ಕುಂದಾಪುರ: ಇಲ್ಲಿನ ಶಂಕರನಾರಾಯಣದ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್‌ನ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 83 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ 100 ಫಲಿತಾಂಶ ತಂದಿದ್ದಾರೆ. ಅವರಲ್ಲಿ 50 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತೀರ್ಣರಾಗಿ ಶಾಲೆಯ ಗರಿಮೆಯನ್ನು ಉತ್ತುಂಗಕ್ಕೇರಿಸಿದ್ದಾರೆ. ಟಾಪರ್ ಪ್ರೀತಮ್ ಜಿ ಪೂಜಾರಿ: ಪ್ರೀತಮ್ 625 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ತಂದುಕೊಟ್ಟಿದ್ದು, ರಾಜ್ಯಕ್ಕೆ ಮೊದಲ ರ್‍ಯಾಂಕ್‌ ಗಳಿಸಿ ಶಾಲೆಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ನಂದಶ್ರೀ ಶೆಟ್ಟಿ ಮತ್ತು ಗ್ರೀಷ್ಮ ಜಿ. 616 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದು, ಯುಕ್ತ ಎಂ. ಶೆಟ್ಟಿ ಮತ್ತು ಶರ್ವಾಣಿ ಉಪ್ಪುರ್ 610 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ವಿನೂತನ ಕಾರ್ಯಯೋಜನೆಗಳು ಮತ್ತು ಶಿಕ್ಷಕರ ಮಾರ್ಗದರ್ಶನ, ಶ್ರಮ ಹಾಗೂ ನಿರಂತರ ಅಭ್ಯಾಸ ಪ್ರಮುಖ ಕಾರಣವಾಗಿದ್ದು, ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.