ಕನ್ನಡಪ್ರಭ ವಾರ್ತೆ ಮಳವಳ್ಳಿ
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಂಜೆತನ ಸಮಸ್ಯೆ ವೈದ್ಯಕೀಯ ಲೋಕಕ್ಕೆ ಸವಾಲಾಗಿ ಪರಿಣಮಿಸಿದೆ ಎಂದು ಮೈಸೂರು ಪ್ರೇರಣಾ ಆಸ್ಪತ್ರೆ ನಿರ್ದೇಶಕಿ ಡಾ.ಎನ್.ಮಾಧುರಿ ತಿಳಿಸಿದರು.ಪಟ್ಟಣದ ವೈಭವ್ ಪ್ಯಾಲೇಸ್ನಲ್ಲಿ ಜಿಲ್ಲಾ ಖಾಸಗಿ ವೈದ್ಯರ ಸಂಘ ಮತ್ತು ಪ್ರೇರಣಾ ಆಸ್ಪತ್ರೆ ಮೈಸೂರು ವತಿಯಿಂದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ನಡೆದ ಒಂದು ದಿನದ ಸಂವಾದಾತ್ಮಕ ವೈಜ್ಞಾನಿಕ ಅಧಿವೇಶನ- ಜ್ಞಾನ ಅನ್ವೇಷಣೆ ಮತ್ತು ಸಂಪರ್ಕ ಎಂಬ ವಿಷಯದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಬಂಜೆತನವಿರುವ ದಂಪತಿಗಳ ಮೌಲ್ಯಮಾಪನ ಎಂಬ ವಿಷಯ ಕುರಿತು ಮಾತನಾಡಿದರು.
ದಂಪತಿಗಳ ನಡುವೆ ಬಂಜೆತನ ಕುರಿತು ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದರೇ ಮಹಿಳೆಯರು ಬಂಜೆತನದಿಂದ ಹೊರಬಂದು ಗರ್ಭ ಧರಿಸಬಹುದು. ಮಹಿಳಾ ಮತ್ತು ಪುರುಷರಲ್ಲಿ ಬಂಜೆತನದಲ್ಲಿ ಪಾಲುದಾರಿಕೆ ವಿವರಿಸಿದರು. ಅನೇಕ ಖಾಸಗಿ ವೈದ್ಯರು ತಮ್ಮಲ್ಲಿದ್ದ ಅನೇಕ ಬಂಜೆತನ ನಿವಾರಣ ವಿಷಯ ಕುರಿತು ಸಂವಾದ ನಡೆಸಿದರು.ಮನೋ ವೈದ್ಯ ಡಾ. ಎಚ್.ಆರ್.ಅಭಿಜಿತ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಮಾನಸಿಕ ರೋಗಿಗಳಾಗುತ್ತಿದ್ದಾರೆ. ದುಡಿಯುವ ಸಮಯದಲ್ಲಿ ಸಮಸ್ಯೆಯಿಂದ ಹೊರ ಬರಲು ಸಾಧ್ಯವಾಗದೇ ತಮ್ಮ ಬದುಕನ್ನೇ ನಾಶ ಮಾಡಿಕೊಳ್ಳುತ್ತಿದ್ದಾರೆ. ಸೂಕ್ತ ಸಮಾಲೋಚನೆ ಹಾಗೂ ಚಿಕಿತ್ಸೆ ನೀಡಿದರೇ ಮಾನಸಿಕ ರೋಗ ನಿವಾರಿಸಬಹುದು ಎಂದರು.
ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದ ಒತ್ತಡಗಳು, ಆತುರದ ನಿರ್ಧಾರಗಳು, ಕುಟುಂಬ ಕಲಹಗಳು ಮನುಷ್ಯನ ಆಲೋಚಣೆಗಳ ಮೇಲೆ ಗಾಢವಾದ ಪರಿಣಾಮ ಮೀರಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತಾರೆ. ಸೂಕ್ತ ಚಿಕಿತ್ಸೆಯೊಂದಿಗೆ ಖಿನ್ನತೆಯಿಂದ ಹೊರ ಬರಬಹುದು ಎಂದು ವಿವರಿಸಿದರು.
ಸಮಾಜದಲ್ಲಿ ಪುರುಷ ಹಾಗೂ ಮಹಿಳೆಯರಲ್ಲಿ ವಯಸ್ಸಾಗುತ್ತಿದ್ದಂತೆ ಮಾನಸಿಕ ಒತ್ತಡದಿಂದಾಗಿ ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರಿ ಗಂಭೀರ ಸಮಸ್ಯೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಮಾನಸಿಕ ಒತ್ತಡವನ್ನು ನಿಯಂತ್ರಣ ಮಾಡುವಲ್ಲಿ ಔಷಧಿಗಳ ಪಾತ್ರ ಪ್ರಮುಖವಾಗಿದೆ. ಒಬ್ಬ ಮಾನಸಿಕ ರೋಗಿಯ ಚಲನವಲನಗಳು ಕೆಲವು ಔಷಧಿಗಳ ಅಡ್ಡ ಪರಿಣಾಮಗಳ ಬಗ್ಗೆ ವೈದ್ಯರು ಎಚ್ಚರಿಕೆ ವಹಿಸಬೇಕಿದೆ ಎಂದು ತಿಳಿವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಾಸಗಿ ವೈದ್ಯರ ಸಂಘ ಅಧ್ಯಕ್ಷ ಡಾ.ಬಿ.ಎಚ್.ಅರುಣ್ ಕುಮಾರ್ ಸೇರಿ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು, ಪ್ರೇರಣಾ ಆಸ್ಪತ್ರೆ ಮೈಸೂರು ಹಾಗೂ ನಗು ಫೌಂಡೇಶನ್ ಟ್ರಸ್ಟ್ ಸಿಬ್ಬಂದಿ ಇದ್ದರು.