ಕನ್ನಡಪ್ರಭ ವಾರ್ತೆ, ತುಮಕೂರುಶ್ರೀ ಶಂಕರಾಚಾರ್ಯರು ಕಾಲ್ನಡಿಗೆಯಲ್ಲೇ ಇಡೀ ದೇಶದ ಉದ್ದಗಲಕ್ಕೂ ಸಂಚರಿಸಿ ದೇಶವನ್ನು ಸಾಂಸ್ಕೃತಿಕವಾಗಿ ಏಕೀಕರಣಗೊಳಿಸಿದರು ಎಂದು ತುಮಕೂರಿನ ಶಾರದಾಶಂಕರ ಮಹಿಳಾ ಮಂಡಳಿಯ ಅಧ್ಯಕ್ಷೆ ಇಂದಿರಮ್ಮ ಸುಂದರರಾವ್ ಅವರು ಬಣ್ಣಿಸಿದರು. ತುಮಕೂರಿನ ಎಸ್.ಐ.ಟಿ. ಬಡಾವಣೆಯಲ್ಲಿರುವ ತಮ್ಮ ನಿವಾಸದಲ್ಲಿ ಶಂಕರಜಯಂತಿ ಅಂಗವಾಗಿ ಏರ್ಪಡಿಸಿದ್ದ ಶಂಕರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಶಂಕರು ಸಂಪ್ರದಾಯ, ಪರಂಪರೆ ಸಂರಕ್ಷಿಸುವುದರ ಜೊತೆಗೆ ದೇಶದ ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ ಮಠಗಳು, ವಿವಿಧ ದೇವ-ದೇವಿಯರನ್ನು ಕುರಿತು ರಚಿಸಿರುವ ಅಸಂಖ್ಯಾತ ಸ್ತೋತ್ರಗಳು, ಹರಿದು ಹಂಚಿಹೋಗಿದ್ದ ದೇಶವನ್ನು ಸನಾತನ ಧರ್ಮದ ಅಡಿ ಒಂದುಗೂಡಿಸಿದ ಶಂಕರರು ಭಾರತದ ಸಾಂಸ್ಕೃತಿಕ ಪುನರುತ್ಥಾನದ ರೂವಾರಿಗಳು ಶಂಕರರು ಜೀವಿಸಿದ್ದು ಕೇವಲ 32 ವರ್ಷಗಳು ಮಾತ್ರ. ಆದರೆ ಆ ಅಲ್ಪಾವಧಿಯಲ್ಲೇ ದೇಶಾದ್ಯಂತ ಸಂಚರಿಸಿ ಅದ್ವೆೈತ ತತ್ವವನ್ನು ಸಾರಿದರು. ಹಲವಾರು ಮತಗಳಿಂದ ದಾಳಿಗೊಳಗಾಗಿದ್ದ ಸನಾತನ ಹಿಂದೂಧರ್ಮವನ್ನು ಪುನರುತ್ಥಾನಗೊಳಿಸಿದರು. ಭಗವದ್ಗೀತೆ, ಉಪನಿಷತ್ ಹಾಗೂ ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರೆನಿಸಿದರು ಎಂದು ಹೇಳಿದ ಇಂದಿರಮ್ಮ ಅವರು, ಕೇರಳದ ಕಾಲಡಿಯಲ್ಲಿ ಶಂಕರರ ಜನನ, ಬಾಲ್ಯ, ಉಪನಯನ, ನರ್ಮದಾ ನದಿ ತೀರದಲ್ಲಿ ಗುರು ಗೋವಿಂದ ಭಗವತ್ಪಾದರಿಂದ ಸನ್ಯಾಸ ಸ್ವೀಕಾರ, ದೇಶಾದ್ಯಂತ ಸಂಚರಿಸಿ ವಾದದಲ್ಲಿ ಅನೇಕ ವಿದ್ವಾಂಸರುಗಳನ್ನು ಪರಾಜಯಗೊಳಿಸಿದ್ದು, ಕಾಶ್ಮೀರದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಿದ್ದು - ಹೀಗೆ ಶಂಕರರ ಜೀವನ ವೃತ್ತಾಂತವನ್ನು ಸುದೀರ್ಘವಾಗಿ ವಿವರಿಸಿದರು.

ಶಂಕರ ಸಪ್ತಾಹದ ಅಂಗವಾಗಿ ಪ್ರತಿದಿನ ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಸೌಂದರ್ಯಲಹರಿ, ಲಕ್ಷ್ಮೀ ಸಹಸ್ರನಾಮ, ಗುರುವಿಲಾಸ ಪಾರಾಯಣ ಸೇರಿದಂತೆ ಶಂಕರಾಚಾರ್ಯ ವಿರಚಿತ ಶ್ಲೋಕಗಳ ಪಠಣ ನೆರವೇರಿತು. ಶಂಕರರ ಭಾವಚಿತ್ರಕ್ಕೆ ವಿಶೇಷ ಪೂಜಾದಿಗಳು ನಡೆದವು. ಮಹಿಳಾ ಮಂಡಲಿಯ ಪದಾಧಿಕಾರಿಗಳಾದ ರಾಜಲಕ್ಷ್ಮೀ ಶ್ರೀನಿವಾಸನ್, ಸೌಮ್ಯರವಿ, ವನಜಾ ನಾಗೇಶ್, ಉಷಾ ಅನಂತರಾಮಯ್ಯ, ಭಾರತಿರವಿ, ರತ್ನಾ ಗಂಗಾಧರಯ್ಯ, ವನಜಾಕ್ಷಿ ಶ್ರೀನಿವಾಸಶರ್ಮ, ಸುಧಾ ಕೃಷ್ಣಮೂರ್ತಿ, ರಾಧಮ್ಮ, ರವಿ ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.