ಸಮಾಜದ ದುರ್ಬಲರು, ಸಾಮಾಜಿಕವಾಗಿ ಕಟ್ಟಕಡೆಯಲ್ಲಿರುವವರಿಗೆ ಮೊದಲ ಆದ್ಯತೆಯಾಗಿ ಸಹಾಯ ಸಹಕಾರ ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇವರಿಗೆ ಗೌರವ ಸಿಗುವಂತಾಗಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ತಿಳಿಸಿದರು.

ಹಾನಗಲ್ಲ: ಸಮಾಜದ ದುರ್ಬಲರು, ಸಾಮಾಜಿಕವಾಗಿ ಕಟ್ಟಕಡೆಯಲ್ಲಿರುವವರಿಗೆ ಮೊದಲ ಆದ್ಯತೆಯಾಗಿ ಸಹಾಯ ಸಹಕಾರ ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಇವರಿಗೆ ಗೌರವ ಸಿಗುವಂತಾಗಬೇಕಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ತಿಳಿಸಿದರು.ಹಾನಗಲ್ಲ ತಾಲೂಕಿನ ಬೆಳಗಾಲಪೇಟೆ ವಲಯದ ಜಕನಾಯಕನಕೊಪ್ಪ ಗ್ರಾಮದಲ್ಲಿ ಸಾವಕ್ಕ ಹರಿಜನ ಎಂಬುವವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನೆರವಿನಲ್ಲಿ ವಸತಿಗಾಗಿ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಅಶಕ್ತರು, ದುರ್ಬಲರಿಗೆ ಆರೈಕೆ ನೀಡುವುದೇ ನಿಜವಾದ ಸೇವೆ. ದೇವರು ಕೂಡ ಇದನ್ನು ಮೆಚ್ಚುತ್ತಾನೆ. ದಾನ ಧರ್ಮ ಎಂಬುದು ಆಸಕ್ತರಿಗೆ ನೀಡಬೇಕಾಗಿರುವಂತಹದ್ದಾಗಿದೆ. ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರ ಧರ್ಮಪತ್ನಿ ಹೇಮಾವತಿ ಅಮ್ಮನವರು ಕಟ್ಟಿದ ಕನಸು ಈ ವಾತ್ಸಲ್ಯ ಮನೆ ನಿರ್ಮಾಣ ಆಗಿದೆ. ದುರ್ಬಲ ಕುಟುಂಬದವರಿಗೆ ಸಾಂತ್ವನವೂ ಬೇಕು. ಅದರೊಂದಿಗೆ ಉತ್ತಮ ಸಹಾಯ ಸಹಕಾರವೂ ಬೇಕು. ಇಂತಹವರನ್ನು ಗುರುತಿಸಿ ಮನೆ ನಿರ್ಮಿಸಿ ಕೊಡುವುದರ ಜೊತೆಗೆ ದಿನ ಬಳಕೆ ಬಟ್ಟೆ, ಪಾತ್ರೆ, ವಾತ್ಸಲ್ಯ ಮಿಕ್ಸ್ ಆಹಾರ, ಸಿರಿಧಾನ್ಯ ಅಲ್ಲದೆ ಪ್ರತಿ ತಿಂಗಳು ೧ ಸಾವಿರ ರೂ ಮಾಸಾಶನವನ್ನೂ ಕೂಡ ನೀಡಲಾಗುತ್ತಿದೆ. ಇದಕ್ಕೆಲ್ಲ ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವಸಹಾಯ ಸಂಘಗಳ ಪೂರ್ಣ ಸಹಕಾರವಿದೆ ಎಂದರು.ರೈತ ಸಂಘದ ಅಧ್ಯಕ್ಷ ಚನ್ನಬಸಪ್ಪ ಹಾವಣಗಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಸಮಾಜಿಕ ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದೆ. ಮಹಿಳೆಯರನ್ನು ಸಂಘಟಿಸಿ ಉತ್ತಮ ದುಡಿಮೆ, ಆರ್ಥಿಕ ಉಳಿಕೆ, ಕೌಟುಂಬಿಕ ಸಾಮರಸ್ಯಕ್ಕಾಗಿ ಹೆಚ್ಚು ಕಾಳಜಿಯಿಂದ ಕೆಲಸ ಮಾಡುತ್ತಿದೆ. ಇನ್ನು ಕೆಲವೇ ಕಾಲದಲ್ಲಿ ಎಲ್ಲ ಗ್ರಾಮಗಳು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸಂಘದ ಚಟುವಟಿಕೆಗಳು ಕ್ರಿಯಾಶೀಲವಾಗಿವೆ. ನಿರ್ಗತಿಕರಿಗೆ ವಾಸಕ್ಕೆ ಮನೆ, ಊಟ ಉಡುಗೆಯ ಅನುಕೂಲವನ್ನೂ ಕಲ್ಪಿಸುವ ಮೂಲಕ ಸಾರ್ಥಕ ಸೇವೆಯಲ್ಲಿ ಸಂಘ ತೊಡಗಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹಾವೇರಿ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು, ಧಾರವಾಡ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿ ಸುಧಾ, ತಾಲೂಕು ಯೋಜನಾಧಿಕಾರಿ ರಘುರಾಮ, ಜ್ಞಾನವಿಕಾಸ ಸಮನ್ವಯಾಧಿಕಾರಿ ಜ್ವಾಲಮ್ಮ ಸೋಮಣ್ಣನವರ, ವಲಯ ಮೇಲ್ವಿಚಾರಕ ಮಂಜುನಾಥ ಉಣಕಲ್, ಒಕ್ಕೂಟದ ಅಧ್ಯಕ್ಷೆ ದ್ಯಾಮಮ್ಮ ಸಕನಳ್ಳಿ ಮೊದಲಾದವರು ಈ ಸಂದರ್ಭದಲ್ಲಿದ್ದರು.ಹಿರೇಬಾಸೂರಿನಲ್ಲಿ: ಹಾನಗಲ್ಲ ತಾಲೂಕಿನ ಹಿರೇಬಾಸೂರು ಕ್ಷೇತ್ರದ ಮುಳಥಳ್ಳಿಯ ಪಾರವ್ವ ಶಿಪ್ಪಪ್ಪ ವೀರಾಪುರ ಅವರಿಗೆ ಕೂಡ ವಾತ್ಸಲ್ಯ ಮನೆ ಹಸ್ತಾಂತರ ಮಾಡಲಾಯಿತು.