ಕೂಡ್ಲಿಗಿ: ತಾಲೂಕಿನಲ್ಲಿ ಸೋಲಾರ್, ಪವನ್ ವಿದ್ಯುತ್ ಕಂಬಗಳಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದು ತಾಲೂಕು ಆಡಳಿತದ ವೈಫಲ್ಯ ಎಂದು ಡಾ.ಬಿ.ಆರ್. ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಪಿ.ಸಂತೋಷಕುಮಾರ್ ಆರೋಪಿಸಿದರು.

ಅವರು ಕೂಡ್ಲಿಗಿ ಪಟ್ಟಣದ ಪ್ರವಾಸ ಮಂದಿರದಲ್ಲಿ ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ ಹಾಗೂ ಅಂಬೇಡ್ಕರ್ ಯುವ ಸೇನೆ ಹಾಗೂ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, (ಮಂಜುನಾಥ ಬಣ) ದಿಂದ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ತಾಲೂಕಿನಾದ್ಯಾಂತ ಜೆಎಸ್‌ಡಬ್ಲು, ರಿನ್ಯೂ ಎನರ್ಜಿ ಕಂಪನಿಗಳು ತೋರಣಗಲ್ಲು ಹಾಗೂ ಕೆಲವು ಕಂಪನಿಯವರು ಅಕ್ರಮ ಮತ್ತು ಅನಧಿಕೃತವಾಗಿ ವಿದ್ಯುತ್ ಪ್ರಸರಣ ಮಾರ್ಗದ ವಿದ್ಯುತ್ ಗೋಪುರ ಕಂಬಗಳು ಹಾಗೂ ಇತರೆ ವಿದ್ಯುತ್ ಕಂಬಗಳನ್ನು ಸ್ಥಾಪಿಸಿವೆ. ಕಂಪನಿಗಳು ರೈತರ ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬಗಳಿಗೆ ಪರಿಹಾರ ನೀಡಿಲ್ಲ. ರೈತರಿಗೂ ಹಾಗೂ ಸರ್ಕಾರಕ್ಕೆ ನೂರಾರು ಕೋಟಿ ತೆರಿಗೆಯನ್ನು ಕಟ್ಟದೇ ರಾಜಾರೋಷವಾಗಿ ಸರ್ಕಾರಿ ಜಮೀನುಗಳಲ್ಲಿ ಸರ್ಕಾರದ ಪರವಾನಗಿ ಪಡೆಯದೇ ವಿಂಡ್ ಫ್ಯಾನ್‌ಗಳನ್ನು ಅಳವಡಿಸಿದರೂ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಮೌನ ವಹಿಸಿದೆ ಎಂದು ಆರೋಪಿಸಿದರು.

ಆಯಾ ಗ್ರಾಪಂಗಳ ವ್ಯಾಪ್ತಿ ಅಳವಡಿಸಿರುವ ವಿಂಡ್ ಫ್ಯಾನ್‌ಗಳ ಪರವಾನಗಿಗೆ ಪಂಚಾಯಿತಿಗಳಿಗೆ ಕಟ್ಟುವಂತಹ ಶುಲ್ಕವನ್ನು ಕಂಪನಿಗಳು ಕಟ್ಟಿದರೆ ಲಕ್ಷ ಲಕ್ಷ ಹಣ ಗ್ರಾಮದ ಅಭಿವೃದ್ಧಿಗಾಗಿ ಬಳಸಬಹುದು. ಆದರೆ ಯಾವುದೇ ಶುಲ್ಕ ಕಟ್ಟದೇ ಇರುವಂತಹ ಮಾಹಿತಿಯನ್ನು ನಮಗೆ ಕೆಲ ಗ್ರಾಪಂ ಅಧಿಕಾರಿಗಳು ನೀಡಿದ್ದಾರೆ. ಕಂಪನಿಗಳ ದರ್ಪ, ದೌರ್ಜನ್ಯಗಳ ಮುಂದೆ ಯಾವ ಕಾನೂನು ಕೆಲಸ ಮಾಡುತ್ತಿಲ್ಲ. ಸರ್ಕಾರದ ನಿಯಮ ಪಾಲನೆ ಮಾಡದೇ ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ನಿಯಮಗಳನ್ನು ಪಾಲನೆ ಮಾಡದೇ ಎಲ್ಲ ನಿಯಮಗಳು ಗಾಳಿಗೆ ತೂರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನೇಕ ಬಾರಿ ಅನಧಿಕೃತವಾಗಿ ಅಳವಡಿಸಿರುವ ಫ್ಯಾನ್, ಕಂಬಗಳ ಬಗ್ಗೆ ಜಿಲ್ಲಾಧಿಕಾರಿಗೆ, ಹೊಸಪೇಟೆಯ ಸಹಾಯಕ ಆಯುಕ್ತರು, ತಾಲೂಕು ಆಡಳಿತಾಧಿಕಾರಿಗಳಿಗೆ ಮನವಿ ಕೊಟ್ಟರೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.


ತಾಲೂಕು ರೈತ ಸಂಘದ ಅಧ್ಯಕ್ಷ ಬಾಣದ ಮಾರುತಿ ಮಾತನಾಡಿ, ಕೆಲವು ಕಂಪನಿಗಳು ರಿಜಿಸ್ಟರ್ ಆದ ಸರ್ವೆ ನಂಬರಿನ ಚೆಕ್‌ಬಂದಿಯನ್ನು ಬಿಟ್ಟು ಬೇರೆ ಕಡೆಗೆ ಇರುವಂತಹ ಸರ್ವೇ ನಂಬರ್ ಗಳನ್ನು ಕೊಟ್ಟು ರಿಜಿಸ್ಟರ್ ಮಾಡಿರುವ ಸಂಗತಿ ನಡೆದಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಸೂಲದಹಳ್ಳಿ ಬಸವರಾಜ್, ರೈತ ಮುಖಂಡರಾದ ಬಸವರಾಜಪ್ಪ, ಮಲಿಯಪ್ಪ, ಗುಣಸಾಗರದ ಮಾರಪ್ಪ, ಜಿ.ಒ. ಓಬಯ್ಯ, ಹನುಮಂತಪ್ಪ, ಮಾರಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಎಂಡಿ ಫಯಾಜ್, ಸಹ ಕಾರ್ಯದರ್ಶಿ ವಿಜಯಕುಮಾರ್, ಸಂತೋಷ್ ಕುಪ್ಪನಕೇರಿ, ಕೋಟೆಪ್ಪ ಭಾಗವಹಿಸಿದ್ದರು.