ಕನ್ನಡಪ್ರಭ ವಾರ್ತೆ ತುಮಕೂರು ಸಿದ್ದಗಂಗಾ ಮಠವನ್ನು ಹನ್ನೆರಡನೇ ಶತಮಾನದ ಬಸವಾದಿ ಶರಣರ ತತ್ವ, ಆದರ್ಶಗಳಾದ ಅರಿವು ಮತ್ತು ದಾಸೋಹದ ಪ್ರಯೋಗಾಲಯವಾಗಿಸಿದವರು ಡಾ.ಶಿವಕುಮಾರ ಸ್ವಾಮಿಜಿಗಳು ಎಂದು ಸಿದ್ದಗಂಗಾ ಪದವಿ ಕಾಲೇಜುಗಳ ಸಂಯೋಜಕ ಡಾ.ಡಿ.ಎನ್.ಯೋಗೀಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂಸ್ಥಾಪಕರ ದಿನಾಚರಣೆ ಹಾಗೂ ಸ್ಪೂರ್ತಿ ಕಾರ್ಯಕ್ರಮದಲ್ಲಿ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಸಂಸ್ಥಾಪಕ ಡಾ.ಶಿವಕುಮಾರ ಸ್ವಾಮಿಜಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ತಮ್ಮ ಜೀವಿತಾವಧಿಯ ಅಷ್ಟೂ ಕಾಲವೂ ಸಮಾಜದ ಏಳಿಗೆಗಾಗಿ ದುಡಿದವರು. ಅನಿರೀಕ್ಷಿತವಾಗಿ ಒದಗಿ ಬಂದ ಸಿದ್ದಗಂಗಾ ಮಠದ ಉತ್ತಾರಾಧಿಕಾರವನ್ನು ಜನ ಸಾಮಾನ್ಯರ ಅಬ್ಯುದಯಕ್ಕೆ ಬಳಸಿದ ಕೀರ್ತಿ ಡಾ.ಶ್ರೀಶಿವಕುಮಾರಸ್ವಾಮಿಜಿಗಳಿಗೆ ಸಲ್ಲುತ್ತದೆ ಎಂದರು.ಶ್ರೀಮಠದ ವಿದ್ಯಾರ್ಥಿಯಾಗಿದ್ದ ಶಿವಣ್ಣ ಎಂಬ ಯುವಕ, ಉತ್ತಾರಾಧಿಕಾರಿಗಳಾಗಿದ್ದ ಮರುಳಾರಾಧ್ಯರ ಅಕಾಲಿಕ ನಿಧನದಿಂದ, ಉದ್ಯಾನ ಶಿವಯೋಗಿಗಳ ಕೃಪೆಯಿಂದ ಶ್ರೀಮಠದ ಉತ್ತರಾಧಿಕಾರಿಯಾಗಿ 1941ರಲ್ಲಿ ಪೂರ್ಣ ಪ್ರಮಾಣದ ಜವಾಬ್ದಾರಿ ವಹಿಸಿಕೊಂಡು, 2019 ರವರೆಗೆ ಅನ್ನ, ಅಕ್ಷರ, ಆಶ್ರಯ ನೀಡುತ್ತಾ ಲಕ್ಷಾಂತರ ಮಕ್ಕಳನ್ನು ಪೋಷಿಸಿ, ಭಕ್ತರ ಪಾಲಿಗೆ ನಡೆದಾಡುವ ದೇವರೇ ಆಗಿದ್ದಾರೆ. ಇವರ ಹೆಸರಿನಲ್ಲಿ ತುಮಕೂರು ವಿವಿಯಲ್ಲಿ ಅಧ್ಯಯನ ಪೀಠ ಆರಂಭಿಸಿ, ಸಂಶೋಧನೆಗೆ ಒತ್ತು ನೀಡಬೇಕೆಂದು ಒತ್ತಾಯಿಸಿದರು. ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಡಾ.ಸಂಗಮೇಶ್ ಉಫಾಸೆ ಮಾತನಾಡಿ, ಬಸವಣ್ಣನವರ ತತ್ವಾದರ್ಶಗಳ ಪರಿಪಾಲನೆಯ ಮೂಲಕ ಸಿದ್ದಗಂಗಾ ಮಠದ ಸಾರ್ಥಕತೆಯನ್ನು ಪಡೆದಿದೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ತಮ್ಮ ತಂದೆ, ತಾಯಿಗಳು, ಹಿರಿಯರನ್ನು ಆದರ್ಶವಾಗಿಟ್ಟುಕೊಂಡು, ಅವರ ಕನಸನ್ನು ನನಸಾಗಿಲು ಶ್ರಮಿಸಬೇಕಿದೆ ಎಂದರು.

ಚಲನಚಿತ್ರ ಹಿನ್ನೆಲೆ ಗಾಯಕ ಚೇತನ್ ನಾಯಕ್ ಮಾತನಾಡಿ, ಸಿದ್ದಗಂಗೆ ಎಂಬ ಪುಣ್ಯ ಕ್ಷೇತ್ರ ಲಕ್ಷಾಂತರ ಜನರು ಬದುಕು ಕಟ್ಟಿಕೊಳ್ಳಲು ಆಶ್ರಯ ನೀಡಿದೆ. ನೀವುಗಳ ಅದರ ಭಾಗವಾಗಿರುವುದು ಸಂತೋಷದ ವಿಚಾರ.ಈ ಮಣ್ಣಿನ ಸ್ವತವನ್ನು ಪಡೆದು, ಸಮಾಜದಲ್ಲಿ ಮೇಲ್ಮುಖವಾಗಿ ಬೆಳೆಯುವಂತೆ ಹರಿಸಿದರು. ಹಲವಾರು ಹಾಡುಗಳ ಮೂಲಕ ಯುವ ಮನಸ್ಸುಗಳನ್ನು ರಂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಂ.ದಕ್ಷಿಣಾಮೂರ್ತಿ ಮಾತನಾಡಿ, ಕಳೆದ 10 ವರ್ಷಗಳಿಂದ ನಮ್ಮ ಕಾಲೇಜಿನಲ್ಲಿ ಸಂಸ್ಥಾಪಕರ ದಿನ ಮತ್ತು ಸ್ಪೂರ್ತಿ ಕಾರ್ಯಕ್ರಮವನ್ನು ಒಟ್ಟಿಗೆ ಆಚರಿಸಿಕೊಂಡು ಬರುತ್ತಿದ್ದೇವೆ.ಒಂದೆಡೆ ಭಕ್ತಿ, ಇನ್ನೊಂದೆಡೆ ಸಂಸ್ಕೃತಿ ಎರಡನ್ನು ಮೈಳೆಸಿದ ಕಾರ್ಯಕ್ರಮ ಇದಾಗಿದೆ. ಇದುವರೆಗೂ ಸಿದ್ಗಗಂಗಾ ಶ್ರೀಗಳ ಕುರಿತು 6 ಪ್ರಬಂಧಗಳು ಮಂಡನೆಯಾಗಿ ಪಿಎಚ್‌ಡಿ ಪದವಿ ಲಭ್ಯವಾಗಿವೆ. ಇನ್ನೂ ಸಾವಿರಾರು ಪ್ರಭಂದಗಳನ್ನು ಮಂಡಿಸುವಷ್ಟು ಅಕರ ನಮ್ಮ ಶ್ರೀಶಿವಕುಮಾರ ಸ್ವಾಮೀಜಿಗಳು. 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಸ್ಪರ್ಧೆಗಳಲ್ಲಿ ಕಾಲೇಜಿನ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಲಹೆ ನೀಡಿದರು. ಸ್ಪೂರ್ತಿ ಸಂಚಾಲಕ ಡಾ.ಜಗದೀಶ್.ಎಂ. ಪ್ರಸ್ತಾವಿಕ ನುಡಿಗಳನ್ನಾಡಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪಾವನ.ಬಿ.ಎಸ್.ಕಾರ್ಯಕ್ರಮ ನಿರೂಪಿಸಿದರು.ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜ ನಾಧಿಕಾರಿ ಶೀಲಾ.ಕೆ.ಪಿ,ಗಣಕಶಾಸ್ತ್ರದ ಉಪನ್ಯಾಸಕರಾದ ಅಮೂಲ್ಯ.ಜೆ. ಯೋಗೀಶ್, ಹೇಮ.ಬಿ.ಸಿ ಉಪಸ್ಥಿತರಿದ್ದರು.