ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಜೆಡಿಎಸ್ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪೂರಕ ವಾತಾವರಣ ಸೃಷ್ಟಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜೂ.14ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಹಮ್ಮಿಕೊಳ್ಳಲಾಗುವುದು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ತಾಲೂಕಿನ ದಂಡಿಗನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ನಂಜಮ್ಮ ಚನ್ನಯ್ಯ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ನಾಡಿನ ರೈತಾಪಿ ಮತ್ತು ಶ್ರಮಿಕ ವರ್ಗದ ಧ್ವನಿಯಾಗಿ ಜೆಡಿಎಸ್ ಪಕ್ಷ ಮತ್ತು ಪಕ್ಷದ ನಾಯಕರು ಸದಾ ಕಾಲ ದುಡಿಯುತ್ತಿದ್ದಾರೆ. ಜೆಡಿಎಸ್ ಪಕ್ಷ ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನರು ನಮ್ಮ ಪಕ್ಷವನ್ನು ರಾಜಕೀಯವಾಗಿ ಮೇಲೆತ್ತಿ ಹರಸಿ ಆಶೀರ್ವದಿಸಿ ಉಳಿಸಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆ ಕೊನೆ ಹಂತದ ಬೆಳವಣಿಗೆಯಲ್ಲಿ ಪಕ್ಷದ ಉಳಿವಿಗಾಗಿ ಮತ್ತು ಕಾರ್ಯಕರ್ತರಿಗೋಸ್ಕರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿದ ಕೀರ್ತಿ ಜಿಲ್ಲೆಯ ಜನರಿಗೆ ಸಲ್ಲುತ್ತದೆ ಎಂದರು.ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿಂದು ಅತಿದೊಡ್ಡ ಉಕ್ಕು ಮತ್ತು ಕೈಗಾರಿಕಾ ಖಾತೆಯ ಸಚಿವ ಸ್ಥಾನ ಅಲಂಕರಿಸಿದ್ದಾರೆಂದರೆ ಅದಕ್ಕೆ ಜಿಲ್ಲೆಯ ಜನರೇ ಮೂಲ ಕಾರಣ. ವಿಶೇಷವಾಗಿ ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕಿನ ಜನರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ ಅಪಾರ ಪ್ರೀತಿವಿಶ್ವಾಸ ಹೊಂದಿದ್ದಾರೆಂಬುದನ್ನು ನಾನು ಚಿಕ್ಕಂದಿನಿಂದ ಗಮನಿಸಿದ್ದೇನೆ. ಈ ಪ್ರೀತಿ ವಿಶ್ವಾಸ ಪಕ್ಷದ ಮೇಲೆ ನಿರಂತರವಾಗಿರಲಿ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹಳ ಕಡಿಮೆ ಅಂತರದಲ್ಲಿ ಸೋಲಾಗಲು ನಮ್ಮಲ್ಲಿನ ಅತಿಯಾದ ಆತ್ಮವಿಶ್ವಾಸವೇ ಕಾರಣವಾಯಿತೆ ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ ಎಂದರು.ಮಾಜಿ ಶಾಸಕ ಸುರೇಶ್ಗೌಡರು ಸೋತಿದ್ದರೂ ಕೂಡ ಪಟ್ಟಣದಲ್ಲಿಯೇ ಮನೆ ಮಾಡಿಕೊಂಡು ನಿರಂತರವಾಗಿ ಪಕ್ಷದ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ನಿಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಹಾಗಾಗಿ ನನಗೆ ವಿಶ್ವಾವಿದೆ ಮುಂದಿನ ಚುನಾವಣೆಯಲ್ಲಿ ನಿಮ್ಮೆಲ್ಲರ ಪ್ರೀತಿ ಆಶೀರ್ವಾದಿಂದ ಸುರೇಶ್ಗೌಡರು ಶಾಸಕರಾಗುವುದಷ್ಟೇ ಅಲ್ಲ ಮಂತ್ರಿಯೂ ಕೂಡ ಆಗಲಿದ್ದಾರೆ ಎಂದರು.
ಮುಂದಿನ ದಿನಗಳಲ್ಲಿ ಜೆಡಿಎಸ್ ಅನ್ನು ಬಲಿಷ್ಠವಾಗಿ ಸಂಘಟಿಸುವ ಜೊತೆಗೆ ಕಾರ್ಯಕರ್ತರನ್ನು ಹುರಿದುಂಬಿಸಬೇಕೆಂದು ತೀರ್ಮಾನ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಜೂ.14ರಿಂದ ರಾಜ್ಯದ ಎಲ್ಲಾ 31ಜಿಲ್ಲೆಗಳಲ್ಲಿಯೂ ಪ್ರವಾಸ ಹಮ್ಮಿಕೊಳ್ಳಲಾಗುವುದು. ಜೂ.27 ಅಥವಾ 28 ರಂದು ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.ಮಾಜಿ ಶಾಸಕ ಸುರೇಶ್ಗೌಡ ಮಾತನಾಡಿ, ಸ್ಥಳೀಯ ಜನರ ಅನುಕೂಲಕ್ಕಾಗಿ ಗ್ರಾಮದ ಸುಶೀಲ ಮತ್ತು ಡಿ.ಸಿ.ಮತ್ತೀಗೌಡರು 1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದಾರೆ. ಈ ಭಾಗದ ಜನರು ಮದುವೆ ಇನ್ನಿತರೆ ಸಾರ್ವಜನಿಕ ಸಮಾರಂಭಗಳಿಗೆ ಈ ಸಮುದಾಯವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸೋದರತ್ವ ಭಾವನೆಯಿಂದ ಜೀವನ ನಡೆಸಬೇಕು ಎಂದರು.
ಈ ವೇಳೆ ಮನ್ಮುಲ್ ಮಾಜಿ ನಿರ್ದೇಶಕ ಕೋಟಿರವಿ, ದಂಡಿಗನಹಳ್ಳಿ ಸುಶೀಲ, ಡಿ.ಸಿ.ಮತ್ತೀಗೌಡ, ಕರಡಹಳ್ಳಿ ಪಿಎಸಿಎಸ್ ಮಾಜಿ ನಿರ್ದೇಶಕ ಮಂಜುನಾಥ್, ಮುಖಂಡರಾದ ಚಿಕ್ಕಮತ್ತಿ ಕಳಸೇಗೌಡ, ಪಟೇಲ್ ಚನ್ನಪ್ಪ, ಅಂಗಡಿ ಮತ್ತೀಗೌಡ, ರಾಮಣ್ಣ, ಜೆಡಿಎಸ್ ಮುಖಂಡರಾದ ಗಿರೀಶ್ಗೌಡ (ಅಧಿಪತಿ), ಕೃಷ್ಣೇಗೌಡ, ನಿತೀಶ್ ಸೇರಿದಂತೆ ಹಲವರು ಇದ್ದರು.