ಹರಪನಹಳ್ಳಿ: ರಾಜ್ಯದಲ್ಲಿ ಇಂದು ಎಸ್‌ಐಆರ್ ಎನ್ನುವ ಭೂತದ ಬ್ರಹ್ಮಾಸ್ತ್ರವನ್ನು ಬಿಟ್ಟಿದ್ದು, ಇದನ್ನು ನಾವೆಲ್ಲ ಸೇರಿ ಪಾಶುಪತಾಸ್ತ್ರದಿಂದ ಹೊಡೆದು ಹಾಕಬೇಕಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪರಸ್ಕೃತ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದ್ದಾರೆ.

ಅವರು ನಗರದ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜನದನಿ ಸಾಹಿತ್ಯ ವೇದಿಕೆಯಿಂದ ಸ್ಥಳೀಯ ಲೇಖಕ ಇಸ್ಮಾಯಿಲ್ ಯಲಿಗಾರ ಅವರು ರಚಿಸಿರುವ ''''''''ಸುಳ್ಳುಗಳ ಮಾರುಕಟ್ಟೆಯಲ್ಲಿ'''''''' ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಚಳವಳಿಯ ಚರಿತ್ರೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದನ್ನು ಮರೆಮಾಚಿ ದೇಶವನ್ನು ಜಾತಿಯ ಲೆಕ್ಕಾಚಾರದಲ್ಲಿ ಇಬ್ಭಾಗ ಮಾಡಿದರು ಎಂದು ಆರೋಪಿಸಿದರು. ಇಲ್ಲಿವರೆಗೂ ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರಿಗೆ ಇತಿಹಾಸದಲ್ಲಿ ನ್ಯಾಯ ಸಿಕ್ಕಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸುಳ್ಳುಗಳ ಮಾರುಕಟ್ಟೆಯಲ್ಲಿ ಎಂಬ ಪುಸ್ತಕ ಪ್ರಸ್ತುತ ವರ್ತಮಾನದ ತಲ್ಲಣಗಳ ಬಗೆಗಿನ ವ್ಯಂಗ್ಯದ ಪ್ರತೀಕವಾಗಿದೆ. ಪ್ರಜಾಪ್ರಭುತ್ವದಲ್ಲಿನ ಗುಲಾಮಿತನವನ್ನು ಈ ಪುಸ್ತಕದಲ್ಲಿ ಸರಾಗವಾಗಿ ವಿವರಿಸುವ ಕೆಲಸ ಲೇಖಕ ಇಸ್ಮಾಯಿಲ್ ಯಲಿಗಾರ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ನುಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಸಾಹಿತಿ ಡಿ.ರಾಮನಮಲಿ, ಸಾಹಿತಿ ನಿರ್ಮಲಾ ಶಿವನಗುತ್ತಿ, ಪುರಸಭೆ ಮಾಜಿ ಅಧ್ಯಕ್ಷ ಡಿ.ಅಬ್ದುಲ್ ರೆಹಮಾನ್, ವಕೀಲರ ಸಂಘದ ಅಧ್ಯಕ್ಷ ಟಿ.ವೆಂಕಟೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಲೇಖಕ ಇಸ್ಮಾಯಿಲ್ ಎಲಿಗಾರ, ಕೋಡಿಹಳ್ಳಿ ಭೀಮಪ್ಪ, ಮೋರಗೇರಿ ಹೇಮಣ್ಣ, ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರಾಚಾರ್ಯ ಸಿ.ಎಂ. ವೀರೇಶ್‌, ಮೇಟಿ ಕೊಟ್ರಪ್ಪ, ಹುಲಿಕಟ್ಟೆ ಚೆನ್ನಬಸಪ್ಪ, ಗುಡಿಹಳ್ಳಿ ಹಾಲೇಶ್, ಎನ್.ಜಿ.ಬಸವರಾಜ್ ಇದ್ದರು.


ಹರಪನಹಳ್ಳಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಾಹಿತಿ ಇಸ್ಮಾಯಿಲ್‌ ಯಲಿಗಾರ ರಚಿಸಿದ ಸುಳ್ಳುಗಳ ಮಾರುಕಟ್ಟೆಯಲ್ಲಿ ಪುಸ್ತಕವನ್ನು ಹಿರಿಯ ಸಾಹಿತಿ ಕುಂ.ವೀ ಲೋಕಾರ್ಪಣೆಗೊಳಿಸಿದರು.