ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಆಗಸ್ಟ್ ಮಾಸದ ಧಾರ್ಮಿಕ ಪ್ರವಾಸ ಹಾಗೂ ಶ್ರಾವಣ ಮಾಸದ ವಿಶೇಷ ಅನುಷ್ಠಾನ ಕಾರ್ಯಕ್ರಮಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.ಆ.2ರಿಂದ 4ರವರೆಗೆ ಬಳ್ಳಾರಿ ಜಿಲ್ಲೆಯ ಶಿರಗುಪ್ಪದಲ್ಲಿ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಹಾಗೂ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ. ಆ.5ರಂದು ಗಂಗಾವತಿಯಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.
ಆ.6ರಂದು ಬಾಗಲಕೋಟೆ ಮತ್ತು ಗದ್ದನಕೇರಿ ಕ್ರಾಸ್ ಪ್ರದೇಶಗಳ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, 9ರಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವೇದಾಗಮ ಶಿಬಿರದ ಸಮಾರೋಪ ಅಂಗವಾಗಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ ಸಾಂಗೋಲಾದಲ್ಲಿ ನೂತನ ಶಿವಕೃಪಾ ಅಂಗಡಿಯ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಲಿದ್ದಾರೆ.ಆಗಸ್ಟ್ 10ರಂದು ಕಾಗವಾಡ ತಾಲೂಕಿನ ಪರೀದಖಾನವಾಡಿಯಲ್ಲಿ ನೂತನ ಲಕ್ಷ್ಮೀಭವನದ ಲೋಕಾರ್ಪಣೆ, 12ರಂದು ಚಿಕ್ಕೋಡಿ ತಾಲೂಕಿನ ಯಡೂರಿನಲ್ಲಿ ಅಮಾವಾಸ್ಯೆ ಪೂಜೆ ಹಾಗೂ ಭಕ್ತರಿಗೆ ದರ್ಶನ, 13ರಂದು ರಾಯಬಾಗ ತಾಲೂಕಿನ ಸವಸುದ್ದಿಯಲ್ಲಿ ಹುಲಿಕಾಂತೇಶ್ವರ ಮೂರ್ತಿ ಸ್ಥಾಪನೆ ಹಾಗೂ ಕಲಶಾರೋಹಣ, 14ರಂದು ಬಬಲೇಶ್ವರ ತಾಲೂಕಿನ ಕಾಕಂಡಕಿಯಲ್ಲಿ ಮಲ್ಲಿಕಾರ್ಜುನ ದೇವಾಲಯದಲ್ಲಿ ನಂದಿ ಮೂರ್ತಿ ಪ್ರಾಣಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅದೇ ದಿನ ಸಂಜೆ ಜಮಖಂಡಿ ತಾಲೂಕಿನ ಹಿಪ್ಪರಗಿ ಹಿರೇಮಠದಲ್ಲಿ ಶ್ರಾವಣ ಮಾಸದ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಆ.16ರಿಂದ ಸೆಪ್ಟೆಂಬರ್ 11ರವರೆಗೆ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನಡೆಯುವ ಶ್ರಾವಣ ಮಾಸದ 16ನೇ ವರ್ಷದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನವನ್ನು ಜಗದ್ಗುರುಗಳು ನೆರವೇರಿಸಲಿದ್ದಾರೆ. ಈ ಅವಧಿಯಲ್ಲಿ ಪ್ರತಿದಿನ ಬೆಳಗ್ಗೆ 7 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ 6 ಗಂಟೆಗೆ ಶ್ರೀ ಅಕ್ಕ ಮಹಾದೇವಿ ಪುರಾಣ ಪ್ರವಚನ ನಡೆಯಲಿದೆ.
ಆ.20ರಂದು ಶ್ರೀಶೈಲದಲ್ಲಿ ಸಾಮೂಹಿಕ ಅಯ್ಯಾಚಾರ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮ ಜರುಗಲಿದೆಯೆಂದು ಶ್ರೀಶೈಲ ಪೀಠದ ವಾರ್ತಾಧಿಕಾರಿ ವೇ.ಮೂ.ವಸ್ತçದ ಬಸಯ್ಯನವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.