ಕನ್ನಡಪ್ರಭ ವಾರ್ತೆ ದೇವಲಾಪುರ
ತಾಲೂಕಿನಲ್ಲಿ ಮಳೆಯ ಅಭಾವ ಹಾಗೂ ಅತಿವೃಷ್ಟಿಯಿಂದ ಸೋಯಾಬೀನ್ ಬೆಳೆ ನಾಶವಾಗಿದೆ. ಸಿಎಂ ಮತ್ತು ಕಂದಾಯ ಸಚಿವರೊಂದಿಗೆ ಮಾತನಾಡಿ ಅದಕ್ಕೆ ಪರಿಹಾರ ಕೊಡುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಬೈಲಹೊಂಗಲ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಯಲ್ಲಿ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ದೇವಲಾಪುರ ಗ್ರಾಮ ಮತ್ತು ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಸೋಯಾಬೀನ್ ಬೆಳೆ ಹೆಚ್ಚಾಗಿ ಬೆಳೆದಿದ್ದರಿಂದ ದೇವಲಾಪುರ ಗ್ರಾಮದಲ್ಲಿ ಸಹಕಾರಿ ಕೃಷಿ ಪತ್ತಿನ ಸಂಘದ ವತಿಯಿಂದ ಖರೀದಿ ಕೇಂದ್ರ ಪ್ರಾರಂಭ ಮಾಡಲಾಗಿದೆ. ಎಲ್ಲ ರೈತರು ಖರೀದಿ ಕೇಂದ್ರದ ನಿಯಮದಂತೆ ಸೋಯಾಬೀನ್ ಪೂರೈಸಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಈಶ್ವರ್ ಉಲ್ಲೇಗಡ್ಡಿ ಮಾತನಾಡಿ, ದೇವಲಾಪುರ ಗ್ರಾಮದಲ್ಲಿ ಖರೀದಿ ಕೇಂದ್ರ ತೆರೆದಿದ್ದಕ್ಕೆ ಅವಳಿ ಸಂಘಗಳ ಮತ್ತು ಗ್ರಾಮದ ಎಲ್ಲ ಹಿರಿಯರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಜೈರಾಭಿ ಹೈ ನದಾಫ್, ಪಿಕೆಪಿಎಸ್ ಅಧ್ಯಕ್ಷ ಮಲ್ಲಯ್ಯ ರುದ್ರಾಪುರ, ಎಪಿಎಂಸಿ ನಿರ್ದೇಶಕ ಸಿಬುದ್ಧಿ ಸ್ವಾಮಿ ರುದ್ರಾಪುರ, ಎಪಿಎಂಸಿಯ ಸುನೀಲ್ ಗೋಡಗುಳೆ, ಗ್ರಾಮದ ಹಿರಿಯರಾದ ಶಶಿಧರ್ ಬಂದಕ್ಕನವರ, ಮಹಾಂತೇಶ ಯರಗಟ್ಟಿ, ರಾಮ ಯರಗಟ್ಟಿ, ವೀರಭದ್ರ ತಳವಾರ, ಪಕ್ರುಸಾಬ್ ನದಾಫ್, ಪಿಜೆಪಿಎಸ್ ಕಾರ್ಯದರ್ಶಿಗಳಾದ ರಾಜು ಸಂಗೊಳ್ಳಿ, ದೀಪಾ ಸಾಧುನವರ, ಜಯಶ್ರೀ ಪಾಟೀಲ, ಪತ್ರಕರ್ತ ವಿನೋದ ಮರೆಪ್ಪನವರ ಉಪಸ್ಥಿತರಿದ್ದರು.