ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಅಬ್ಬರಿಸಿದ ಮೃಗಶಿರಾ ಮಳೆ ನೀರು ರಸ್ತೆಯ ಮೇಲೆ 2-3 ಅಡಿ ಹರಿಯುವ ಮೂಲಕ ಹಲವಾರು ಆವಾಂತರ ಸೃಷ್ಟಿ ಮಾಡಿದೆ.ಭಾನುವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಆರಂಭವಾದ ಮೃಗಶಿರಾ ಮಳೆ ಅರ್ಧ ಗಂಟೆಗೂ ಹೆಚ್ಚುಕಾಲ ಸುರಿಯುವ ಮೂಲಕ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಬೈಕ್ ಹಾಗೂ ಕಾರಿನ ಚಾಲಕರು ಪರದಾಡುವಂತಾಗಿದೆ. ಘಟನೆ ಪಟ್ಟಣದ ಬಜಾರ್ ರಸ್ತೆ ಹಾಗೂ ಗದಗ ಅಗಸಿಯಲ್ಲಿ ಕಂಡು ಬಂದಿತು. ಪಟ್ಟಣದಲ್ಲಿನ ಬಜಾರ್ ರಸ್ತೆಯ ಕಾಮಗಾರಿ ನಡೆದಿದ್ದು, ಕಾಮಗಾರಿಗಾಗಿ ಗುಂಡಿ ತೋಡಿರುವ ಜಾಗೆಯಲ್ಲಿ 2-3 ಅಡಿಗೂ ಹೆಚ್ಚಿನ ಚರಂಡಿ ನೀರು ಹರಿಯುವ ಮೂಲಕ ರಸ್ತೆಯಲ್ಲಿ ಹೊಂಡ ಸೃಷ್ಟಿಸಿದ ಘಟನೆ ನಡೆದಿದೆ. ಪುರಸಭೆಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಮಳೆಗಾಲದಲ್ಲಿ ರಸ್ತೆ ಕಾಮಗಾರಿ ಮಾಡಿ ಮುಗಿಸುವುದನ್ನು ಬಿಟ್ಟು. ಮಳೆಗಾಲದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದಾರೆ. ಇದು ಅರ್ಥವಾಗದ ಸಂಗತಿಯಾಗಿದೆ ಎಂದು ಮಲ್ಲು ಅಂಕಲಿ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಗದಗ ಅಗಸಿಯ ಹತ್ತಿರದ ಸೋಮೇಶ್ವರ ಮಹಾದ್ವಾರದ ಹತ್ತಿರ ಚರಂಡಿ ತುಂಬಿ ಹರಿಯುವ ನೀರು ಬೈಕ್ ಸವಾರರು ಜೀವಕ್ಕೆ ಸಂಚಕಾರ ತರುವ ಕಾರ್ಯವಾಗಿದೆ ಎಂದು ಸದಾನಂದ ನಂದೆಣ್ಣವರ ಹೇಳಿದರು.ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಳೆ ನೀರಿನ ಜೊತೆಗೆ ಹರಿದ ಚರಂಡಿ ನೀರಿನ ಗಬ್ಬು ವಾಸನೆಗೆ ಜನ ಹೈರಾಣಾಗಿ ಪುರಸಭೆಗೆ ಹಿಡಿ ಶಾಪ ಹಾಕಿದರು.