ಹಾವೇರಿ: ರಾಜ್ಯ ಸರ್ಕಾರವು ಬಿಡದಿ ಹಾಗೂ ಹಾರೋಹಳ್ಳಿ ಹೋಬಳಿಯ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹಿಸಿದರು.ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹೊರಡಿಸಿರುವ ಅಂತಿಮ ಗೆಜೆಟ್ ಅಧಿಸೂಚನೆಯು ರೈತ ವಿರೋಧಿ ಹಾಗೂ ದಬ್ಬಾಳಿಕೆಯ ನೀತಿಯಾಗಿದ್ದು, ಸಾರ್ವಜನಿಕ ಹಿತಾಸಕ್ತಿಯ ಹೆಸರಿನಲ್ಲಿ ಬೃಹತ್ ರಿಯಲ್ ಎಸ್ಟೇಟ್ ಯೋಜನೆಗೆ ಅವಕಾಶ ಕಲ್ಪಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.ಮೊದಲ ಹಂತದಲ್ಲಿ 498.34 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದ್ದು, ಇದರಿಂದ 755 ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ. ಈ ಪೈಕಿ 614 ರೈತರು ಒಂದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಾಗಿದ್ದು, ಅವರ ಜೀವನೋಪಾಯಕ್ಕೆ ತೀವ್ರ ಹೊಡೆತ ಬೀಳಲಿದೆ ಎಂದು ಹೇಳಿದರು.ಮುಂದಿನ ತಿಂಗಳೊಳಗೆ 7,500ರಿಂದ 9,600 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದೆ. ರೈತರು ಒಪ್ಪದಿದ್ದರೂ ನ್ಯಾಯಾಲಯದಲ್ಲಿ ಪರಿಹಾರದ ಮೊತ್ತ ಠೇವಣಿ ಇಟ್ಟು ಭೂಮಿ ವಶಪಡಿಸಿಕೊಳ್ಳುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಈ ಯೋಜನೆಯಿಂದ ಪ್ರತಿ ತಿಂಗಳು ಸುಮಾರು 6 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಂಠಿತವಾಗುವ ಸಾಧ್ಯತೆ ಇದ್ದು, ಹೈನುಗಾರಿಕೆ, ರೇಷ್ಮೆ ಕೃಷಿ, ರೇಷ್ಮೆ ಹುಳು ಸಾಕಾಣಿಕೆ ಹಾಗೂ ತೋಟಗಾರಿಕೆಯನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳ ಜೀವನಾಧಾರಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಬಡ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಸ್ವಾಧೀನಪಡಿಸಿಕೊಂಡು ಸುಮಾರು 33,562 ಕೋಟಿ ರು. ಮೌಲ್ಯದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಉದ್ದೇಶ ಸರಕಾರಕ್ಕಿದೆ ಎಂದು ಆರೋಪಿಸಿದ ಅವರು, ಯೋಜನೆಗಾಗಿ ಬಿ.ಡಿ.ಎ. ಹಾಗೂ ಬಿ.ಎಂ.ಆರ್.ಡಿ.ಎ. ವ್ಯಾಪ್ತಿಯ ಸಾರ್ವಜನಿಕ ಆಸ್ತಿಗಳನ್ನು ಅಡಮಾನವಿಟ್ಟು ಸಾಲ ಪಡೆಯಲಾಗುತ್ತಿದೆ ಎಂದರು.ಸ್ಮಾರ್ಟ್ ಸಿಟಿ ಹಾಗೂ ಇಂಟಿಗ್ರೇಟೆಡ್ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ಸುಮಾರು 10 ಲಕ್ಷಕ್ಕೂ ಅಕ ಮರಗಳನ್ನು ಕಡಿಯುವ ಸಾಧ್ಯತೆ ಇದ್ದು, ಇದರಿಂದ ಪರಿಸರಕ್ಕೂ ಭಾರೀ ಹಾನಿಯಾಗಲಿದೆ ಎಂದು ಹೇಳಿದರು.ಕೇಂದ್ರದ 2013ರ ಭೂಸ್ವಾಧೀನ ಕಾಯಿದೆಯಡಿ ಕಡ್ಡಾಯವಾಗಿರುವ ಸಾಮಾಜಿಕ ಪರಿಣಾಮ ಮೌಲ್ಯಮಾಪನ ಹಾಗೂ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಕ್ರಿಯೆಗಳನ್ನು ತಪ್ಪಿಸಲು ಕರ್ನಾಟಕ ನಗರಾಭಿವೃದ್ಧಿ ಪ್ರಾಕಾರ ಕಾಯಿದೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಸರಕಾರ ಕೂಡಲೇ ಅಂತಿಮ ಅಸೂಚನೆಯನ್ನು ಹಿಂಪಡೆದು ಭೂಸ್ವಾಧೀನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.ನಮ್ಮ ಭೂಮಿ ನಮ್ಮ ಹಕ್ಕು ಶೀರ್ಷಿಕೆಯಡಿ ಜೂನ್ 21ರಂದು ಬಿಡದಿ ಸಮೀಪದ ಹಂಚಿಪುರದಿಂದ ಹೊಸೂರು ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಹೋರಾಟ ನಡೆಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯಿಂದಲೂ ಜೆಡಿಎಸ್‌ನ ಕಾರ್ಯಕರ್ತರು, ರೈತರು ಭಾಗವಹಿಸುತ್ತಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ. ಸಿದ್ದಬಸಪ್ಪ ಯಾದವ್, ಲಕ್ಷ್ಮಿ ಕದರಮಂಡಲಗಿ, ಲಿಂಗರಾಜ ಹೊನ್ನಾಳಿ, ಚನ್ನವೀರಪ್ಪ ಬಡಿಗೇರ, ಶಿವಾನಂದ ಕರಿಗಾರ, ಶಿವಾನಂದ ಯಲಿಗಾರ, ಮೂಕಪ್ಪ ಅಗಸಿಬಾಗಿಲ, ರಾಮನಗೌಡ ಪಾಟೀಲ, ರಾಘವೇಂದ್ರ ಗಿರಿಯಪ್ಪನವರ ಹಾಗೂ ಮಧುಕುಮಾರ ಸಿದ್ದಣ್ಣವರ ಉಪಸ್ಥಿತರಿದ್ದರು.