ಉಡುಪಿ: ವರ್ಷದ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಪಡೆ (ಎಸ್‌ಎಎಫ್‌)ಯನ್ನು ಧರ್ಮಸ್ಥಳ ಬುರುಡೆ ಗ್ಯಾಂಗಿನ ರಕ್ಷಣೆಗಾಗಿಯೇ ರಚಿಸಿತ್ತು. ಈಗ ಬುರುಡೆ ಗ್ಯಾಂಗಿನ ಕತೆ ಮುಗಿದಿದೆ. ಆದ್ದರಿಂದ ಈ ಕಾರ್ಯಪಡೆಯನ್ನು ಬರ್ಖಾಸ್ತುಗೊಳಿಸಿ, ಸರ್ಕಾರದ ಹಣ ಉಳಿಸಬೇಕು ಎಂದು ಮಾಜಿ ಡಿವೈಎಸ್ಪಿ, ಭಾರತೀಯ ಜನಶಕ್ತಿ ಕಾಂಗ್ರೆಸ್‌ನ ಅನುಪಮಾ ಶೆಣೈ ಹೇಳಿದ್ದಾರೆ.

ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಎಸ್‌ಎಎಫ್‌ ರಚನೆಯಾದ 20 ದಿನಗಳಲ್ಲಿ ಚಿನ್ನಯ್ಯನು ಬುರುಡೆ ಹಿಡಿದುಕೊಂಡು ಬಂದ. ಸರ್ಕಾರ ಈ ಗ್ಯಾಂಗಿನ ತನಿಖೆಗೆ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ರಚಿಸಿ, ಈ ಗ್ಯಾಂಗಿನ ರಕ್ಷಣೆಗೆ ವಿಶೇಷ ಕಾರ್ಯ ಪಡೆಯನ್ನು (ಎಸ್‌ಎಎಫ್‌) ಸ್ಥಾಪಿಸಿದಂತಿದೆ. ಚಿನ್ನಯ್ಯ ಲಗಾಟಿ ಹೊಡೆದ ಬಳಿಕ ಬುರುಡೆ ಗ್ಯಾಂಗ್‌ ಕತೆ ಮುಗಿದಿದೆ. ಆದರೆ ಇಲ್ಲಿ ಇನ್ನೂ ಎಸ್‌ಎಎಫ್‌ ಯಾಕೆ ಇದೆ ? ಈ ಬಿಳಿಯಾನೆಯನ್ನು ಸಾಕುವ ಬದಲಿಗೆ ಅದನ್ನು ಮುಚ್ಚಿದರೆ ಸರ್ಕಾರಕ್ಕೆ ಹಣ ಉಳಿತಾಯವಾಗುತ್ತದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಥವಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.ರಾಜ್ಯದಲ್ಲಿ ನಕ್ಸಲರ ನಿಗ್ರಹವಾಗಿದೆ. ಇನ್ನು ನಕ್ಸಲ್ ನಿಗ್ರಹ ಪಡೆಯ ಅಗತ್ಯವಿಲ್ಲ ಎಂದು ಕಳೆದ ವರ್ಷ ಜೂನ್ ತಿಂಗಳಲ್ಲಿ ಅದರ ಸಿಬ್ಬಂದಿಗಳಿಂದ ಎಸ್‌ಎಎಫ್ ರಚಿಸಲಾಗಿದೆ. ಆದರೆ ಇಂತಹ ವಿಶೇಷ ಕಾರ್ಯಪಡೆಗೆ ಕಾನೂನಿನಲ್ಲಿ ಮಾನ್ಯತೆ ಇದೆಯೇ ಅಥವಾ ಯಾವ ಕಾನೂನಿನಲ್ಲಿ ಇಂತಹ ಕಾರ್ಯಪಡೆ ಸ್ಥಾಪನೆಗೆ ಅವಕಾಶವಿದೆ ಎನ್ನುವುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಬೇಕು ಎಂದರು.