ಕಾರ್ಕಳ: ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ತೋರಿದ್ದಾರೆ. ಕಾರ್ಕಳದ ಜ್ಞಾನ ಸುಧಾ ಹೈಸ್ಕೂಲ್ ವಿದ್ಯಾರ್ಥಿನಿ ಮಹಾಲಕ್ಷ್ಮಿ ಭಾಗವ್ 624 ಅಂಕಗಳನ್ನು ಗಳಿಸಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಇವರು ಕಾರ್ಕಳ ತಾಲೂಕಿನ ಹಿರ್ಗಾನದ ಜಗದೀಶ್ ಭಾಗವ್ ಹಾಗೂ ವನಿತಾ ಭಾಗವ್ ಅವರ ಪುತ್ರಿ. ಈಕೆ ತಂದೆಯನ್ನು ಕಳೆದುಕೊಂಡಿದ್ದು ತಾಯಿ ಆಸರೆಯಲ್ಲಿ ಬೆಳೆಯುತ್ತಿದ್ದಾರೆ. ಭವಿಷ್ಯದಲ್ಲಿ ವೈದ್ಯೆಯಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಥಮ ಪಿಯು ಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
ಇದೇ ಅಂಕಗಳನ್ನು (624) ಗಳಿಸಿದ ಇನ್ನೊಬ್ಬ ವಿದ್ಯಾರ್ಥಿನಿ ಮಹಾಲಕ್ಷ್ಮಿ ಪೈ ಬಿ ಕೂಡ ಗಮನ ಸೆಳೆದಿದ್ದಾರೆ. ಗುಡ್ಡೆಯಂಗಡಿ ನಿವಾಸಿಗಳಾದ ಮಂಜುನಾಥ ಪೈ ಹಾಗೂ ಮೇಘ ಪೈ ಅವರ ಪುತ್ರಿ. ತಂದೆಯನ್ನು ಕಳೆದುಕೊಂಡ ನಂತರ ತಾಯಿ ಮೇಘ ಪೈ ಟೈಲರಿಂಗ್ ಮೂಲಕ ಕುಟುಂಬವನ್ನು ಸಾಗಿಸುತ್ತಿದ್ದು, ಮಹಾಲಕ್ಷ್ಮಿ ಪಿಸಿಎಂಬಿ ವಿಭಾಗ ಆಯ್ಕೆ ಮಾಡಿ ವಿಜ್ಞಾನಿಯಾಗಬೇಕೆಂಬ ಕನಸನ್ನು ಹೊಂದಿದ್ದಾಳೆ.ಇದೇ ಕಾಲೇಜಿನ ಇನ್ನೊಬ್ಬ ವಿದ್ಯಾರ್ಥಿನಿ ವೈಷ್ಣವಿ ಶೆಟ್ಟಿಗಾರ್ 623 ಅಂಕ ಪಡೆದು ಮೂರನೇ ಸ್ಥಾನ ಪಡೆದಿದ್ದಾಳೆ. ಇವರು ವಿಜಯಚಂದ್ರ ಶೆಟ್ಟಿಗಾರ್ ಹಾಗೂ ಆಶಾಲತಾ ಅವರ ಪುತ್ರಿ. ನಿಟ್ಟೆಯ ಅಂಬರೀಷ್ ಪೂಜಾರಿ ಹಾಗೂ ಶಾರದ ಅವರ ಪುತ್ರಿ ಆರೂಷಿ ಪೂಜಾರಿ 622 ಅಂಕಗಳನ್ನು ಗಳಿಸಿದ್ದು, ಪಿಯುಸಿಯಲ್ಲಿ ಸೈನ್ಸ್ ಆಯ್ಕೆ ಮಾಡುವ ಉದ್ದೇಶ ಹೊಂದಿದ್ದಾಳೆ.