ಸಾರಾಂಶ
ಹೊನ್ನಾವರ: ರಾಜ್ಯದ ಕಾಂಗ್ರೆಸ್ ಸರ್ಕಾರ ಮೆಡಿಕಲ್ ಮಾಫಿಯಾಗೆ ಒಳಪಟ್ಟು, ಬಡ, ಮಧ್ಯಮ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಅವರು ರಾಜ್ಯ ಸರ್ಕಾರ ಭಾರತೀಯ ಜನೌಷಧಿ ಕೇಂದ್ರವನ್ನು ಸರ್ಕಾರಿ ಆಸ್ಪತ್ರೆಗಳಿಂದ ತೆರವುಗೊಳಿಸುವ ಆದೇಶ ನೀಡಿದ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಘಟಕ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಎದುರು ಮೌನ ಪ್ರತಿಭಟನೆ ಹಮ್ಮಿಕೊಂಡ ಸಂಧರ್ಭದಲ್ಲಿ ಮಾತನಾಡಿದರು.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅನೂಕೂಲಕ್ಕಾಗಿ ಹಲವು ಯೋಜನೆ ತಂದಿದೆ. ಅತಿ ಕಡಿಮೆ ದರದಲ್ಲಿ ಔಷಧಗಳು ಸಿಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಭಾರತೀಯ ಜನೌಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡಿತ್ತು. ರಾಜ್ಯ ಸರ್ಕಾರ ಬೇರೆ ವಿಚಾರವನ್ನು ಹಾಕಿ ಈ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಮುಂದಾಗಿದೆ ಎಂದು ದೂರಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಹಲವು ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಚ್ಚಿದೆ. ಜನೌಷಧಿ ಕೇಂದ್ರವು ತಾಲೂಕು ಆಸ್ಪತ್ರೆಗೆ ಬರುವ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಲಿ ಎಂದು ತೆರೆದಿದೆ. ಆದರೆ ರಾಜ್ಯ ಸರ್ಕಾರವು ಯಾವುದೋ ವೈದ್ಯಕೀಯ ಪಿತೂರಿಯಿಂದಾಗಿ ಜನೌಷಧಿ ಕೇಂದ್ರ ಮುಚ್ಚಲು ಹೊರಟಿದೆ ಎಂದು ದೂರಿದರು.ಕರ್ನಾಟಕದಲ್ಲಿ ಪ್ರತಿ ತಿಂಗಳು ಸುಮಾರು 4-5 ಲಕ್ಷ ಜನರು ಜನೌಷಧ ಕೇಂದ್ರಕ್ಕೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಇದೆ. ಸರ್ಕಾರಕ್ಕೆ ಸುಮಾರು ₹40 ಕೋಟಿ ಹೆಚ್ಚುವರಿ ಮೊತ್ತದ ಲಾಭ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಜನೌಷಧ ಕೇಂದ್ರವನ್ನು ಮುಚ್ಚುವುದು ಸರಿ ಅಲ್ಲ. ಇದು ಬಡವರಿಗೆ ಅನ್ಯಾಯವಾಗುತ್ತದೆ. ಮುಂದಿನ ದಿನದಲ್ಲಿ ಈ ನಿರ್ಧಾರ ಹಿಂಪಡೆಯದೇ ಹೋದಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ಮಂಜುನಾಥ ನಾಯ್ಕ, ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಸದಸ್ಯ ಶಿವರಾಜ ಮೇಸ್ತ ಸುಭಾಸ ಹರಿಜನ, ಪಕ್ಷದ ಪ್ರಮುಖರಾದ ಎಂ.ಜಿ. ನಾಯ್ಕ, ಜಿ.ಜಿ. ಶಂಕರ, ಎಂ.ಎಸ್. ಹೆಗಡೆ ಕಣ್ಣಿ, ಗಣಪತಿ ಗೌಡ ಚಿತ್ತಾರ, ಗಣಪತಿ ನಾಯ್ಕ ಬಿಟಿ, ಗೋವಿಂದ ಗೌಡ, ಶಾರದಾ ನಾಯ್ಕ, ನಾರಾಯಣ ಹೆಗಡೆ, ಲೋಕೇಶ ಮೇಸ್ತ, ರವಿ ನಾಯ್ಕ ರಾಯಲಕೇರಿ, ಬಾಲಕೃಷ್ಣ ಗೌಡ, ಹರಿಶ್ಚಂದ್ರ ನಾಯ್ಕ, ಕೃಷ್ಣ ಜೋಶಿ ಸಂಕೋಳ್ಳಿ ಮತ್ತಿತರಿದ್ದರು.