ರಾಣಿಬೆನ್ನೂರು: ನಮ್ಮ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ಇದೆ ಎಂದು ೧ನೇ ಹೆಚ್ಚುವರಿ ಹಿರಿಯ ದಿವಾಣಿ ನ್ಯಾಯಾಧೀಶ ಬಾಲಮುಕುಂದ ಮುತಾಲಿಕದೇಸಾಯಿ ಹೇಳಿದರು.

ನಗರದ ದೇವಿಕಾ ಸ್ಕೂಲ್‌ನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾವಾದಿಗಳ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ದೇವಿಕಾ ಸ್ಕೂಲ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವಿದ್ಯಾರ್ಥಿಗೆ ೧೪ ವರ್ಷದವರೆಗೆ ಉಚಿತವಾದ ಶಿಕ್ಷಣ ನೀಡಬೇಕು. ಆದರೆ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸದೇ ಗ್ಯಾರೇಜ್, ಖಾಸಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು. ಪ್ರಧಾನ ದಿವಾಣಿ ನ್ಯಾಯಾಧೀಶ ಆದಿತ್ಯಕುಮಾರ ಎಚ್. ಆರ್. ಅಪರ ಸರ್ಕಾರಿ ವಕೀಲ ಟಿ. ಎಸ್. ಜಂಗರಡ್ಡೇರ, ಬಿಇಒ ಶಾಮಸುಂದರ ಅಡಿಗ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ರಾಘವೇಂದ್ರ ಶಿರೂರು, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ವಿಜಯಾ ಬಣಕಾರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಮಿಕ ನಿರೀಕ್ಷಕ ಎನ್. ದೇವೇಂದ್ರ, ಅಧ್ಯಕ್ಷತೆ ವಹಿಸಿದ್ದರು. ಬಾಲ ಕಾರ್ಮಿಕ ವಿರೋಧಿ ಹಾಗೂ ಕಾಯ್ದೆ ೧೯೮೬ರ ಕುರಿತು ನ್ಯಾಯವಾದಿ ಎಚ್. ಎಸ್. ಶಿದ್ದಪ್ಪನವರ ಉಪನ್ಯಾಸ ನೀಡಿದರು. ಸಿ.ಆರ್. ಪಾಟೀಲ, ದೇವಿಕಾರಾಣಿ, ನಾಜಿಯಾ ಕೊತ್ತವಾಲ್ ಮತ್ತಿರರಿದ್ದರು.