ಕನ್ನಡಪ್ರಭವಾರ್ತೆ ತುರುವೇಕೆರೆ

ಇಲ್ಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳು ರಚಿಸಿಕೊಂಡಿರುವ ಸ್ನೇಹ ಮಿಲನ ಟ್ರಸ್ಟ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡವರು ಹಾಗೂ ಪೋಷಕರನ್ನು ಕಳೆದುಕೊಂಡಿರುವ ಸುಮಾರು 50 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.

ಸ್ನೇಹ ಮಿಲನ ಟ್ರಸ್ ನ ಅಧ್ಯಕ್ಷ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ನಾವೆಲ್ಲಾ ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದವರು. ಆಗ ನಾವೆಲ್ಲರೂ ಆರ್ಥಿಕವಾಗಿ ಹೇಳಿಕೊಳ್ಳುವಂತಹ ಕುಟುಂಬದಿಂದ ಬಂದವರೇನಲ್ಲ. ಆದರೆ ಆ ವೇಳೆ ಇಷ್ಠ ಮತ್ತು ಕಷ್ಟಪಟ್ಟು ಓದಿದ ಹಿನ್ನೆಲೆಯಲ್ಲಿ ಒಬ್ಬೊಬ್ಬರೂ ಒಂದೊಂದು ಉತ್ತಮ ಹುದ್ದೆಯನ್ನು ಹೊಂದಿದ್ದೇವೆ. ಈಗ ನಮ್ಮ ಕುಟುಂಬ ಆರ್ಥಿಕವಾಗಿ ಮುಂದುವರೆದಿದೆ. ಹಾಗಾಗಿ ನಾವೆಲ್ಲರೂ ಸೇರಿ ಮಾಡಿಕೊಂಡಿರುವ ಸ್ನೇಹ ಮಿಲನ ಟ್ರಸ್ಟ್ ವತಿಯಿಂದ ಬಡವರು ಹಾಗೋ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಬರುತ್ತಿದ್ದೇವೆ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಹಾಗೂ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಡಾ.ಪ್ರಸನ್ನ ಕುಮಾರ್ ಮಾತನಾಡಿ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಉತ್ತಮವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಹಂತದಲ್ಲಿ ನಿಮಗೆ ನೀವೇ ಮನಸ್ಸಿನ ಹತೋಟಿಯನ್ನು ತಂದುಕೊಳ್ಳಬೇಕು ಎಂದು ಹೇಳಿದರು. ಖಜಾಂಚಿ ಯೋಗಾನಂದ್‌, ನಟರಾಜು, ಉಮೇಶ್, ಶಶಿಧರ್, ರಾಜೀವ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ನಂಜೇಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಷಣ್ಮುಖ ಸ್ವಾಗತಿಸಿದರು. ರಷ್ಮಿತ ನಿರೂಪಿಸಿದರು. ವಿನುತಾ ವಂದಿಸಿದರು.