ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಮೀಸಲಾತಿ ಎಂಬುದು ಅಸಮಾನತೆಯನ್ನು ನಿವಾರಿಸಿ ಸಮಾನತೆಯೆಡೆಗೆ ತರುವ ಒಂದು ಪ್ರಮುಖ ಸಾಧನ ಎಂಬುವುದನ್ನು ಯಾರು ಮರೆಯಬಾರದೆಂದು ಲೇಖಕ ಡಾ.ರಾಜಪ್ಪ ದಳವಾಯಿ ಹೇಳಿದ್ದಾರೆ.ಕರ್ನಾಟಕ ಮಾನವ ಬಂಧತ್ವ ವೇದಿಕೆ, ಮಹಿಳಾ ಬಂಧುತ್ವ ವೇದಿಕೆ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿ ಏರ್ಪಡಿಸಲಾಗಿದ್ದ ಸಮಕಾಲೀನ ಬಿಕ್ಕಟ್ಟುಗಳು ಮತ್ತು ಸವಾಲುಗಳು ಕುರಿತ ವಿಚಾರದ ಸಂಕಿರಣದಲ್ಲಿ ಅವರು ಮಾತನಾಡಿದರು.
ಅಸಮಾನತೆ ಹೋಗಲಾಡಿಸಲು ಮೀಸಲಾತಿ ಬೇಕೇ ಬೇಕು. ಮೀಸಲಾತಿ ಎಂದರೆ ಅದು ಸಮಾನ ಹಂಚಿಕೆ. ಇಂತಹ ಮೀಸಲಾತಿ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಹೇಳಿದರು.ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಸದ್ಯ ಇರುವ ಮೀಸಲಾತಿ ಶೇ. 50ರ ಮಿತಿಯನ್ನು ತೆಗೆಯುವ ಹಾಗೂ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೆ ತರುವ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ಜಾತಿ ಗಣತಿ ಎಂದರೆ ಅದು ಕೇವಲ ತಲೆಎಣಿಕೆ ಮಾತ್ರವಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆ ವೈಜ್ಞಾನಿಕವಾಗಿಲ್ಲ ಎಂಬುದು ಸುಳ್ಳು ಎಂದು ಹೇಳಿದ ಅವರು, ಕೆಲವುರು ಗಣತಿದಾರರು ನಮ್ಮ ಮನೆಗೆ ಬಂದಿಲ್ಲ. ಹಾಗಾಗಿ, ವರದಿ ಬೇಡ ಎನ್ನುತ್ತಿದ್ದಾರೆ. ಗಣತಿಯಿಂದ ಬಿಟ್ಟು ಹೋಗಿರುವವರು ಈಗಲೂ ಮಾಹಿತಿ ಕೊಡಿ. ಕೆಲವರ ಗಣತಿ ನಡೆದಿಲ್ಲ ಎಂಬ ಮಾತ್ರಕ್ಕೆ ಇಡೀ ವರದಿಯನ್ನೇ ಕಸದ ಬುಟ್ಟಿಗೆ ಎಸೆಯಬೇಕಾ ಎಂದು ಪ್ರಶ್ನಿಸಿದರು.ಒಕ್ಕಲಿಗರು ಮತ್ತು ಲಿಂಗಾಯತರ ಸಂಖ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ರಾಜಕಾರಣಿಗಳು ವಿರೋಧಿಸುತ್ತಾರೆ. ಆದರೆ, ಆ ಸಮುದಾಯಗಳಿಗೆ ನೀಡಲಾಗುತ್ತಿರುವ ಮೀಸಲಾತಿಯ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಅವರು ಗಮನಿಸಬೇಕು. ಕೇವಲ ರಾಜಕೀಯ ಕಾರಣಕ್ಕೆ ವಿರೋಧಿಸಬಾರದು. ಸಂಖ್ಯೆಯನ್ನು ಬಿಟ್ಟು ಮೀಸಲಾತಿ ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಜಾತಿಗೆ ಸಾಮಾಜಿಕ, ಆರ್ಥಿಕ ಆಯಾಮ ಇದೆ. ಪ್ರತಿಯೊಬ್ಬರ ಹೃದಯ ಪರಿವರ್ತನೆ ಆದಾಗ ಸಾಮಾಜಿಕ ಸಮಾನತೆ ಸಿಗುತ್ತದೆ. ಆರ್ಥಿಕವಾಗಿ ಸಮಾನತೆ ಬಂದರೂ ಒಂದಷ್ಟು ಜಾತಿ ಕಡಿಮೆಯಾಗುತ್ತದೆ. ಜಾತಿ ಬಿಟ್ಟು ಮದುವೆಯಾದರೆ ಖಂಡಿತ ಜಾತಿ ನಾಶವಾಗುತ್ತದೆ. ಮೀಸಲಾತಿ ಇರುವುದು ಜಾತಿ ವಿನಾಶಕ್ಕೆ ಎಂದು ಅಭಿಪ್ರಾಯಪಟ್ಟರು.ವಿಚಾರ ಸಂಕಿರಣ ಉದ್ಘಾಟಿಸಿದ ಪ್ರಗತಿಪರ ಚಿಂತಕ ಪ್ರೊ.ಕಾಳೇಗೌಡ ನಾಗವಾರ, ಪ್ರಸ್ತುತ ಸಮಾಜದಲ್ಲಿ ಅವಿವೇಕ ತುಂಬಿ ತುಳುಕುತ್ತಿದೆ. ಇವುಗಳನ್ನು ಮೀರಿ, ಕವಿವಾಣಿಯಂತೆ ಸರ್ವಜನಾಂಗದ ಶಾಂತಿಯ ತೋಟದಂತೆ ಎಲ್ಲರೂ ಒಂದಾಗಿ ಬಾಳುವ ವಾತಾವರಣ ಸೃಷ್ಟಿಯಾಗಬೇಕಾಗಿದೆ ಎಂದು ತಿಳಿಸಿದರು.
ವಿಚಾರ ಸಂಕಿರಣದ ಗೌರವ ಸಂಚಾಲಕ ರಮಾನಾಥ ಬೇಕಲ್ ಆರಂಭದಲ್ಲಿ ಸಂವಿಧಾನ ಪೀಠಿಕೆ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಾನವೀಯ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಮಾನವೀಯ ಬಂಧುತ್ವ ವೇದಿಕೆಯ ರಾಜ್ಯ ಮಹಿಳಾ ಸಂಚಾಲಕರಾದ ಡಾ.ಲೀಲಾ ಸಂಪಿಗೆ ವಹಿಸಿದ್ದರು. ಸಂಘಟನೆಯ ಜಿಲ್ಲಾ ಸಂಚಾಲಕ ಜೆ.ಎಸ್.ಜನಾರ್ಧನ್, ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕರಾದ ಡಾ.ಕಾವೇರಿ, ಸ್ವಾಗತ ಸಮಿತಿ ಸಂಚಾಲಕ ನೆರವಂಡ ಉಮೇಶ್ ಭಾಗವಹಿಸಿದ್ದರು.ವೈದ್ಯರು ತಮ್ಮ ಬಳಿ ಬರುವ ರೋಗಿಗಳ ಜಾತಿ ವಿಚಾರಿಸದೇ ಅವರ ರೋಗ ಅರಿತು ಚಿಕಿತ್ಸೆ ನೀಡುತ್ತಾರೆ. ಹಾಗೆಯೇ, ಎಲ್ಲರೂ, ಎಲ್ಲ ಸಂದರ್ಭದಲ್ಲೂ ನಡೆದುಕೊಂಡರೆ ಜಾತಿ ದೂರವಾಗುತ್ತದೆ. ಜಾತಿ ನೋಡಿ ಸಹಾಯ ಮಾಡಬೇಡಿ. ಅವರ ಕಷ್ಟ ನೋಡಿ ಸಹಾಯ ಮಾಡಬೇಕು.
-ಡಾ.ಮಂತರ್ ಗೌಡ, ಮಡಿಕೇರಿ ಶಾಸಕ.