ಉಡುಪಿ: ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ 3 ದಿನಗಳಿಂದ ಯಾವುದೇ ಜಮೀನಿನ ಕಡಡತಗಳು ನೋಂದಣಿಯಾಗದೆ ನೂರಾರು ಮಂದಿ ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ತಮ್ಮ ಕೆಲಸವಾಗದೆ ಹಿಂದಿರುಗುತ್ತಿದ್ದಾರೆ.
ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.ಮೂರು ದಿನಗಳಿಂದಲೂ ಸರ್ವರ್ ಸಮಸ್ಯೆ ತಲೆದೋರಿದ್ದು, ಜಮೀನು ನೋಂದಣಿ ಇತ್ಯಾದಿ ಪ್ರಕ್ರಿಯೆಗಳು ನಡೆಯದೆ ಜನರಿಗೆ ತೊಂದರೆಯಾಗಿದೆ. ಶುಕ್ರವಾರವೂ ನೂರಾರು ಮಂದಿ ನೋಂದಣಿಗಾಗಿ ಕಚೇರಿಗೆ ಆಗಮಿಸಿದ್ದರೂ ಸಂಜೆ 4.30ರವರೆಗೆ ಒಂದು ಕಡತವೂ ನೋಂದಣಿಯಾಗಿಲ್ಲ. ಹಲವಾರು ಮಂದಿ ಹಿರಿಯರು, ಪರವೂರಿನಿಂದ ಬಂದ ಸಾರ್ವಜನಿಕರು, ಮಹಿಳೆಯರು ಕಾಯುತ್ತಿದ್ದು ಸಮಸ್ಯೆ ಎದುರಿಸುವಂತಾಗಿದೆ.
ಶಾಸಕ ಯಶ್ ಪಾಲ್ ಸುವರ್ಣ ಸ್ಥಳದಿಂದಲೇ ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಮಿಷನರ್ ಮಲ್ಲೈ ಮುಗಿಲನ್ ಅವರಿಗೆ ದೂರವಾಣಿ ಕರೆ ಮಾಡಿ ಸರ್ವರ್ ಸಮಸ್ಯೆ ತಕ್ಷಣ ಪರಿಹರಿಸುವಂತೆ ಮನವಿ ಮಾಡಿ, ಇಂದು ನಿಗದಿಯಾದ ಕಡತಗಳ ನೋಂದಣಿಯನ್ನು ಇಂದು ರಾತ್ರಿಯೊಳಗೆ ನಡೆಸಲು ಅವಕಾಶ ನೀಡುವಂತೆ ಹಾಗೂ ಬಾಕಿ ಉಳಿದ ಕಡತಗಳನ್ನು ಭಾನುವಾರ ನಡೆಸಲು ಅವಕಾಶ ನೀಡುವಂತೆ ಸೂಚಿಸಿದರು.ಉಡುಪಿ ಜಿಲ್ಲಾಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಿದ ಶಾಸಕರು ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರು. ಆದಾಯ ತರುವ ನೋಂದಣಿ ಕಚೇರಿಯಲ್ಲಿ ಪ್ರತಿನಿತ್ಯ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ತಿಳಿಸಿದರು.