ಪ್ರೀತಿಯನ್ನು ನಿರಾಕರಿಸಿ ಬೇರೆ ಯುವಕನ ಜತೆ ಮದುವೆಯಾಗಿದ್ದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರೀತಿಯನ್ನು ನಿರಾಕರಿಸಿ ಬೇರೆ ಯುವಕನ ಜತೆ ಮದುವೆಯಾಗಿದ್ದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ, ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಮಗೊಂಡನಹಳ್ಳಿ ನಿವಾಸಿ ನಂದಿನಿದಾಸ್ (18) ಚಾಕು ಇರಿತಕ್ಕೊಳಗಾದ ಯುವತಿ. ಕೃತ್ಯ ಎಸಗಿದ ನವಾಜ್ (18) ಎಂಬಾತ ಚಾಕು ಇರದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಬ್ಬರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಯುವತಿ ತಂದೆ ಯಾದವ್ ದಾಸ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಪಶ್ಚಿಮ ಬಂಗಾಳ ಸಿಲಿಗುರಿ ಮೂಲದ ಯಾದವ್‌ ದಾಸ್‌ ಕೆಲ ವರ್ಷಗಳಿಂದ ನಗರದ ರಾಮಗೊಂಡನಹಳ್ಳಿ ವಾಸವಾಗಿದ್ದಾರೆ. ಯಾದವ್‌ ದಾಸ್‌ ತಂದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಮನೆಗೆಲಸ ಮಾಡುತ್ತಿದ್ದಾರೆ. ಇಬ್ಬರು ಸಹೋದರರೊಂದಿಗೆ ಯುವತಿ ವಾಸವಾಗಿದ್ದಾರೆ. ಈ ಮಧ್ಯೆ ನಲ್ಲೂರು ಹಳ್ಳಿಯ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಂದಿನಿ ದಾಸ್‌ಗೆ ನವಾಜ್‌ನ ಪರಿಚಯವಾಗಿದ್ದು, ಇಬ್ಬರು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಮಧ್ಯೆ ಆರೋಪಿ ಅರ್ಧದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಿ ನಲ್ಲೂರು ಹಳ್ಳಿಯಲ್ಲಿ ಟಾಟಾ ಏಸ್‌ ಚಾಲಕನಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋದರರನ್ನು ಕೂಡಿ ಹಾಕಿ ಹತ್ಯೆಗೆ ಯತ್ನ:

ಕೆಲ ದಿನಗಳ ಹಿಂದೆ ನಂದಿನಿದಾಸ್‌ಗೆ ಬೇರೆ ಜತೆ ಯುವಕನ ಜತೆ ಮದುವೆಯಾಗಿ ವಿಚಾರ ತಿಳಿದ ಆರೋಪಿ ಗುರುವಾರ ಬೆಳಗ್ಗೆ ಯುವತಿ ಮನೆಗೆ ಬಂದಿದ್ದಾನೆ. ಆ ವೇಳೆ ಯುವತಿ ಪೋಷಕರು ಕೆಲಸಕ್ಕೆ ಹೋಗಿದ್ದು, ಇಬ್ಬರು ಸಹೋದರನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದ ಆರೋಪಿ ಜಗಳ ಮಾಡಿದ್ದಾನೆ.ನಂತರ ಅಡುಗೆ ಕೋಣೆಗೆ ಹೋಗಿ ಗ್ಯಾಸ್‌ ಆನ್‌ ಮಾಡಿದ್ದಾನೆ. ಗಾಬರಿಗೊಂಡ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ಆಗ ಏಕಾಏಕಿ ಚಾಕುವಿನಿಂದ ಆಕೆಯ ಕುತ್ತಿಗೆ, ಕೈ, ತೊಡೆ ಹಾಗೂ ಪಕ್ಕೆಲುಬುಗಳಿಗೆ ಇರಿದಿದ್ದಾನೆ. ಬಳಿಕ ಈತನೂ ಕುತ್ತಿಗೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಇಬ್ಬರಿಗೂ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾರೆ. ಕೂಗಾಟದ ಶಬ್ಧ ಕೇಳಿ ಮನೆಗೆ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿ ಕೂಡ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.