ಸಾರಾಂಶ
ರಾಮಚಂದ್ರ ಕುಲಕರ್ಣಿ ಭಾವಜೀವಿ, ಛಾಯಾಗ್ರಾಹಕ ಮಾತ್ರವಲ್ಲದೇ ನಳಪಾಕದಲ್ಲೂ ಕೈಚಳಕ ತೋರಿಸಿದ ವ್ಯಕ್ತಿ. ರಂಗಭೂಮಿ ಕಲಾವಿದನೂ ಹೌದು. ತಾನು ಕಷ್ಟದಲ್ಲಿದ್ದರೂ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಜೀವಿ. ಆರ್.ಕೆ. ಫೌಂಡೇಶನ್ ಸ್ಥಾಪಿಸಿ, ಯುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರಶಸ್ತಿ ನೀಡುವ ಜತೆ ಮಕ್ಕಳ ಕಾರ್ಯಕ್ರಮ ಮಾಡುವ ಅದ್ಭುತ ಸಂಘಟಿಕ.
ಧಾರವಾಡ:
ಸ್ನೇಹಜೀವಿ, ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿ (ಆರ್ಕೆ) ನಿಧನದ ಹಿನ್ನೆಲೆಯಲ್ಲಿ ಗುರುವಾರ ಧಾರವಾಡದ ವಿವಿಧೆಡೆ ಅವರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಗುರುವಾರ ಸಂಜೆ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಆರ್.ಕೆ. ಕುರಿತ ಲೇಖನಗಳ ಸಂಗ್ರಹ ಹಾಗೂ ಛಾಯಾಚಿತ್ರ ಪ್ರದರ್ಶನ ಮಾಡುವ ಕುರಿತು ನಿರ್ಧರಿಸಲಾಯಿತು. ಆರ್ಕೆ ಕುರಿತಾದ ಮಹತ್ವದ ಸಂಗತಿಗಳನ್ನು 15 ದಿನಗಳಲ್ಲಿ ಲೇಖನ ರೂಪದಲ್ಲಿ ಅವರ ಒಡನಾಡಿಗಳು ವಿದ್ಯಾವರ್ಧಕ ಸಂಘಕ್ಕೆ ನೀಡಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನುಡಿನಮನ ವೇಳೆ ಹೇಳಿದರು.
ಖ್ಯಾತ ರಂಗಕರ್ಮಿ ಡಾ. ಶಶಿಧರ ನರೇಂದ್ರ ಮಾತನಾಡಿ, ಅವನೊಬ್ಬ ಭಾವಜೀವಿ, ಛಾಯಾಗ್ರಾಹಕ ಮಾತ್ರವಲ್ಲದೇ ನಳಪಾಕದಲ್ಲೂ ಕೈಚಳಕ ತೋರಿಸಿದ ವ್ಯಕ್ತಿ. ರಂಗಭೂಮಿ ಕಲಾವಿದನೂ ಹೌದು. ತಾನು ಕಷ್ಟದಲ್ಲಿದ್ದರೂ, ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಜೀವಿ. ಆರ್.ಕೆ. ಫೌಂಡೇಶನ್ ಸ್ಥಾಪಿಸಿ, ಯುವ ಛಾಯಾಗ್ರಾಹಕರನ್ನು ಗುರುತಿಸಿ, ಪ್ರಶಸ್ತಿ ನೀಡುವ ಜತೆ ಮಕ್ಕಳ ಕಾರ್ಯಕ್ರಮ ಮಾಡುವ ಅದ್ಭುತ ಸಂಘಟಿಕ. ಆತನ ನಿಧನ ಮಾಧ್ಯಮ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬದ ಹಾನಿ ಎಂದರು.ಸಂಘದ ಸಹ ಕಾರ್ಯದರ್ಶಿ ಶಂಕರ ಕುಂಬಿ, ಆರ್.ಕೆ. ಫೋಟೋಗ್ರಫಿ ಜೊತೆಗೆ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಸಾಕಷ್ಟು ಸಸಿ ನೆಟ್ಟಿರುವ ಉದಾಹರಣೆಗಳು ಇವೆ. ಬೆಳವಣಿಗೆ ಕಾಣುವ ಹಂತದಲ್ಲಿ ಈ ವ್ಯಕ್ತಿ ಅಗಲಿದ್ದು ನೋವು ತರಿಸಿದೆ ಎಂದರು.
ನ್ಯಾಯವಾದಿ ರವಿ ಕುಲಕರ್ಣಿ, ಪ್ರಸಾದನ ಕಲಾವಿದ ಸಂತೋಷ ಮಹಾಲೆ, ಕಲಾವಿದೆ ವಿಷಯಾ ಜೇವೂರ, ಪತ್ರಕರ್ತ ಡಾ. ವಿಶ್ವನಾಥ ಕೋಟಿ, ಬಸವರಾಜ ಪಟಾತ್ ಮತ್ತಿತರರು ನುಡಿನಮನ ಸಲ್ಲಿಸಿದರು. ಇನ್ನು ಧಾರವಾಡ ಜರ್ನಲಿಸ್ಟ್ ಗಿಲ್ಡ್ನಲ್ಲೂ ಆರ್.ಕೆ. ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗಿಲ್ಡ್ ಪದಾಧಿಕಾರಿಗಳು, ಸದಸ್ಯರು ಆರ್.ಕೆ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ತಮ್ಮ ಒಡನಾಟವನ್ನು ಹಂಚಿಕೊಂಡರು. ತದನಂತರ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಶ್ರದ್ಧಾಂಜಲಿಯಲ್ಲಿ ಆರ್.ಕೆ. ಭಾವಚಿತ್ರಕ್ಕೆ ಪತ್ರಕರ್ತರ ಮಿತ್ರರು ಪುಷ್ಪ ಅರ್ಪಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲು ಕೋರಿದರು. ವಾರ್ತಾ ಸಹಾಯಕ ಸುರೇಶ ಹಿರೇಮಠ ಇದ್ದರು.