ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ

| Published : Sep 29 2025, 01:02 AM IST

ಸಾರಾಂಶ

ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗದೆ ತಳ ಸಮುದಾಯಗಳು ಮುಂದುವರೆಯಲು ಸಾಧ್ಯವಿಲ್ಲ. ನಾವು ಶಿಕ್ಷಣ ಪಡೆದು ಬದಲಾದರೆ ಸಮುದಾಯವೂ ಬದಲಾಗುತ್ತದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ ಎಲ್ಲ ಸಮಾಜದವರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರುಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯಾಗದೆ ತಳ ಸಮುದಾಯಗಳು ಮುಂದುವರೆಯಲು ಸಾಧ್ಯವಿಲ್ಲ. ನಾವು ಶಿಕ್ಷಣ ಪಡೆದು ಬದಲಾದರೆ ಸಮುದಾಯವೂ ಬದಲಾಗುತ್ತದೆ. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಹಾಗಾಗಿ ಎಲ್ಲ ಸಮಾಜದವರೂ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ನಗರದ ಸರಸ್ವತಿಪುರಂನಲ್ಲಿ ಭಾನುವಾರ ವಾಲ್ಮೀಕಿ ವಿದ್ಯಾವರ್ಧಕ ಸಂಘ ನಿರ್ಮಿಸಿರುವ ವಿದ್ಯಾರ್ಥಿನಿಲಯ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವಾಲ್ಮೀಕಿ ಸಮಾಜ ಈಗ ಎಚ್ಚೆತ್ತುಕೊಂಡು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ದೇಶದ ಶೇಕಡ 80 ರಷ್ಟು ಅಕ್ಷರಸ್ಥರಲ್ಲಿ ಎಸ್.ಸಿ, ಎಸ್.ಟಿ. ಸಮಾಜ ಶೇಕಡ 52 ರಷ್ಟು ಅಕ್ಷರಸ್ಥರಿದ್ದಾರೆ ಎಂದು ಹೇಳಲಾಗಿದೆ ಎಂದರು.ಈ ದೇಶಕ್ಕೆ ಸಾಮಾಜಿಕ ಚಿಂತನೆ, ಧಾರ್ಮಿಕ ಚಿಂತನೆ, ದೂರದೃಷ್ಟಿ ಹಾಕಿಕೊಟ್ಟ ಮಹರ್ಷಿ ವಾಲ್ಮೀಕಿಯವರ ಸಮಾಜದ ಇವತ್ತಿನ ಸ್ಥಿತಿಗತಿ ಏನು? ಸಮಾಜ ವರ್ಗೀಕರಣ ಮಾಡಿದ ಪುರೋಹಿತ ಶಾಹಿಗಳು ಇವತ್ತಿಗೂ ವಾಲ್ಮೀಕಿ ರಚಿಸಿದ ರಾಮಾಯಣ ಉಲ್ಲೇಖ ಮಾಡುತ್ತಾರೆ. ಆದರೆ ಅವರ ಸಮಾಜದ ಪರಿಸ್ಥಿತಿ ಏನಾಗಿದೆ ಎಂದು ನಾವು ಚಿಂತನೆ ಮಾಡಬೇಕಾಗಿದೆ ಎಂದು ಹೇಳಿದರು.ಇಂತಹ ಸಮಾಜಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲು ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ.ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಎಸ್ಸಿ, ಎಸ್ಟಿಗಳ ಜನಸಂಖ್ಯೆ 1.9 ಕೋಟಿಯಷ್ಟಿದೆ. ಎಸ್ಸಿ, ಎಸ್ಟಿಗಳು ಕಾನೂನಿನ ಪ್ರಕಾರ ಬೇರೆ ಬೇರೆಯಾದರೂ ಸಾಮಾಜಿಕವಾಗಿ ಬೇರೆ ಬೇರೆ ಅಲ್ಲ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ವಿದ್ಯೆಯಿಂದ ವಂಚಿತವಾಗಿದ್ದ ವಾಲ್ಮೀಕಿ ಸಮುದಾಯದಲ್ಲಿ ಶೈಕ್ಷಣಿಕ ಜಾಗೃತಿ ಮೂಡಿದ್ದು ದೇವರಾಜ ಅರಸು, ಎಲ್.ಜಿ.ಹಾವನೂರರ ಪ್ರವೇಶ ಮಾಡಿದ ನಂತರ. ಆ ನಂತರ ಶಿಕ್ಷಣದ ಪ್ರವೇಶದಲ್ಲಿ ಮೀಸಲಾತಿ ತಂದ ಮೇಲೆ ನಮ್ಮವರು ಡಾಕ್ಟರ್, ಎಂಜಿನಿಯರ್ ಆಗಲು ಸಾಧ್ಯವಾಯಿತು. ವಿದ್ಯೆ ಯಾರಪ್ಪನ ಸ್ವತ್ತೂ ಅಲ್ಲ, ಅದು ಸಾಧಕನ ಸೊತ್ತು. ಶ್ರದ್ಧೆಯಿಂದ ಅಭ್ಯಾಸ ಮಾಡಿದವರಿಗೆ ವಿದ್ಯೆ ಒಲಿಯುತ್ತದೆ ಎಂದರು.

ಈಗ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯಲ್ಲಿ ವಾಲ್ಮೀಕಿ ಸಮಾಜದವರು ಜಾತಿಕಾಲಂನಲ್ಲಿ ತಪ್ಪದೇ ‘ನಾಯಕ’ಎಂದು ನಮೂದಿಸಬೇಕು ಎಂದರು.ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ವಾಲ್ಮೀಕಿ ವಿದ್ಯಾವರ್ಧಕ ಸಂಘ ಸ್ಥಾಪಿಸಿರುವ ಐಟಿಐನಲ್ಲಿ ಗುಣಮಟ್ಟದ ತರಬೇತಿ ನೀಡಿದರೆ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳು ಹೇರಳವಾಗಿವೆ. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಪರಿಣತರನ್ನಾಗಿ ರೂಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಪಾವಗಡ ಶಾಸಕರ ವೆಂಕಟೇಶ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಎಸ್.ಆರ್.ಶಾಂತಲಾ ರಾಜಣ್ಣ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಡ.ಕೆ.ಆರ್.ರಾಜಕುಮಾರ್, ವಾಲ್ಮೀಕಿ ವಿದ್ಯಾವರ್ಧಕ ಸಂಘದಅಧ್ಯಕ್ಷ ಹೆಚ್.ಜಿ.ಪುರುಷೋತ್ತಮ್,ನಿಕಟಪೂರ್ವಅಧ್ಯಕ್ಷದೊಡ್ಡಯ್ಯ, ಉಪಾಧ್ಯಕ್ಷಆರ್.ವಿಜಯಕುಮಾರ್, ಮಾಜಿ ಮೇಯರ್, ಕಾರ್ಯದರ್ಶಿ ಬಿ.ಜಿ.ಕೃಷ್ಣಪ್ಪ, ಸಹಕಾರ್ಯದರ್ಶಿ ಡಾ.ಅಂಜನ್‌ಕುಮಾರ್ ವಾಲ್ಮೀಕಿ, ನಿರ್ದೇಶಕರಾದ ಸರಸ್ವತಿ, ಎಸ್.ಆರ್.ರಾಜಕುಮಾರ್, ವಿ.ನಾಗರಾಜಯ್ಯ, ಪಿ.ಎಸ್.ನರಸಿಂಹಕೃಷ್ಣ, ಜಿ.ತಿಪ್ಪೇಸ್ವಾಮಿ, ಜಿ.ಆರ್.ನಾಗರಾಜು, ಆರ್.ಉಮೇಶ್, ನಾರಾಯಣಪ್ಪ, ಬಿ.ಎಸ್.ಶಿವಸ್ವಾಮಿ ಭಾಗವಹಿಸಿದ್ದರು.ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮೀನಾರಾಯಣ, ಎಸ್.ಆರ್.ರಾಜಕುಮಾರ್, ಗುತ್ತಿಗೆದಾರ ಮೃತ್ಯುಂಜಯಅವರನ್ನು ಸನ್ಮಾನಿಸಲಾಯಿತು.ಕೋಟ್‌...

ಜಾತಿ ವ್ಯವಸ್ಥೆ ಹೋಗಬೇಕು ಎಂದು 800 ವರ್ಷಗಳ ಹಿಂದೆ ಬಸವಣ್ಣ ಹೋರಾಟ ಮಾಡಿದರು. ನಂತರ ಗಾಂಧೀಜಿ, ಡಾ.ಅಂಬೇಡ್ಕರ್‌ ಜಾತಿ ಪದ್ಧತಿ ಹೋಗಿ ಎಲ್ಲರಲ್ಲೂ ಸಮಾನತೆ ಬರಬೇಕು ಎಂದು ಬಯಸಿದ್ದರು. ಆದರೆ ಇವತ್ತಿನ ಪರಿಸ್ಥಿತಿಯಲ್ಲಿ ಜಾತಿ ವಿಜೃಂಭಿಸುತ್ತಿದೆ. ಜಾತಿಗಳಲ್ಲಿ ಉಪಜಾತಿ, ಅದರೊಳಗೆ ಇನ್ನೂ ಉಪಜಾತಿಗಳು ಕಾಣುತ್ತಿವೆ. ನಾವು ಎಲ್ಲಿ ಹೋಗಿ ತಲುಪುತ್ತೇವೆ? - ಡಾ.ಜಿ.ಪರಮೇಶ್ವರ್ , ಗೃಹ ಸಚಿವ