ್ದಾಪುರ ರಸ್ತೆಯ ವಿಜಯನಗರ ಕಾಲುವೆ ದಡದಲ್ಲಿರುವ ಖದೀಂ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದವರು ವಿಶೇಷ ಪ್ರಾರ್ಥನೆ ನೆರವೇರಿಸಿದರು.

ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರುಫ್ ಆಜಂ ಸಾಹೇಬ್ ಸಜ್ಜಾದೆ ನಶೀನ್ ದಿವಾನಖಾನೆ ಮಾತನಾಡಿ, ಮಹ್ಮದ್ ಪೈಗಂಬರ್ ಅವರ ತತ್ವ, ಆದರ್ಶಗಳು ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಬಕ್ರೀದ್ ಹಬ್ಬವು ತ್ಯಾಗ, ಬಲಿದಾನ, ಸಹೋದರತ್ವ ಮತ್ತು ಮಾನವೀಯತೆಯ ಸಂಕೇತವಾಗಿದೆ. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪರಸ್ಪರ ಪ್ರೀತಿ ಬೆಳೆಸುವಲ್ಲಿ ಇಂತಹ ಹಬ್ಬಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಧರ್ಮದ ಹೆಸರಿನಲ್ಲಿ ದ್ವೇಷವಲ್ಲ, ಪ್ರೀತಿ ಮತ್ತು ಸಹಾನುಭೂತಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಸಮಾಜದ ಎಲ್ಲ ವರ್ಗದ ಜನರು ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ದೇಶದಲ್ಲಿ ಏಕತೆ ಮತ್ತು ಶಾಂತಿ ನೆಲೆಸುತ್ತದೆ ಎಂದು ಹೇಳಿದರು.

ಗುರುಗಳಾದ ಸೈಯ್ಯದ್ ಷಾಹ್ ಉಮೇಶ್ ಖಾದ್ರಿ, ಸೈಯ್ಯದ್ ಷಾಹ್ ಮುಕ್ತಿಯಾರ್ ಖಾದ್ರಿ, ಖದೀಂ ಈದ್ಗಾ ಕಮಿಟಿ ಅಧ್ಯಕ್ಷ ಎಂ. ಇಸ್ಮಾಯಿಲ್, ಉಪಾಧ್ಯಕ್ಷ ಮೆಹಬೂಬ್, ಕಾರ್ಯದರ್ಶಿ ಬಿ. ಜಾಫರ್ ಸಾದಿಕ್, ಕೋಶಾಧ್ಯಕ್ಷ ಕರೀಮ್, ಸದಸ್ಯರಾದ ನೂರ್ ಅಹಮದ್, ನಜೀರ್ ಖಲೀಲ್, ರಿಯಾಜ್, ಮಹಬಾಷಾ, ಮೈನುದ್ದೀನ್, ಎಂ. ಮೆಹಮೂದ್, ಎಂ. ಶಬ್ಬೀರ್ ಉಪಸ್ಥಿತರಿದ್ದರು.


ಇದೇ ವೇಳೆ ಹೊಸಪೇಟೆ ಬೈಪಾಸ್ ರಸ್ತೆಯ ಈದ್ಗಾ ಮೈದಾನದಲ್ಲಿಯೂ ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಕಂಪ್ಲಿ ಕೋಟೆಯ ವಿವಿಧ ಮಸೀದಿಗಳ ಮುತುವಲ್ಲಿಗಳು, ಈದ್ಗಾ ಕಮಿಟಿಯ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿದ್ದರು.