- ಬಿಎಸ್‌ವೈ, ಬಿವೈವಿ ಅವಶ್ಯಕತೆ ಇಲ್ಲವೆಂದು ಬಹಿರಂಗವಾಡಿ ಹೇಳಿ ನೋಡೋಣ ಎಂದು ಸವಾಲು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರಗೆ ಬದಲಾವಣೆ ಮಾಡಬೇಕೆಂದು ಯಾರೆಲ್ಲಾ ಹೇಳುತ್ತಿದ್ದೀರಲ್ಲ ನಿಮಗೆ ತಾಕತ್ತಿದ್ದರೆ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅ‍ಶ್ಯಕತೆಯೇ ಇಲ್ಲವೆಂಬು ಬಹಿರಂಗವಾಗಿ ಹೇಳಿ ನೋಡೋಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಇತರರಿಗೆ ಸವಾಲು ಹಾಕಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಸದಾನಂದಗೌಡರ ಆಡಿಯೋ ವೈರಲ್ ಆದ ವಿಚಾರದ ಬಗ್ಗೆ ಮಾತನಾಡಿದ ಅವರು, ವಿಜಯೇಂದ್ರ ಬದಲಾವಣೆ ಮಾಡಬೇಕೆನ್ನುತ್ತೀರಲ್ಲಾ ಅದೇ ಯಡಿಯೂರಪ್ಪ ತ್ಯಾಗ ಮಾಡಿದ್ದಕ್ಕೆ ನೀವು ಸಿಎಂ ಆಗಿದ್ದನ್ನು ಮರೆಯಬೇಡಿ. ನಿಮಗೆ ತಾಕತ್ತಿದ್ದರೆ ಯಡಿಯೂರಪ್ಪ, ವಿಜಯೇಂದ್ರ ಅವಶ್ಯಕತೆಯೇ ಇಲ್ಲವೆಂದು ಬಹಿರಂಗವಾಗಿ ಹೇಳಿ ನೋಡೋಣ. ಇನ್ನು ಮುಂದೆ ಇಂತಹ ಷಡ್ಯಂತ್ರಗಳನ್ನು ಮಾಡಿದರೆ ನಾವ್ಯಾರೂ ಸಹಿಸುವುದೂ ಇಲ್ಲ. ಯಡಿಯೂರಪ್ಪನವರು ಕಟ್ಟಿದ ಪಾರ್ಟಿಗೆ ಇಂತಹ ಕೆಲವರು ಬಂದಿದ್ದಾರೆ ಎಂದು ಹರಿಹಾಯ್ದರು.

ವಿಜಯೇಂದ್ರ 2 ವರ್ಷ ಉತ್ತಮ ಸಂಘಟನೆಯನ್ನು ಮಾಡಿದ್ದಾರೆ. ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ರಾಜ್ಯದಲ್ಲಿ ಬಿಎಸ್‌ವೈ ಪಕ್ಷವನ್ನು ಸಂಘಟಿಸಿ, ಕಟ್ಟಿ ಬೆಳೆಸದಿದ್ದರೆ ಈಗ ಮಾತನಾಡುತ್ತಿರುವವರು ಯಾರೂ ಅಧಿಕಾರದಲ್ಲೇ ಇರುತ್ತಿರಲಿಲ್ಲ. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಮಾಡಿದ್ದು ಅಮಿತ್ ಶಾ, ಜೆ.ಪಿ.ನಡ್ಡಾ. ರಾಜ್ಯಾಧ್ಯಕ್ಷರು ಜಾತ್ಯತೀತ ವ್ಯಕ್ತಿ ಎಂದು ಅವರು ತಿಳಿಸಿದರು.


ವಿಧಾನ ಪರಿಷತ್ ಚುನಾವಣೆಯಲ್ಲಿ ವಿಜಯೇಂದ್ರಗೆ ಕೆಟ್ಟ ಹೆಸು ತರಲೆಂದೇ ಅಡ್ಡ ಮತದಾನ ಮಾಡಿದರು. ಅನಗತ್ಯವಾಗಿ 3-4 ಜನರು ಅಡ್ಡ ಮತದಾನ ಮಾಡಿದರು. ವಿಜಯೇಂದ್ರ ನೇತೃತ್ವದಲ್ಲೇ 2028ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಹೋಗುತ್ತವೆ. ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೂ ಬರುತ್ತೇವೆ ಎಂದು ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕೆಲವರು ರಾಷ್ಟ್ರೀಯ ನಾಯಕರಿಗೆ ಮಿಸ್ ಗೈಡ್ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರವರೇ ಮುಂದುವರಿಯುತ್ತಾರೆ. ಬಿಎಸ್‌ವೈ ತ್ಯಾಗ ಮಾಡಿದ್ದಕ್ಕೆ ಸದಾನಂದಗೌಡರು ಸಿಎಂ ಆಗಿದ್ದರು. ಒಂದುವೇಳೆ ಬೇಡ ಅಂದಿದ್ದರೆ ಆಗುತ್ತಿದ್ದರಾ? ಒಂದು ವರ್ಷದಿಂದ ನಾನೂ ಮೌನವಾಗಿದ್ದೇವೆ. ಆಂತರಿಕ ವಿಚಾರ ಮಾತನಾಡಬಾರದೆಂದು ಮೌನವಾಗಿದ್ದೆವು. ಈ ರೀತಿ ಹಗುರವಾಗಿ ಹೇಳಿಕೆ ಕೊಟ್ಟರೆ, ವಿಜಯೇಂದ್ರ ಬಗ್ಗೆ ಟೀಕೆ ಮಾಡಿದರೆ ಅದೇ ವೇದಿಕೆಯಲ್ಲೇ ಉತ್ತರ ಕೊಡುತ್ತೇವೆ ಎಂದು ಅವರು ಎಚ್ಚರಿಸಿದರು.

ಯಡಿಯೂರಪ್ಪ ಇದ್ದಿದ್ದಕ್ಕೆ ಕುಮಾರ ಬಂಗಾರಪ್ಪ ಶಾಸಕರಾಗಿರುವುದು. ನಿಮಗೆ ಜಿಪಂ ಸದಸ್ಯನಾಗುವ ಯೋಗ್ಯತೆಯೇ ಇಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಕುಮಾರ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

- - -

(ಫೋಟೋ: ರೇಣುಕಾಚಾರ್ಯ)