ಹಾಸನ: ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷದ ತುಂಬಿದ ಸವಿ ನೆನಪಿಗಾಗಿ ನಗರದ ಡೇರಿ ವೃತ್ತದಲ್ಲಿ ನಿರ್ಮಾಣ ಮಾಡಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವ ಮಂಟಪದ ಸುತ್ತಮುತ್ತ ಕೆ. ಶಿಪ್‌ನವರು ನಿರ್ಮಿಸಿದ್ದ ಜಗುಲಿಯಾಕಾರದ ನಿರ್ಮಾಣವನ್ನು ತೆರವುಗೊಳಿಸಲಾಗಿದೆ.

ಈ ಮೊದಲು ಮಂಟಪದ ಸುತ್ತಲೂ ಹೆಚ್ಚುವರಿಯಾಗಿ ಜಗುಲಿ ಆಕಾರದಲ್ಲಿ ಸಿಮೆಂಟ್‌ನಿಂದ ಸುಮಾರು ೨ ಅಡಿ ಎತ್ತರವಾಗಿ ನಿರ್ಮಾಣ ಮಾಡಲಾಗಿತ್ತು. ಇದರಿಂದ ಹೆಚ್ಚುವರಿಯಾಗಿ ಮಾಡಿದ್ದ ನಿರ್ಮಾಣವು, ಸುತ್ತಲೂ ರಸ್ತೆಯನ್ನು ಆಕ್ರಮಿಸಿಕೊಂಡಿತ್ತು. ಮಾತ್ರವಲ್ಲ ರೈಲ್ವೆ ನಿಲ್ದಾಣ, ರಿಂಗ್ ರಸ್ತೆ, ಅರಸೀಕೆರೆ ರಸ್ತೆ ಮತ್ತು ಬೆಂಗಳೂರು ಕಡೆಯಿಂದ ಬರುವ ಹೋಗುವ ವಾಹನ ಸವಾರರು ಹಾಗೂ ಚಾಲಕರಿಗೆ ತೀವ್ರ ತೊಂದರೆಯಾಗಿತ್ತು. ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುವ ಅಪಾಯ ಇತ್ತು. ಈ ಬಗ್ಗೆ ಅನೇಕರು ಸ್ಥಳೀಯ ಶಾಸಕ ಎಚ್. ಪಿ. ಸ್ವರೂಪ್ ಪ್ರಕಾಶ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಶಿಪ್ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಸುಪ್ರಿಯಾ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹೇಮಂತ್ ಹಾಗೂ ಸಂಚಾರಿ ಠಾಣೆ ಇನ್ಸ್‌ಪೆಕ್ಟರ್‌ ದಯಾನಂದ್ ಮೊದಲಾದವರೊಂದಿಗೆ ಸಭೆ ನಡೆಸಿದ ಶಾಸಕರು, ಜನರು ಹಾಗೂ ವಾಹನ ಚಾಲಕರಿಗೆ ಒಂದು ರೀತಿಯಲ್ಲಿ ಅಡ್ಡಿಯಾಗಿರುವ ಹೆಚ್ಚುವರಿ ನಿರ್ಮಾಣವನ್ನು ಕೂಡಲೇ ತೆರವು ಮಾಡುವಂತೆ ಸೂಚಿಸಿದ್ದರು. ಶಾಸಕರ ಸೂಚನೆ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು, ಕೂಡಲೇ ಹೆಚ್ಚುವರಿ ನಿರ್ಮಾಣವನ್ನು ತೆರವುಗೊಳಿಸಿದರು. ಇದರಿಂದ ವಾಹನ ಸಂಚಾರಕ್ಕೆ ಮುಕ್ತ ಅವಕಾಶ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ರಿಂಗ್ ರಸ್ತೆ ಹಾಗೂ ಡೇರಿ ವೃತ್ತದ ಕಡೆಯಲ್ಲಿದ್ದ ಕಬ್ಬಿಣದ ಗ್ರಿಲ್ ಬೇಲಿಯನ್ನು ತೆರವುಗೊಳಿಸಿ ಡಾಂಬರ್‌ ಹಾಕುವ ಮೂಲಕ ಸಂಚಾರಕ್ಕೆ ಇದ್ದ ತೊಂದರೆಯನ್ನು ನಿವಾರಣೆ ಮಾಡಲಾಗಿದೆ.