ಮಧ್ಯವರ್ತಿಗಳ ಸಹಾಯವಿಲ್ಲದೇ ಜನರ ಸಮಸ್ಯೆ ಪರಿಹಾರ

| Published : May 18 2025, 11:45 PM IST / Updated: May 18 2025, 11:46 PM IST

ಸಾರಾಂಶ

ಮಧ್ಯವರ್ತಿಗಳ ಸಹಾಯವಿಲ್ಲದೆ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ನೇರವಾಗಿ ತೆರಳಿ ಪರಿಹರಿಸಲು ಉದ್ದೇಶಿಸಿ ಮನೆ ಬಾಗಿಲಿಗೆ ಮನೆ ಮಗ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಬಳಿ ತಂದು ಪರಿಹರಿಸಿಕೊಳ್ಳಿ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿರಾ ಮಧ್ಯವರ್ತಿಗಳ ಸಹಾಯವಿಲ್ಲದೆ ಜನರ ಸಮಸ್ಯೆಗಳನ್ನು ಅವರ ಮನೆ ಬಾಗಿಲಿಗೆ ನೇರವಾಗಿ ತೆರಳಿ ಪರಿಹರಿಸಲು ಉದ್ದೇಶಿಸಿ ಮನೆ ಬಾಗಿಲಿಗೆ ಮನೆ ಮಗ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ತಮ್ಮ ಬಳಿ ತಂದು ಪರಿಹರಿಸಿಕೊಳ್ಳಿ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಅವರು ತಾಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿ ಮನೆ ಬಾಗಿಲಿಗೆ ಮನೆ ಮಗ ಎಂಬ ನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರು ಯಾವುದೇ ಸಮಸ್ಯೆಗಳಿದ್ದರೂ ಕುಂದು ಕೊರತೆಗಳಿದ್ದರೂ ಸಹ ನೇರವಾಗಿ ನನ್ನ ಬಳಿ ತಂದು ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಿ. ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದೇ ಸೂರಿನಡಿ ಸೇರಿ ಜನತೆಗೆ ಉತ್ತಮ ಆಡಳಿತ ಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಎಂಟು ಭಾಗಗಳಾಗಿ ವಿಂಗಡಿಸಿ ಕ್ಷೇತ್ರದಲ್ಲಿ ಬರುವ ಆರು ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಹಾಗೂ ಎರಡು ಪಟ್ಟಣ ಪಂಚಾಯಿತಿ ವ್ಯಾಪ್ತಿ ಬರುತ್ತವೆ. ಪ್ರತಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ ಇದೀಗ ಮೂರನೇ ವಾರ ಬುಕ್ಕಾಪಟ್ಟಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮ ವಿಸ್ತರಿಸುವ ಉದ್ದೇಶ ಹೊಂದಿದ್ದು ಜನತೆ ತಮ್ಮೆಲ್ಲ ಕುಂದು ಕೊರತೆಗಳನ್ನು ಯಾವುದೇ ರಾಗ ದ್ವೇಷ ಭಯ ಭೀತಿ ಇಲ್ಲದೆ ಮಧ್ಯವರ್ತಿಗಳ ಸಹಾಯವಿಲ್ಲದೆ ಅಧಿಕಾರಿಗಳಿಗೆ ಲಂಚ ಕೊಡದೆ ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಬಹುದು ಎಂದರು. ಇದೇ ಸಂದರ್ಭದಲ್ಲಿ ಬುಕ್ಕಾಪಟ್ಟಣ ಹೋಬಳಿಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ೬೦೦ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಚ್ಚಿದಾನಂದ ಕುಚನೂರ, ತಾಲೂಕು ಕಾರ್ಯ ನಿರ್ವಹಣಾಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಕಾರಿ ಕೃಷ್ಣಪ್ಪ ಸಿ ಎನ್, ಎಇಇ ಮಂಜು ಪ್ರಸಾದ್, ಮುಖಂಡರಾದ ಶಾಂತಕುಮಾರ್, ಮುದ್ದು ಗಣೇಶ್, ದ್ಯಾಮಣ್ಣ, ಲಿಂಗಪ್ಪ, ಬುಕ್ಕಾಪಟ್ಟಣ ಗ್ರಾ ಪಂ ಅಧ್ಯಕ್ಷ ಮುಜಾಹಿದ್, ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ಬಿ ಎಂ ಕಾಂತರಾಜು, ನೂರ್ ಆಯೆಷಾ, ಗಂಗರಾಜು, ನಾಗರತ್ನಮ್ಮ, ಬುಕ್ಕಾಪಟ್ಟಣ ಹೋಬಳಿ ಜೆಡಿಎಸ್ ಮುಖಂಡರು ಎಲ್ಲಾ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಸಾರ್ವಜನಿಕರು ಹಾಜರಿದ್ದರು.