ಕನ್ನಡಪ್ರಭ ವಾರ್ತೆ ಯಲ್ಲಾಪುರ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಚುನಾವಣಾ ಆಯೋಗ ಕೈಗೊಂಡಿದ್ದು, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ವಭಾವಿಯಾಗಿ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ ಎಂದು ಮತದಾರರ ನೊಂದಣಾಧಿಕಾರಿ ಕೆ.ಎಚ್. ಪಾಂಡು ಹೇಳಿದರು.ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದರು. ಜೂ.೩೦ರಿಂದ ಜು.೨೯ರವರೆಗೆ ಮತಗಟ್ಟೆಯ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಅರ್ಜಿ ನಮೂನೆ ನೀಡುತ್ತಾರೆ. ಜು.೨೯ ರಂದು ಮತಗಟ್ಟೆಗಳ ಪುನರ್ ವಿಂಗಡಣಾ ಕಾರ್ಯ ಮಾಡಲಾಗುತ್ತದೆ. ಆ.೫ರಂದು ಕರಡು ಮತಪಟ್ಟಿ ಪ್ರಕಟಿಸಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಆ.೫ರಿಂದ ಸೆ.೪ ಈ ಅವಧಿಯಲ್ಲಿ ಸಲ್ಲಿಸಬಹುದು. ಸೆ. ೫ ರಿಂದ ಅ. ೩ ವರೆಗೆ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗುತ್ತದೆ. ಪರಿಷ್ಕರಣೆಗೆ ಅರ್ಹತಾ ದಿನಾಂಕ ಅ.೧ರ ನಂತರ, ಅ.೭ರಂದು ಅಂತಿಮ ಮತದಾರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.
ಯಲ್ಲಾಪುರ ಕ್ಷೇತ್ರದಲ್ಲಿ ೩ ಸಹಾಯಕ ಮತದಾರ ನೊಂದಣಾಧಿಕಾರಿಗಳು, ೨೩೪ ಮತಗಟ್ಟೆ ಅಧಿಕಾರಿಗಳು, ೨೬ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಿ.ಎಲ್.ಒಗಳು ಹಾಗೂ ರಾಜಕೀಯ ಪಕ್ಷಗಳ ಏಜೆಂಟರಿಗೆ ಎಸ್ಐಆರ್ ಪ್ರಕ್ರಿಯೆ ಬಗೆಗೆ ತರಬೇತಿ, ಮಾಹಿತಿ ನೀಡಲಾಗಿದೆ. ಬಿ.ಎಲ್.ಓಗಳ ಕಾರ್ಯದಲ್ಲಿ ಪಕ್ಷಗಳ ಏಜೆಂಟರೂ ಸಹಕರಿಸಬಹುದಾಗಿದೆ ಎಂದರು.ಈಗಾಗಲೇ ಕ್ಷೇತ್ರವಾರು ನೋಡೆಲ್ ಅಧಿಕಾರಿ, ಹೊಬಳಿ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟೂ ೧,೮೯,೫೦೨ ಮತದಾರರಿದ್ದು, ಮತದಾರರ ಸಮಗ್ರ ಪರಿಷ್ಕರಣೆ ನಡೆಸಲಾಗುತ್ತದೆ. ಪೂರ್ವ ತಯಾರಿಯಾಗಿ ಈಗಾಗಲೇ ಶೇ. ೯೫ರಷ್ಟು ಮ್ಯಾಪಿಂಗ್ ಮಾಡಲಾಗಿದೆ. ಮತಗಟ್ಟೆ ಅಧಿಕಾರಿಗಳು ಒಂದು ತಿಂಗಳ ಅವಧಿಯಲ್ಲಿ ಮೂರು ಸಲ ಮನೆ ಭೇಟಿ ನೀಡಿ ನಮೂನೆ ಭರ್ತಿ ಮಾಡಿಸಿಕೊಳ್ಳಲಿದ್ದಾರೆ. ಅದನ್ನು ಆಧರಿಸಿ ಪರಿಷ್ಕರಣೆ ನಡೆಸಲಾಗುತ್ತದೆ ಎಂದರು.
ಪ್ರತಿಯೊಬ್ಬ ಅರ್ಹ ಮತದಾರನೂ ಮತದಾರರ ಪಟ್ಟಿಯಿಂದ ಹೊರಗಿರಬಾರದು. ಅನರ್ಹರು ಪಟ್ಟಿಯಲ್ಲಿ ಸೇರಿರಬಾರದು ಎಂಬ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದೆ. ೨೦೦೨ರಲ್ಲಿ ಈ ಪ್ರಕ್ರಿಯೆ ನಡೆದಿದ್ದು, ೨೪ ವರ್ಷಗಳ ನಂತರ ಮತ್ತೆ ನಡೆಯುತ್ತಿದೆ. ಪಾರದರ್ಶಕವಾಗಿ ಎಲ್ಲ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದರು.
ತಹಸೀಲ್ದಾರ ಎಂ.ಆರ್. ಕುಲಕರ್ಣಿ, ತಾಪಂ ಇಒ ರಾಜೇಶ ಧನವಾಡಕರ್ ಇದ್ದರು.