ಮಂಗಳೂರು: ಮಾನವೀಯ ಮೌಲ್ಯದೊಂದಿಗೆ ವೈದ್ಯಕೀಯ ಸೇವೆ ಸಲ್ಲಿಸಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ, ಮಾರ್ಗದರ್ಶನ ನೀಡಿದ ಸ್ತ್ರೀ ಆರೋಗ್ಯ ಮತ್ತು ಪ್ರಸೂತಿ ತಜ್ಞೆಯಾಗಿದ್ದ ದಿ.ಡಾ.ಎಚ್.ಟಿ. ಮನೋರಮಾ ರಾವ್ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮ ಭಾರತೀಯ ವೈದ್ಯಕೀಯ ಸಂಘ ಮಂಗಳೂರು ಶಾಖೆ ಮತ್ತು ಮಹಿಳಾ ವೈದ್ಯರ ಸಂಘದ ಜಂಟಿ ಆಶ್ರಯದಲ್ಲಿ ಐಎಂಎ ಡಾ.ಎ.ವಿ. ರಾವ್ ಸಭಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ನೇತೃತ್ವದಲ್ಲಿ ಜರುಗಿತು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ತುಮಕೂರು ನಗರದ ಸ್ತ್ರೀ ಆರೋಗ್ಯ ಮತ್ತು ಪ್ರಸೂತಿ ತಜ್ಞ, ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ದುರ್ಗಾದಾಸ್ ಅಸ್ರಣ್ಣ ದತ್ತಿ ಉಪನ್ಯಾಸ ನೀಡಿ, ಸಿಝೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಪ್ರಸ್ತುತ ಬೆಳವಣಿಗೆ, ಪರಿಕಲ್ಪನೆ, ಪ್ರಗತಿ ಮತ್ತು ಸಾಧಕ ಬಾಧಕಗಳ ಮಾಹಿತಿ ನೀಡಿದರು. ಅಧಿಕ ಪ್ರಮಾಣದಲ್ಲಿ ದೇಶದಲ್ಲಿ ವಾರ್ಷಿಕ ಶೇ.21.5 ಸಿಝೇರಿಯನ್ ಶಸ್ತ್ರ ಚಿಕಿತ್ಸೆನಡೆಯುತ್ತವೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ, ಸಾಧಿಸಿದ ಸಾಧನೆಗಳನ್ನು ಪರಿಗಣಿಸಿ ಸನ್ಮಾನಿಸಲಾಯಿತು.
ಕೆ.ಎಸ್. ಹೆಗ್ಡೆ ವೈದ್ಯಕೀಯ ಕಾಲೇಜಿನ ನಿವೃತ್ತ ಮತ್ತು ಹಿರಿಯ ಸ್ತ್ರೀ ಆರೋಗ್ಯ ತಜ್ಞೆ ಡಾ. ವಸಂತಿ ಶೆಟ್ಟಿ ಮಾತನಾಡಿ, ದಿ.ಡಾ. ಮನೋರಮಾ ರಾವ್ ಅವರು ಕೆ.ಎಂ.ಸಿ. ಕಾಲೇಜಿನಲ್ಲಿ ಉತ್ತಮ ಶಿಕ್ಷಕಿಯಾಗಿ ಹಾಗೂ ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾಗಿದ್ದರು ಎಂದು ನುಡಿದರು.ನಗರದ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಗೌರವ ಅತಿಥಿಯಾಗಿ ಪಾಲ್ಗೊಂಡು, ಡಾ.ಮನೋರಮಾ ರಾವ್ ಅವರು ಲೇಡಿಗೋಶನ್ ಆಸ್ಪತ್ರೆಯಲ್ಲಿ ಸಲ್ಲಿಸಿದ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆಯನ್ನು ಸ್ಮರಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಸ್ವಾಗತಿಸಿದರು. ಮಹಿಳಾ ವೈದ್ಯ ಸಂಘದ ಅಧ್ಯಕ್ಷೆ ಡಾ. ಪ್ರೇಮಾ ಡಿಕುನ್ಹಾ ಅವರು ದಿ.ಡಾ. ಮನೋರಮಾ ರಾವ್ ಅವರ ವೃತ್ತಿ ಸೇವೆ, ಶೈಕ್ಷಣಿಕ ಸೇವೆ, ಸಾಧನೆ ಮತ್ತು ವಿವಿಧ ಪ್ರಶಸ್ತಿಗಳಿಗೆ ಪಾತ್ರರಾದ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಗರದ ಜಯಶ್ರೀ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ.ಎಚ್.ಟಿ. ಜಯಪ್ರಕಾಶ್ ರಾವ್, ಸಂಸ್ಥೆಯ ಚುನಾಯಿತ ಅಧ್ಯಕ್ಷ ಡಾ. ಉಲ್ಲಾಸ್ ಶೆಟ್ಟಿ, ಕೋಶಾಧಿಕಾರಿ ಡಾ. ಜೂಲಿಯನ್ ಸಲ್ಡಾನ್ಹ ಇದ್ದರು. ಡಾ. ಮಧುರಾ ಭಟ್ ನಿರೂಪಿಸಿದರು. ಕಾರ್ಯದರ್ಶಿ ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.