ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಸರ್ಕಾರದ ದೃಷ್ಟಿಯಲ್ಲಿ ಶಿವಶಿಂಪಿ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಮ್ಮಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಜಿಲ್ಲಾವಾರು ನಮ್ಮ ಸಮುದಾಯವರನ್ನು ಭೇಟಿ ಮಾಡಿ ಸಂಘಟನೆ ಮಾಡಲಾಗುತ್ತಿದೆ ಎಂದು ರಾಜ್ಯ ಹಿಂದುಳಿದ ಮಠಾಧೀಶರ ಒಕ್ಕೂಟದ ಉಪಾಧ್ಯಕ್ಷರು, ಶಿವಶಿಂಪಿ ಸಮಾಜದ ಗುರುಗಳಾದ ಬನಹಟ್ಟಿಯ ಮಹಾಂತ ಮಂದಾರ ಮಠದ ಮಹಾಂತ ದೇವರು ತಿಳಿಸಿದರು.

ರಬಕವಿ ಶಿವಶಿಂಪಿ ಸಮುದಾಯದವರನ್ನು ಭೇಟಿ ಮಾಡಿ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಮಗೆ ಈಗ ಮಠ ಕಟ್ಟುವುದು, ವಿದ್ಯಾಪೀಠ ನಿರ್ಮಾಣ ಮಾಡುವುದಕ್ಕಿಂತ ಮುಖ್ಯವಾಗಿ ಸಮಾಜ ಸಂಘಟಿಸಬೇಕಾದ ಅನಿವಾರ್ಯತೆ ಇದೆ. ಎಲ್ಲೇ ಹೋದರೂ ನಿಮ್ಮವರು ಎಷ್ಟು ಜನರಿದ್ದಾರೆಂದು ಕೇಳುವುದು ಆಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯವನ್ನು ಸಂಘಟಿಸುವ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ ಅವರು, ನಮ್ಮ ಕುಲಗುರು ಶಿವದಾಸಿಮಯ್ಯರವರ ಬಗ್ಗೆ ದಾಖಲೆಗಳು ಸಿಗುತ್ತಿಲ್ಲ. ಇದರಿಂದ ನಮ್ಮ ಸಮುದಾಯ ಅದನ್ನು ಹುಡುಕಲು ಮುಂದಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಮಾಡಿದ್ದು, ನಮ್ಮ ಕುಲಗುರುಗಳ ವಚನಗಳನ್ನು ಪತ್ತೆ ಮಾಡುವಂತೆ ಕೋರಲಾಗಿದೆ ಎಂದರು.

ನಮ್ಮ ಸಮುದಾಯ ಸಂಘಟನೆಯಾದರೆ ಮಾತ್ರ ಸರ್ಕಾರದ ಮಟ್ಟದಲ್ಲಿ ಏನಾದರೂ ಪಡೆಯಲು ಸಾಧ್ಯವಾಗಲಿದೆ. ಇಲ್ಲವಾದರೆ ಹೀಗೆಯೇ ಇರಬೇಕಾಗುತ್ತದೆ. ಈ ಹಿನ್ನೆಲೆ ಸಂಘಟನೆಗೆ ಹೆಚ್ಚಿನ ಒಲ ನೀಡಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲಾವಾರು ಸಮಾವೇಶಗಳನ್ನು ಆಯೋಜಿಸುವುದರೊಂದಿಗೆ ಬೆಂಗಳೂರಿನಲ್ಲಿ ನಮ್ಮ ಸಮುದಾಯ ಬೃಹತ್ ಸಮಾವೇಶ ಮಾಡಿ ಸರ್ಕಾರಕ್ಕೆ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಿದೆ. ಇದಕ್ಕೆ ನಿಮ್ಮಲ್ಲರ ಸಹಾಯ, ಸಹಕಾರ ಬೇಕಿದೆ. ನಾನು ನಿಮ್ಮ ಪ್ರತಿನಿಧಿಯಾಗಿ ಮುಂದೆ ಹೊರಟಿದ್ದೇನೆ ನೀವು ನನಗೆ ಜೊತೆ ನೀಡುವಂತೆ ಮನವಿ ಮಾಡಿದರು.

ಬಾಗಲಕೋಟೆ ಶಿವಶಿಂಪಿ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಸಾವಳಗಿ, ರಬಕವಿ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ಸಣಕಾಲ, ಚೇರ್ಮನರಾದ ಪ್ರಕಾಶ ಸಣಕಾಲ, ಕಾರ್ಯದರ್ಶಿ ಚಿದಾನಂದ ಸೋಲಾಪುರ, ನಿರ್ದೇಶಕರಾದ ಶ್ರೀಶೈಲ ಭೂಯಾರ, ದಾನಪ ತುಂಗಳ , ವಿನೋದ ಸಿಂದಗಿ, ಪ್ರವೀಣ್ ಪಾವಟೆ ಇತರರು ಇದ್ದರು.