ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ತಾಲೂಕಿನ ಕವಡಿಮಟ್ಟಿ ಗ್ರಾಮದ ಸಮೀಪದ ಸುಮಾರು 10 ಜಮೀನಿನ ಮೋಟರ್ಗಳಿಗೆ ಅಳವಡಿಸಿದ್ದ ಕೇಬಲ್ಗಳನ್ನು ದುಷ್ಕರ್ಮಿಗಳು ಶನಿವಾರ ರಾತ್ರಿ ಕತ್ತರಿಸಿಕೊಂಡು ಹೋಗಿದ್ದು, ಮುದ್ದೇಬಿಹಾಳ ಠಾಣೆಗೆ ರೈತರು ದೂರು ನೀಡಿದ್ದಾರೆ.ಕವಡಿಮಟ್ಟಿ ಗ್ರಾಮದ ಸಮೀಪ ಇರುವ ಚಿಮ್ಮಲಗಿ ಏತನೀರಾವರಿ ಕಾಲುವೆ ಅಳವಡಿಸಿದ್ದ ಪಂಪ್ಸೆಟ್ನ ಮುಖ್ಯ ಕೇಬಲ್ ರಾತ್ರಿ ವೇಳೆ ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ತಾಲೂಕಿನ ಹಲವೆಡೆ ಇಂತಹ ಕಳವು ಘಟನೆಗಳು ನಡೆದಿದ್ದು, ಶನಿವಾರ ಅಂದಾಜು ₹30 ಸಾವಿರ ಕೇಬಲ್ ಕಳ್ಳತನಾವಗಿದ್ದು ಪೊಲೀಸ್ ಇಲಾಖೆ ರೈತರ ನೆರವಿಗೆ ಬರಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಕೇಬಲ್ ನಲ್ಲಿ ಬೆಲೆ ಬಾಳುವ ತಾಮ್ರ ತಂತಿಯ ಆಸೆಗೆ ಬಿದ್ದಿರುವ ಕಳ್ಳರು ನೆಲದಡಿ ಅಳವಡಿಸಿ ಮರೆಗೆ ಮಾಚಿದರೂ ಕೇಬಲ್ ಕಳ್ಳತನ ಮಾಡುತ್ತಿದ್ದಾರೆ. ಒಂದೇ ರಾತ್ರಿ ಸುಮಾರು 1 ಕಿ.ಮೀ ವರೆಗಿನ ಬೆಲೆ ಬಾಳುವ ಕೇಬಲ್ ಕಳ್ಳತನವಾಗಿದೆ. ಈ ಕುರಿತು ಪೊಲೀಸ್ ಇಲಾಖೆಗೆ ಮೌಖಿಕವಾಗಿ ರೈತರು ಭಾನುವಾರ ದೂರು ನೀಡಿದ್ದು, ಪೊಲೀಸರು ಸ್ಥಳ ಮಹಜರು ನಡೆಸಿದರು.ಮಳೆ ಬಾರದೆ ರೈತರು ಕಂಗಾಲಾಗಿದ್ದು, ರೈತರ ಪಂಪ್ಸೆಟ್ ಸಾಮಗ್ರಿ ಕಳುವು ಮಾಡುವ ಮೂಲಕ ಕಳ್ಳರು ರೈತರಿಗೆ ಗಾಯದ ಮೇಲೆ ಬರೆ ಎಳೆಯುತ್ತಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.ಪ್ರತಿವರ್ಷ ತಾಲೂಕಿನಲ್ಲಿ ನಡೆಯುವ ಈ ಕಳ್ಳತನ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕಿದ್ದು, ವಿಶೇಷ ತಂಡ ರಚಿಸಿ ಕಳ್ಳರನ್ನು ಮಟ್ಟ ಹಾಕುವಂತೆ ಈ ಭಾಗದ ಅನೇಕ ರೈತರು ಮನವಿ ಮಾಡಿದ್ದಾರೆ.ಪ್ರತಿವರ್ಷ ಕವಡಿಮಟ್ಟಿ ಗ್ರಾಮದಲ್ಲಿ ಸುಮಾರು ₹50 ಸಾವಿರ ಮೌಲ್ಯದ ರೈತರ ಕೇಬಲ್, ಮೋಟರ್ ಇನ್ನಿತರ ವಸ್ತುಗಳನ್ನು ಕಳವು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ವ್ಯಾಪಕವಾಗಿ ಮೋಟರ್, ಕೇಬಲ್ ಕಳ್ಳತನ ಜಾಲ ಶುರುವಾಗಿದೆ. ಮೊದಲೆ ಮಳೆ ಇಲ್ಲದೇ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಪೊಲೀಸರಯ ಕೂಡಲೇ ರೈತರ ನೆರವಿಗೆ ಧಾವಿಸಿ ಕೇಬಲ್ ಕಳ್ಳರನ್ನು ಹೆಡೆಮುರಿ ಕಟ್ಟಬೇಕು ಎಂದು ಕವಡಿಮಟ್ಟಿ ಗ್ರಾಪಂ ಮಾಜಿ ಸದಸ್ಯ ಹಣಮಂತ ಹಂಡರಗಲ್ಲ ಆಗ್ರಹಿಸಿದರು.
