ಸಾರಾಂಶ
ಹುಬ್ಬಳ್ಳಿ:ಎರಡು ಪ್ರತ್ಯೇಕ ಮನೆ ಕಳ್ಳತನ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ₹9 ಲಕ್ಷ ಮೌಲ್ಯದ ಬಂಗಾರದ ಆಭರಣ ಹಾಗೂ ಎರಡು ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿದ್ದಾರೆ.
ಬೀಗ ಹಾಕಿದ ಮನೆಗಳ ಕಳ್ಳತನ ಮಾಡುತ್ತಿದ್ದ ಕುಂದಗೋಳ ತಾಲೂಕಿನ ಗುಡಗೇರಿ ಮೂಲದ ಶ್ರೀಧರ್ ಭೀಮಪ್ಪ ಬಿಂಜಡಗಿ, ಹೇಮಂತ ಮಲ್ಲಪ್ಪ ಧರೆಣ್ಣವರ ಹಾಗೂ ಗೋವಾ ಮೂಲದ ಇಲ್ಲಿನ ಎಪಿಎಂಸಿ ಹತ್ತಿರದ ಈಶ್ವರ ನಗರದ ನಿವಾಸಿ ಗೆಬಿ ಫರ್ನಾಂಡೀಸ್ ಪಾವಲು ಎಂಬಾತನನ್ನು ಬಂಧಿಸಲಾಗಿದೆ.ಕಳೆದ ಜೂ. 19ರಂದು ತಾರಿಹಾಳದಲ್ಲಿ ಸೈದುಸಾಬ್ ದಾವಲಸಾಬ್ ನದಾಫ್ ಅವರ ಮನೆಯ ಬಾಗಿಲು ಮುರಿದು ತಿಜೂರಿಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದರು. ಜೂ. 30ರಂದು ಅಂಚಟಗೇರಿ ಗ್ರಾಮದ ಆಶ್ರಯ ಪ್ಲಾಟ್ನಲ್ಲಿನ ಮನೆಯೊಂದರಲ್ಲಿನ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಈ ಬಗ್ಗೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಎಸ್ಪಿ ಗೋಪಾಲ ಬ್ಯಾಕೋಡ, ಧಾರವಾಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾರಾಯಣ ಭರಮನಿ, ಡಿವೈಎಸ್ಪಿ ವಿನೋದ್ ಮುಕ್ತೆದಾರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಹುಬ್ಬಳ್ಳಿ ಗ್ರಾಮೀಣ ಇನ್ಸ್ಪೆಕ್ಟರ್ ಮುರಗೇಶ ಚನ್ನಣ್ಣವರ, ಬಿ.ಎ. ಕಾಮನಬೈಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ತಡಸ ಬಳಿ ಬಂಧಿಸಿದ್ದಾರೆ. ಎರಡು ಬೈಕ್ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಕಾರ್ಯಾಚರಣೆಯಲ್ಲಿ ಪಿಎಸ್ಐ ಸಚಿನ್ ಅಲಮೇಲಕರ್, ಎಎಸ್ಐ ಎನ್.ಎಂ.ಹೊನ್ನಪ್ಪವರ, ಸಿಬ್ಬಂದಿ ಎ.ಎ.ಕಾಕರ್, ಎಚ್.ಬಿ.ಐಹೊಳೆ, ಎಚ್.ಎಲ್.ಮಲ್ಲಿಗವಾಡ, ಸಂತೋಷ ಚೌಹಾನ್, ಚನ್ನಪ್ಪ ಬಳ್ಳೊಳ್ಳಿ, ಮಹಾಂತೇಶ ಮದ್ದೀನ್, ಗಿರೀಶ್ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ, ವಿಶ್ವ ಶಿವಬಸಣ್ಣವರ, ಶಂಭುಲಿಂಗ ಹಿರೇಮಠ, ಪ್ರೇಮ ರಾಠೋಡ, ನಾಗರಾಜ್ ಮಾಣಿಕ್ ಹಾಗೂ ತಾಂತ್ರಿಕ ಸಿಬ್ಬಂದಿ ಆರೀಫ್ ಗೊಲಂದಾಜ್, ವಿಠ್ಠಲ್ ಡೊಂಗನವರ, ಚೇತನ ಮಾಳಗಿ ಇದ್ದರು.