ಆಯುರ್ವೇದ ಚಿಕಿತ್ಸಾ ಶಿಬಿರ ವಿಶೇಷ : ಡಾ. ಕ್ರಾಂತಿಕಿರಣ

| Published : Feb 12 2024, 01:34 AM IST

ಸಾರಾಂಶ

ಘಂಟಿಕೇರಿ ಓಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯುರ್ವೇದ, ಹೋಮಿಯೋಪತಿ ಹಾಗೂ ಯೋಗ ಉಚಿತ ಬೃಹತ್‌ ಆರೋಗ್ಯ ಶಿಬಿರ ನಡೆಯಿತು.

ಹುಬ್ಬಳ್ಳಿ: ಇಲ್ಲಿನ ಘಂಟಿಕೇರಿ ಓಣಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯುರ್ವೇದ, ಹೋಮಿಯೋಪತಿ ಹಾಗೂ ಯೋಗ ಉಚಿತ ಬೃಹತ್‌ ಆರೋಗ್ಯ ಶಿಬಿರ ನಡೆಯಿತು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಈ ಶಿಬಿರವನ್ನು ಆಯೋಜಿಸಿತ್ತು. ಶಿಬಿರ ಉದ್ಘಾಟಿಸಿದ ಡಾ. ಕ್ರಾಂತಿಕಿರಣ ಮಾತನಾಡಿ, 2014ರಲ್ಲಿ ಕೇಂದ್ರ ಸರ್ಕಾರ ಆಯುಷ್‌ ವಿಶೇಷ ರಚನೆ ಮಾಡಿದೆ. ಈ ಮೂಲಕ 5 ಸಾವಿರ ವರ್ಷಗಳ ಪ್ರಾಚೀನ ವೈದ್ಯಕೀಯ ಪದ್ಧತಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲ ನೀಡಿದೆ. ಇದರಿಂದಾಗಿ ಆಯುರ್ವೇದವೂ ಸಾಕಷ್ಟು ಜನಮನ್ನಣೆ ಗಳಿಸಿದೆ ಎಂದರು.

ಡಾ. ರವೀಂದ್ರ ಯಲಕಾನಾ ಮಾತನಾಡಿ, ಆಯುರ್ವೇದ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮ ವಿಲ್ಲ. ನಿಧಾನವಾದರೂ ಬೇರು ಸಮೇತ ರೋಗ ನಿರ್ಮೂಲನೆ ಮಾಡುತ್ತದೆ. ಆಯುರ್ವೇದ ಔಷಧ ವಿಶೇಷವಾಗಿ ನರರೋಗ, ಸಂಧಿರೋಗ, ಚರ್ಮರೋಗ, ಬಹಳ ದಿನಗಳಿಂದ ಕಾಡುವ ರೋಗಗಳಿಗೆ ಉತ್ತಮ ಚಿಕಿತ್ಸೆ ಲಭ್ಯವಿದೆ. ಇತ್ತಿಚೆಗೆ ಆಯುರ್ವೇದ ಚಿಕಿತ್ಸೆಗೆ ಬಹಳ ಮಹತ್ವ ಬರುತ್ತಿದೆ ಎಂದರು.

ಕ್ಷಮತಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಸಚಿವರ ಅಪೇಕ್ಷೆಯಂತೆ ಈ ವಿಶೇಷ ಆಯುರ್ವೇದ ಶಿಬಿರಕ್ಕೆ ಹೆಚ್ಚಿನ ಜನಸ್ಪಂದನೆ ದೊರೆತಿದೆ ಎಂದರು. ಡಾ. ಎಂ.ಎಂ.ಜೋಶಿ ಆಸ್ಪತ್ರೆಯ ಡಾ ಶ್ರೀನಿವಾಸ ಜೋಶಿ ಮಾತನಾಡಿದರು.

ಶಿಬಿರದಲ್ಲಿ ಸುಮಾರು 400 ಜನ ತಪಾಸಣೆ ಮಾಡಿಸಿಕೊಂಡರು. ವೈದ್ಯ ಡಾ. ಮಂಜುನಾಥ ನಾಯಕ, ಡಾ. ಮಹೇಶ ಸಾಲಿಮಠ, ಡಾ. ವಿನಯಕುಮಾರ ಹಿರೇಮಠ, ಡಾ. ಭರತ ದಿವಟೆ, ಡಾ. ಸೌರಭ ಕೊಕಟನೂರ, ಡಾ. ಸಂದೀಪ ದೇಸಾಯಿ, ಡಾ. ಆಯಿಶಾ ಖಾಜಿ, ಡಾ. ಅಕ್ಷಯಕುಮಾರ ಚೋಳಿನ, ಡಾ. ಪಲ್ಲವಿ, ಡಾ. ನಂದಿತಾ, ಡಾ. ಸುಮಾ, ಡಾ. ಅಶ್ವನ, ಡಾ. ರಂಜೀವ ಕುಮಾರ, ಡಾ. ವಿದ್ಯಾ ಬೆಳೆವಡಿ, ಡಾ. ಕೆ.ಎಸ್. ಸಮೀರಕುಮಾರ, ಡಾ. ಸಾಂದೀಪನಿ ಬಂಕಾಪುರ, ಡಾ. ಎಚ್.ಒ. ಮೃತ್ಯುಂಜಯ, ಡಾ. ಚಂದ್ರಶೇಖರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಗದೀಶ ಕಾಂಬ್ಲೆ ಸ್ವಾಗತಿಸಿದರು. ಮಂಜು ಬಿಜವಾಡ ಕಾರ್ಯಕ್ರಮ ನಿರೂಪಿಸಿದರು.

ಪತಂಜಲಿ ಯೋಗ ಕೇಂದ್ರದ ಯೋಗಪಟು ಡಾ. ರಾಜು ಟೋಂಗ್ರೆ ಯೋಗಪ್ರದರ್ಶನ ನೀಡಿದರು. 30 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಅರ್ಜುನ ಲಮಾಣಿ ಸ್ವಾಗತಿಸಿದರು. ಚನ್ನಬಸಪ್ಪ ಹುಲ್ಲಂಬಿ ಕಾರ್ಯಕ್ರಮ ನಿರ್ವಹಿಸಿದರು.