ಕುಷ್ಟಗಿ: ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ಹಣ ವಸೂಲಿ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಶಾಸಕರು, ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ತೋಟದ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಪಾಲಿನ ಆಶಾಕಿರಣವಾಗಬೇಕಾದ ಸರ್ಕಾರಿ ಆಸ್ಪತ್ರೆ ಬಡವರ ಜೀವ ಹಿಂಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು ವಿಪರ್ಯಾಸದ ಸಂಗತಿಯಾಗಿದೆ ಎಂದರು.ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಕಲಾ ಮಾನವಿಯತೆ ಮರೆತು ಗರ್ಭಿಣಿಯರ ಕುಟುಂಬಸ್ಥರಿಂದ 5 ಸಾವಿರ ರು. ಪಡೆದಿದ್ದು ಈ ಕುರಿತು ನಮ್ಮಲ್ಲಿ ವಿಡಿಯೋ ದಾಖಲೀಕರಣವಿದೆ ಎಂದರು.
ಹಣ ನೀಡಿದಲ್ಲಿ ಮಾತ್ರ ಉತ್ತಮ ಚಿಕಿತ್ಸೆ ಸಿಗುತ್ತಿದ್ದು, ಇಲ್ಲವಾದಲ್ಲಿ ಮುಂದಿನ ಆಸ್ಪತ್ರೆಗೆ ಕಳಿಸುವ ಪದ್ಧತಿ ಅಳವಡಿಸಿಕೊಂಡಿದ್ದಾರೆ ಇಲ್ಲಿಯ ವೈದ್ಯರು ಎಂದರು.ದೂರು ನೀಡಿದರೂ ಪ್ರಯೋಜನವಿಲ್ಲ:
ಈ ಕುರಿತು ಈಗಾಗಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ. ಲಿಂಗರಾಜು ಅವರಿಗೆ ವಿಡಿಯೋ ಸಮೇತ ಪೆಂಡ್ರೈವ್ ಕೊಟ್ಟು ದೂರು ಸಲ್ಲಿಸಿದರೂ ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ತನಿಖೆ ಕೈಗೊಂಡು ಬಡವರ ಜೀವದ ಜೊತೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದಪ್ಪ ಕಲಾಲಬಂಡಿ ಮಾತನಾಡಿ, ಆರೋಗ್ಯ ಸಮಿತಿಯ ಅಧ್ಯಕ್ಷರಾಗಿರುವ ಸ್ಥಳಿಯ ಶಾಸಕ ದೊಡ್ದನಗೌಡ ಪಾಟೀಲ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ಅಲ್ಲಿನ ವಾಸ್ತವ ಅಂಶ ಗಮನಿಸಿಕೊಂಡು ಬಡವರ ಆರೋಗ್ಯದ ಕಡೆ ಗಮನ ಕೊಟ್ಟು ಚಿಕಿತ್ಸೆ ಕೊಡುವಂತೆ ವೈದ್ಯರಿಗೆ ಸಲಹೆ ಸೂಚನೆ ಕೊಡುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮಹಾಂತೇಶ ಅಮರಾವತಿ, ಮರಿಯಪ್ಪ ಹಕ್ಕಲ್ ಇತರರು ಇದ್ದರು.