ಕನ್ನಡಪ್ರಭ ವಾರ್ತೆ ಹಲಗೂರು

ನರೇಗಾ ಉಳಿಸಿ ವಿಬಿಜಿ ರಾಮ್ ಜಿ ರದ್ದುಗೊಳಿಸಿ ಕೂಲಿಕಾರರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಮುಖಂಡರು ತಾಲೂಕಿನ ಹುಸ್ಕೂರು ಗ್ರಾಮ ಪಂಚಾಯ್ತಿ ಎದುರು ಪ್ರತಿಭಟನೆ ನಡೆಸಿದರು.

ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಶಿವಮಲ್ಲಯ್ಯ ಮಾತನಾಡಿ, ಕಳೆದ ಡಿಸೆಂಬರ್ 21ರಂದು ಕೇಂದ್ರ ಸರ್ಕಾರ ಮನರೇಗಾ ರದ್ದುಗೊಳಿಸಿ ಕಾರ್ಪೊರೇಟ್ ಪರ ನೀತಿಗಳಿಗೆ ಜೈ ಹೇಳುವ ಮೂಲಕ ವಿಬಿಜಿ ರಾಂ ಜಿ ಅನ್ನು ಸಂಸತ್‌ನಲ್ಲಿ ಜಾರಿಗೊಳಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜುಲೈ ಒಂದರಿಂದ ಅಧಿಕೃತವಾಗಿ ಕೆಲಸ ಕೊಡುತ್ತೇನೆಂದು ಹೇಳಿಕೊಂಡು ಅನುಷ್ಠಾನಕ್ಕೆ ಹೊರಟಿದೆ. ಇದನ್ನು ಕರ್ನಾಟಕ ಕೃಷಿ ಕೂಲಿಕಾರರ ಮತ್ತು ಗ್ರಾಮೀಣ ಕಾರ್ಮಿಕರ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಹಳೆಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಬೇಕೆಂದು ಆಗ್ರಹಿಸಿದರು.

ಕೂಲಿಕಾರರಿಗೆ ಕೆಲಸದ ಜೊತೆಗೆ 700 ರು. ಕೂಲಿ ನಿಗದಿ ಪಡಿಸಬೇಕು. ಎನ್‌ಎಂಎಂಎಸ್ ಮತ್ತು ಇ-ಕೆವೈಸಿ ಅಂತ ಅವೈಜ್ಞಾನಿಕ ತಂತ್ರಜ್ಞಾನ ಅಳವಡಿಸುವುದನ್ನು ಕೈ ಬಿಟ್ಟು ಸರಳ ರೀತಿಯಲ್ಲಿ ಕೂಲಿಕಾರರಿಗೆ ಹಾಜರಾತಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.


ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ಕೊಡುತ್ತೇನೆಂದು ಹೇಳಿರುವ ಹಾಗೆ 75 ದಿನದ ಕೆಲಸವನ್ನು ರಾಜ್ಯ ಸರ್ಕಾರವನ್ನು ಅವಲಂಬಿಸದೆ ನೀಡಬೇಕು. ಸರ್ಕಾರ ಈಗಾಗಲೇ ವಿಧಾನಸಭೆಯಲ್ಲಿ ವಿವಿಜಿ ಮಾಡುವುದಿಲ್ಲವೆಂದು ನಿರ್ಣಯಿಸಿರುವುದರಿಂದ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ದಿನದ ಕೆಲಸ ನೀಡಬೇಕೆಂದರು.

ಕೂಲಿ ಮಾಡುವಾಗ ಅಪಘಾತಗಳಿಗೆ ಸಿಲುಕಿ ಸಾವನ್ನಪ್ಪಿದ ಕೂಲಿಕಾರರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು. ದಿನಬಳಕೆ ವಸ್ತುಗಳ ಬೆಲೆ ಕಡಿಮೆಗೊಳಿಸಿ ನೆಮ್ಮದಿ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಸರೋಜಮ್ಮ, ಕೃಷ್ಣಮೂರ್ತಿ, ಮಣಿಯಮ್ಮ, ಪುಟ್ಟಸ್ವಾಮಿ, ರತ್ಮಮ್ಮ, ಯಾಲಕಯ್ಯ, ಪುಟ್ಟೇಗೌಡ, ಸಾವುಕಯ್ಯ ಲಿಂಗರಾಜಮ್ಮ, ಮೋಟಿಕುಳ್ಳಯ್ಯ, ಪ್ರಮೀಳ ಸೇರಿದಂತೆ ಇತರರು ಇದ್ದರು.