ಕಾಂತರಾಜ ವರದಿ ಜಾರಿಯಾಗದಿದ್ದರೆ ಹೋರಾಟ

| Published : Nov 17 2024, 01:16 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಲು ಕಾಂತರಾಜ ವರದಿ ಪೂರಕವಾಗಿದೆ. ತಕ್ಷಣ ರಾಜ್ಯ ಸರ್ಕಾರ ಕಾಂತರಾಜ ವರದಿಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಕೊಡಲು ಕಾಂತರಾಜ ವರದಿ ಪೂರಕವಾಗಿದೆ. ತಕ್ಷಣ ರಾಜ್ಯ ಸರ್ಕಾರ ಕಾಂತರಾಜ ವರದಿಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಶೋಷಿತ ವರ್ಗಗಳ ಜನಜಾಗೃತಿ ಸಭೆಯ ನಂತರ ವರದಿಗಾರರ ಜೊತೆ ಮಾತನಾಡಿದ ಅವರು, ಕೆಲವರ ಹಿತಾಸಕ್ತಿ ಕಾಪಾಡಲು ಕಾಂತರಾಜ ವರದಿಯನ್ನು ಹತ್ತಿಕ್ಕುವ ಪ್ರಯತ್ನ ತೆರೆಮರೆಯಲ್ಲಿ ನಡೆಸಲಾಗುತ್ತಿದೆ. ಕಾಂತರಾಜ ವರದಿ ಅತ್ಯಂತ ನಿಖರವಾಗಿದೆ. ಸಾಕಷ್ಟು ಶ್ರಮ ವಹಿಸಿ ಈ ವರದಿ ಸಿದ್ದಪಡಿಸಿದ್ದಾರೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ ಅವಕಾಶಗಳು ಶೋಷಿತ ಸಮಾಜಗಳಿಗೆ ಲಭಿಸಿಲ್ಲ.

ಸಿದ್ದರಾಮಯ್ಯ ಹೊರತು ಯಾರಿಂದಲೂ ಈ ವರದಿ ಜಾರಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರ ಅವಧಿಯಲ್ಲೇ ಈ ವರದಿ ಅನುಷ್ಠಾನಗೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಸುಮಾರು ₹ 185 ಕೋಟಿ ಹಣವನ್ನು ಕಾಂತರಾಜ ವರದಿಯ ಸಮೀಕ್ಷೆಗಾಗಿ ಖರ್ಚು ಮಾಡಲಾಗಿದೆ. ಐದಾರು ವರ್ಷ ಕಷ್ಟಪಟ್ಟು ಸಮೀಕ್ಷೆ ನಡೆಸಿ, ರಾಜ್ಯದ ಜನರ ದುಡ್ಡಲ್ಲಿ ಆಯೋಗ ಕೆಲಸ ಮಾಡಿದೆ. ೧೫ ಸಾವಿರ ನೌಕರರು ಮನೆಮನೆಗೆ ಹೋಗಿ ಕೆಲಸ ಮಾಡಿದ್ದಾರೆ. ಕಾಂತರಾಜ ವರದಿ ಸಾಮಾಜಿಕ ಮತ್ತು ಶೈಕ್ಷಣಿಕ ಜೊತೆಗೆ ಆರ್ಥಿಕ ಸ್ಥಿತಿಗತಿಗಳನ್ನು ಎತ್ತಿ ಹಿಡಿದಿದೆ. ಶೋಷಿತ ವರ್ಗದವರ ಕಲ್ಯಾಣಕ್ಕಾಗಿ ಕಾಂತರಾಜ ವರದಿಯನ್ನು ಚಳಿಗಾಲದ ಅಧಿವೇಶನದಲ್ಲಿಯೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ವಕ್ತಾರ ಎಸ್‌.ಎಂ.ಪಾಟೀಲ(ಗಣಿಯಾರ), ಜಿಲ್ಲಾ ಅಹಿಂದ ಮುಖಂಡರಾದ ಸೋಮನಾಥ ಕಳ್ಳಿಮನಿ, ಚಂದ್ರಶೇಖರ ಕೊಡಬಾಗಿ ಮಾತನಾಡಿ, ಕೆಲವರು ಹಿತಾಶಕ್ತಿಯನ್ನು ಕಾಪಾಡಲು ವರದಿ ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ. ತಕ್ಷಣ ರಾಜ್ಯ ಸರ್ಕಾರ ಕಾಂತರಾಜ ವರದಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶಗೌಡ ಪಾಟೀಲ, ಸುರೇಶ ಗೊಣಸಗಿ, ಎಂ.ಜಿ.ಯಂಕಂಚಿ, ರಾಜಶ್ರೀ ಯರನಾಳ, ಮಲ್ಲು ಬಿದರಿ, ಪ್ರಭುಗೌಡ ಪಾಟೀಲ, ಜಟ್ಟೆಪ್ಪ ಬನಸೋಡೆ, ನಾಗರಾಜ ಲಂಬು, ಅಡವೆಪ್ಪ ಸಾಲಗಲ್ಲ, ಸಂಜು ಕೆಂಬೋಗಿ, ಮಹಾದೇವ ಹಿರೇಕುರಬರ, ಕಾಮೇಶ ಪಾಟೀಲ, ಪ್ರಭು ಕೋಳಿ, ರಾಜು ಸಿಂಗೆ, ರಫೀಕ್‌ ಮಕಾನದಾರ, ರಾಮ ಝಡಪೇಕರ್‌, ದಶರಥ ಬನಸೋಡೆ ಇತರರು ಇದ್ದರು.