ಕನ್ನಡಪ್ರಭ ವಾರ್ತೆ ನಾಪೋಕ್ಲು
ಕ್ರೀಡೆಯು ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ. ಅದು ದೈಹಿಕ ಆರೋಗ್ಯವನ್ನು ಕಾಪಾಡುವ, ಮನೋಬಲವನ್ನು ಹೆಚ್ಚಿಸುವ ಹಾಗೂ ಸಮಾಜದಲ್ಲಿ ಒಗ್ಗಟ್ಟನ್ನು ಬಲಪಡಿಸುವ ಮಹತ್ವದ ಸಾಧನವಾಗಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟ, ಮಡಿಕೇರಿ ಉಪಾಧ್ಯಕ್ಷರಾದ ಡಾ. ರಾಜೇಶ್ ತೇನನ ಹೇಳಿದರು.ಕೊಡಗು ಗೌಡ ಯುವ ವೇದಿಕೆ, ಬೆಂಗಳೂರು ಇವರಿಂದ ಕೊಡಗು ಗೌಡ ಸಮಾಜ ಹಾಗೂ ಕೊಡಗು ಗೌಡ ಮಹಿಳಾ ಘಟಕದ ಸಹಯೋಗದಲ್ಲಿ ಬೆಂಗಳೂರು
ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಯುವಜನತೆ ಇಂತಹ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಶಿಸ್ತು, ಪರಿಶ್ರಮ ಹಾಗೂ ಸಹಕಾರ ಮನೋಭಾವ ಬೆಳೆಸಬಹುದು ಎಂದರು. ಇಂತಹ ಕಾರ್ಯಕ್ರಮಗಳು ಸಮಾಜದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದರು.ಮಕ್ಕಳು, ಯುವಕರು ಹಾಗೂ ಹಿರಿಯನಾಗರೀಕರು ಸಹ ತಮ್ಮ ವಯಸ್ಸನ್ನು ಮರೆತು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ತೊಡಗಿಸಿಕೊಂಡರು. ಪ್ರತಿ ಪಂದ್ಯವೂ ಕ್ರೀಡಾ ಮನೋಭಾವ, ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಚೇತನದಿಂದ ತುಂಬಿದ್ದು, ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನ ಗೆದ್ದರು. ಬೆಂಗಳೂರಿನ ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ತಳೂರು ಮಮತಾ ಹಿತೇಶ್, ಕಾರ್ಯದರ್ಶಿಯಾದ ಉಪಾಧ್ಯಕ್ಷರಾದ ನೂತನ್ ಚೆಟ್ಟಿಮಾಡ ಅವರ ನೇತೃತ್ವದಲ್ಲಿ, ಅವರ ಸಂಪೂರ್ಣ ತಂಡದ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ಕ್ರೀಡಾ ಕೂಟವನ್ನು ಆಯೋಜಿಸಲಾಯಿತು. ಸಂಘಟಕರ ಸಮರ್ಪಣೆ, ಪರಿಶ್ರಮ ಮತ್ತು ತಂಡದ ಒಗ್ಗಟ್ಟು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು.ವಿಜೇತರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ನೀಡಿ ಅವರ ಸಾಧನೆ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೂ ಉತ್ತೇಜನ ನೀಡಲಾಗಿದ್ದು, ಕ್ರೀಡಾ ಮನೋಭಾವವನ್ನು ಪ್ರೋತ್ಸಾಹಿಸಲಾಯಿತು. ಕ್ರೀಡೆಯ ಮೂಲಕ ಸ್ನೇಹ, ಸಹಕಾರ ಮತ್ತು ಒಗ್ಗಟ್ಟು ಮತ್ತಷ್ಟು ಬಲಪಡಿಸಲಾಯಿತು. ಈ ಬ್ಯಾಡ್ಮಿಂಟನ್ ಟೂರ್ನಮೆಂಟ್ ಕೇವಲ ಕ್ರೀಡಾ ಸ್ಪರ್ಧೆಯಾಗಿರದೆ, ಸಮಾಜವನ್ನು ಒಂದಾಗಿ ಕೊಂಡೊಯ್ಯುವ ಮಹತ್ವದ ವೇದಿಕೆಯಾಗಿದ್ದು, ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪುಗಳನ್ನು ಮೂಡಿಸಿತು.
ಕಾರ್ಯಕ್ರಮದಲ್ಲಿ ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಮನೋಜ್ ಅಯ್ಯೆಟ್ಟಿ, ಕಾರ್ಯದರ್ಶಿಯಾದ ಬಿಪಿನ್ ಬೆಕಲ್ ಹಾಗೂ ಕೊಡಗು ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ಆಶಾ ಅಶೋಕ್ ಕಾಚಿಲಾಂಡ ಭಾಗವಹಿಸಿದ್ದರು. ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷರಾದ ತಳೂರು ಮಮತಾ ಹಿತೇಶ್, ಕಾರ್ಯದರ್ಶಿಯಾದ ಹರೀಶ್ ಬೆಳಿಮಲೆ ಹಾಗೂ ಉಪಾಧ್ಯಕ್ಷರಾದ ನೂತನ್ ಚೆಟ್ಟಿಮಾಡ ಉಪಸ್ಥಿತರಿದ್ದರು. ಪರ್ಲಕೋಟಿ ಹಿತ ಪ್ರಾರ್ಥಿಸಿದರು. ಯುವವೇದಿಕೆ ಕಾರ್ಯದರ್ಶಿ ಹರೀಶ್ ಬಿಳಿಮಲೆ ಸ್ವಾಗತಿಸಿ ನಿರ್ದೇಶಕರಾದ ಕೊಂಬನ ಪ್ರವೀಣ್ ವಂದಿಸಿದರು.