ಉಡುಪಿ: ಈ ಬಾರಿಯ ಉಡುಪಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಂದಾಪುರ ತಾಲೂಕಿನ ಶಂಕರನಾರಾಯಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಪ್ರೀತಮ್ ಪೂಜಾರಿ ಪೂರ್ಣ 625 ಅಂಕಗಳನ್ನು ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ 7 ವಿದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದಾನೆ. ಉಡುಪಿ ಜಿಲ್ಲೆಯ 5 ಮಂದಿ ವಿದ್ಯಾರ್ಥಿಗಳು 624 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಮತ್ತು 4 ಮಂದಿ 623 ಅಂಕಗಳೊಂದಿಗೆ ತೃತೀಯ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಇವರೆಲ್ಲರೂ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಾಗಿದ್ದಾರೆ ಕುಂದಾಪುರ ತಾಲೂಕಿನ ವೆಂಕಟರಮಣ ಆಂ.ಮಾ.ಶಾಲೆಯ ಅನ್ವರ್ಥ್ ಪೂಜಾರಿ, ಕಾರ್ಕಳ ತಾಲೂಕಿನ ಬೈಲೂರು ಸರ್ಕಾರಿ ಜ್ಯೂನಿಯರ್ ಕಾಲೇಜಿನ ಲೀಸಾ ಬರ್ಬೋಝ, ಕಾರ್ಕ‍ಳ ತಾಲೂಕಿನ ಜ್ಞಾನಸುಧಾ ಆಂ.ಮಾ. ಶಾಲೆಯ ಮಹಾಲಕ್ಷ್ಮೀ ಭಾಗವ್ ಮತ್ತು ಅದೇ ಶಾಲೆಯ ಮಹಾಲಕ್ಷ್ಮೀ ಪೈ ಹಾಗೂ ಬ್ರಹ್ಮಾವರ ತಾಲೂಕಿನ ವಿವೇಕ ಆಂ.ಮಾ. ಶಾಲೆಯ ಚೈತನ್ಯಶ್ರೀ ಉಡುಪ 624 ಅಂಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

ಕುಂದಾಪುರ ತಾಲೂಕಿನ ವೆಂಕಟರಮಣ ಆಂ.ಮಾ.ಶಾಲೆಯ ಪ್ರಾರ್ಥನಾ ಜಿ., ಸಾತ್ವಿಕ್ ಭಟ್ ಮತ್ತು ತಕ್ಷಾ ಪಿ. ಶೆಟ್ಟಿ, ಕಾರ್ಕಳ ತಾಲೂಕಿನ ಜ್ಞಾನಸುಧಾ ಆಂ.ಮಾ. ಶಾಲೆಯ ವೈಷ್ಣವಿ ಶೆಟ್ಟಿಗಾರ್ 623 ಅಂಕಗಳ ಸಾಧನೆ ಮಾಡಿದ್ದಾರೆ. ಬ್ರಹ್ಮಾವರ ತಾಲೂಕಿನ ವಿವೇಕ ಆಂ.ಮಾ. ಶಾಲೆಯ ಸಂಕಲ್ಪ್ ಕುಮಾರ್ 622 ಅಂಕಗಳನ್ನು ಗಳಿಸಿದ್ದಾನೆ.