ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಒಳಮೀಸಲಾತಿಯ ಅವೈಜ್ಞಾನಿಕ ಹಂಚಿಕೆ ಮತ್ತು ಅವೈಜ್ಞಾನಿಕ ರೋಸ್ಟರ್ ಬಿಂದು ಆದೇಶ ಜಾರಿಯ ಮೂಲಕ ಬಂಜಾರ ಸಮಾಜದ ಶಿಕ್ಷಣ ಮತ್ತು ಉದ್ಯೋಗದ ಹಕ್ಕು ಕಸಿದುಕೊಂಡು ಸೇಡಿನ ರಾಜಕಾರಣ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಪ್ರತಿ ಜಿಲ್ಲೆಯಲ್ಲಿ ಜನಾಂದೋಲನಕ್ಕಾಗಿ ನಮ್ಮ ಮೀಸಲಾತಿ ನಮ್ಮ ಹಕ್ಕು ಜನ ಜಾಗೃತಿ ಸಭೆ ನಡೆಸಲಾಗುವುದು ಎಂದು ಬಿಜೆಪಿ ಮಾಜಿ ಸಚಿವ ಪ್ರಭು ಚೌಹಾಣ್ ಹಾಗೂ ಮಾಜಿ ಸಂಸದ ಡಾ.ಉಮೇಶ ಜಾಧವ ಹೇಳಿದರು.ನಗರದಲ್ಲಿ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 28ರಿಂದ ಕಲಬುರಗಿಯಿಂದ ಜನ ಜಾಗೃತಿ ಆರಂಭಗೊಂಡಿದ್ದು, ರಾಜ್ಯಾದ್ಯಂತ ಜನ ಜಾಗೃತಿ ಸಭೆ ನಡೆಸಲಾಗುವುದು ಎಂದ ಅವರು, ಕಾಂಗ್ರೆಸ್ ಹಟಾವೋ- ಬಂಜಾರ ಬಚಾವೋ ಮತ್ತು ತಾಂಡ ಬಚಾವೋ ಘೋಷಣೆಯೊಂದಿಗೆ ರಾಜ್ಯಾದ್ಯಂತ ಸಭೆ ನಡೆಯಲಿದೆ ಎಂದರು.ದೇಶದಲ್ಲಿ ಅರ್ಹ ಸಮುದಾಯಗಳಿಗೆ ನ್ಯಾಯಯುತವಾದ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ಪ್ರಸ್ತುತ ಸಾಲಿನ ನಿಖರವಾದ ಪ್ರಾಯೋಗಿಕ ದತ್ತಾಂಶಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಹಿಂದೆ ನಡೆದ ಜನಗಣತಿಗಳ ದತ್ತಾಂಶಗಳು ಪ್ರಸ್ತುತ ಪರಿಸ್ಥಿತಿಗೆ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ. ಈ ಕೊರತೆಯಿಂದಾಗಿ ಹಲವು ಸಮುದಾಯಗಳಿಗೆ ಸಿಗಬೇಕಾದ ಸೂಕ್ತ ಪ್ರಾತಿನಿಧ್ಯ ಮತ್ತು ಮೀಸಲಾತಿ ಸೌಲಭ್ಯಗಳು ವಂಚಿತವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸ್ಪಷ್ಟಪಡಿಸುವ ಸುಮಾರು 1,800 ಪುಟಗಳ ವಿಸ್ತೃತ ವರದಿಯನ್ನು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಆಗ ಮಾತ್ರ ಎಲ್ಲರಿಗೂ ವಸ್ತುಸ್ಥಿತಿಯ ಅರಿವಾಗುತ್ತದೆ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.ಶಾಸಕ ಪ್ರಭು ಚವ್ಹಾಣ್ ಮಾತನಾಡಿ, ಒಳಮೀಸಲಾತಿ ಬಗ್ಗೆ ಸರ್ಕಾರವು ತಾರತಮ್ಯ ಮಾಡಿದ್ದು, ಅದನ್ನು ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲಗೊಂಡಿದ್ದು, ಬಂಜಾರ ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿ ಬಂಜಾರ ಸಮಾಜ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷವು ಮತ ಬ್ಯಾಂಕಗಾಗಿ ಸಮಾಜವನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ನ್ಯಾಯವನ್ನು ಒದಗಿಸಿಕೊಟ್ಟಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಮಣಿಕಂಠ ರಾಠೋಡ, ಎಸ್.ಪಿ.ಲಿಂಬ್ಯನಾಯಕ್, ಮಹೇಂದ್ರ ನಾಯಕ್, ಹೂವಪ್ಪ ರಾಠೋಡ, ನಿಂಗಪ್ಪ ಚವ್ಹಾಣ್, ರತ್ನಪ್ಪ ರಾಠೋಡ ಇದ್ದರು.