ಹತ್ತು ತಿಂಗಳ ಮಗುವಿಗೆ ಯಶಸ್ವಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ

| Published : Aug 28 2024, 12:47 AM IST

ಹತ್ತು ತಿಂಗಳ ಮಗುವಿಗೆ ಯಶಸ್ವಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದವರೇ ಆದ ದಂಪತಿಗೆ ಈಗ್ಗೆ ಹತ್ತು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಗಂಡು ಸಂತಾನದಿಂದ ಕುಟುಂಬದವರೆಲ್ಲಾ ಸಂತೋಷದಿಂದಲೇ ಇದ್ದರು. ಆದರೆ, ಮಗು ಬೆಳೆಯುತ್ತಾ ಬೆಳೆಯುತ್ತಾ ಅದರ ಬೆನ್ನಿನ ಸೊಂಟದ ಭಾಗದಲ್ಲಿ ಜುಟ್ಟಿನ ರೀತಿಯಲ್ಲಿ ಒಂದಷ್ಟು ಕೂದಲು ಬೆಳೆಯತೊಡಗಿತ್ತು. ಈ ಕೂದಲು ನೋಡನೋಡುತ್ತಿದ್ದಂತೆ ಉದ್ದವಾಗಿ ಬೆಳೆಯುತ್ತಿತ್ತು. ಇದನ್ನು ಗಮನಿಸಿದ ಪೋಷಕರು ಮಂಜುನಾಥ ಆಸ್ಪತ್ರೆಗೆ ತೋರಿಸಿದ್ದು, ವೈದ್ಯರಾದ ಅಮೋಘ್‌ ಗೌಡ ಹಾಗೂ ತಂಡ ಸೂಕ್ತ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಮಗು ಭವಿಷ್ಯದಲ್ಲಿ ಎದುರಿಸಬೇಕಾದ ಅತ್ಯಂತ ಗಂಭೀರ ಸಮಸ್ಯೆಯಿಂದ ಪಾರಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಅದಿನ್ನೂ ಕೇವಲ ಹತ್ತು ತಿಂಗಳ ಹಸುಗೂಸು. ನೋಡಲು ಮುದ್ದುಮುದ್ದಾದ ಮಗು. ಆದರೆ ಮಗುವಿನ ಬೆನ್ನ ಮೇಲೆ ಜಡೆಯಂತೆ ಬೆಳೆದ ಕೂದಲನ್ನು ಸಕಾಲದಲ್ಲಿ ಪೋಷಕರು ಗಮನಿಸಿ, ವೈದ್ಯರ ಬಳಿ ಕರೆತಂದಿದ್ದರಿಂದ ಹಾಗೂ ಸೂಕ್ತ ಸಮಯದಲ್ಲಿ ವೈದ್ಯರಾದ ಅಮೋಘ್‌ ಗೌಡ ಹಾಗೂ ತಂಡ ಸೂಕ್ತ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಮಗು ಭವಿಷ್ಯದಲ್ಲಿ ಎದುರಿಸಬೇಕಾದ ಅತ್ಯಂತ ಗಂಭೀರ ಸಮಸ್ಯೆಯಿಂದ ಪಾರಾಗಿದೆ.

ನಗರದ ಮಂಜುನಾಥ ಆಸ್ಪತ್ರೆಯಲ್ಲಿ ಇಂತಹದೊಂದು ವಿಚಿತ್ರವಾದ ಪ್ರಕರಣವನ್ನು ಸವಾಲಾಗಿ ತೆಗೆದುಕೊಂಡ ನರಶಸ್ತ್ರಚಿಕಿತ್ಸಕರಾದ ಡಾ.ಅಮೋಘ್‌ ಗೌಡ ಹಾಗೂ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಕುರಿತಂತೆ ಮಂಗಳವಾರ ತಮ್ಮ ಆಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

10 ತಿಂಗಳ ಮಗುವಿನ ಬೆನ್ನಿನಲ್ಲಿ ಕೂದಲು: ಹಾಸನದವರೇ ಆದ ದಂಪತಿಗೆ ಈಗ್ಗೆ ಹತ್ತು ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಗಂಡು ಸಂತಾನದಿಂದ ಕುಟುಂಬದವರೆಲ್ಲಾ ಸಂತೋಷದಿಂದಲೇ ಇದ್ದರು. ಆದರೆ, ಮಗು ಬೆಳೆಯುತ್ತಾ ಬೆಳೆಯುತ್ತಾ ಅದರ ಬೆನ್ನಿನ ಸೊಂಟದ ಭಾಗದಲ್ಲಿ ಜುಟ್ಟಿನ ರೀತಿಯಲ್ಲಿ ಒಂದಷ್ಟು ಕೂದಲು ಬೆಳೆಯತೊಡಗಿತ್ತು. ಈ ಕೂದಲು ನೋಡನೋಡುತ್ತಿದ್ದಂತೆ ಉದ್ದವಾಗಿ ಬೆಳೆಯುತ್ತಿತ್ತು. ಇದನ್ನು ಗಮನಿಸಿದ ಮಗುವಿನ ಪೋಷಕರು ಕಳೆದ ಜುಲೈ 30ರಂದು ಮಂಜುನಾಥ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಕರೆತಂದಿದ್ದಾರೆ. ಮಗುವನ್ನು ತಪಾಸಣೆ ಮಾಡಿದ ವೈದ್ಯರು ಮಗುವಿನ ಬೆನ್ನಿನ ಮೂಳೆಯಲ್ಲಿ ಸಮಸ್ಯೆ ಇರಬಹುದೆಂದು ಶಂಕಿಸಿ ಮಕ್ಕಳ ತಜ್ಞರಾದ ಡಾ. ಪ್ರೀತಂ ರವರ ಸಲಹೆ ಪಡೆದು ಎಂಆರ್‌ಐ ಸ್ಕ್ಯಾನ್‌ ಮಾಡಿದ್ದಾರೆ. ಈ ಸ್ಕ್ಯಾನ್‌ ಮಾಡಿದ ನಂತರ ಮಗುವಿನ ಬೆನ್ನಿನ ಮೂಳೆಯಲ್ಲಿ ದೋಷ ಪತ್ತೆಯಾಗಿದೆ. ಅದೇನೆಂದರೆ, ಸಾಮಾನ್ಯವಾಗಿ ಬೆನ್ನಿನ ಮೂಳೆ ಕುತ್ತಿಗೆಯ ಭಾಗದಿಂದ ಸೊಂಟದಿಂದ ಕೆಳಭಾಗದವರೆಗೂ ಒಂದೇ ಎಳೆಯಲ್ಲಿ ಇರುತ್ತದೆ. ಆದರೆ, ಈ ಮಗುವಿನ ಬೆನ್ನು ಮೂಳೆ ಒಂದು ಹಂತದಲ್ಲಿ ಸೀಳಿದಂತೆ ಎರಡು ಎಳೆಯಾಗಿತ್ತು (ಸ್ಪ್ಲಿಟ್‌ ಕಾರ್ಡ್‌ ಮಲ್ಪಿಫಾರ್‍ಮೇಶನ್). ಈ ಎರಡು ಬೆನ್ನು ಮೂಳೆಗಳ ನಡುವೆ ಕೆಲ ನರಗಳು ಸೇರಿಕೊಂಡಿದ್ದವು.

ಇದರಿಂದ ಮುಂದೆ ಏನಾಗಬಹುದು?

ಸಾಮಾನ್ಯವಾಗಿ ಎಲ್ಲಾ ಮನುಷ್ಯರಲ್ಲಿ ಒಂದೇ ಬೆನ್ನುಮೂಳೆ ಇರುತ್ತದೆ. ಅದೇ ಬೆನ್ನುಮೂಳೆ ಯಾವುದಾದರೂ ಒಂದು ಭಾಗದಲ್ಲಿ ಸೀಳಿದಂತೆ ಎರಡಾಗಿದ್ದು, ಅದರ ಮಧ್ಯೆ ನರಗಳು ಸೇರಿಕೊಳ್ಳುವುದರಿಂದ ಭವಿಷ್ಯದಲ್ಲಿ ಕಾಲು ಸ್ವಾಧೀನ ತಪ್ಪಬಹುದು. ಮಲ ಮೂತ್ರ ವಿರ್ಜನೆ ಹಿಡಿತ ತಪ್ಪುತ್ತದೆ. ಇದೂ ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು. ಭವಿಷ್ಯದಲ್ಲಿ ಈ ಎಲ್ಲಾ ಸಮಸ್ಯೆಗಳು ಎದುರಾಗಬಹುದೆಂದು ಮಗುವಿನ ಪೋಷಕರಿಗೆ ಅರ್ಥ ಮಾಡಿಸಿದ್ದರಿಂದ ಹಾಗೂ ಶಸ್ತ್ರಚಿಕಿತ್ಸೆಯಿಂದ ಈ ಸಮಸ್ಯೆಯನ್ನು ಬಗೆಹರಿಸಬಹುದೆಂದು ಮನವರಿಕೆ ಮಾಡಿಸಿದ್ದರಿಂದ ಪೋಷಕರು ಶಸ್ತ್ರಚಿಕಿತ್ಸೆಗೆ ಸಮ್ಮತಿ ನೀಡಿದ್ದಾರೆ.

ಸತತ 8 ಗಂಟೆಗಳ ಶಸ್ತ್ರಚಿಕಿತ್ಸೆ: ಜುಲೈ 30ಕ್ಕೆ ಮಗುವನ್ನು ಆಸ್ಪತ್ರೆಗೆ ಕರೆತರಲಾಯಿತು. ಮಗುವಿನ ಪರಿಸ್ಥಿತಿಯ ಗಂಭೀರತೆ ಅರಿತು ಜುಲೈ ೩೧ರಂದೇ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅಂದು ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೨ ಗಂಟೆವರೆಗೂ ಸತತ ೮ ಗಂಟೆಗಳ ಕಾಲ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಹೇಳಿದರು.

ಇದು ಅತ್ಯಂತ ಕಷ್ಟಕರವಾದ ಶಸ್ತ್ರಚಿಕಿತ್ಸೆಯಾಗಿದ್ದು, ಮಗುವನ್ನು ಬೆನ್ನು ಮೇಲೆ ಮಾಡಿ ಮಲಗಿಸಿ ಬೆನ್ನಿನ ಭಾಗದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದು, ನರ್ವ್ ಮಾನಿಟರಿಂಗ್ ಟೆಕ್ನಾಲಜಿ ಮತ್ತು ಮೈಕ್ರೋ ಸ್ಕೋಪಿ ಸಹಾಯದೊಂದಿಗೆ ಅರವಳಿಕೆ ತಜ್ಞ ಡಾ. ಬಿ.ಎಂ. ಸುಹಾಸ್ ಅವರ ಸಹಯೋಗದೊಂದಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ನಡೆದು ೨೦ ದಿನಗಳೇ ಕಳೆದಿದ್ದು, ಮಗುವಿಗೆ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಾಗಿದೆ ಎಂದು ಮಾಹಿತಿ ನೀಡಿದರು.

ಶಸ್ತ್ರಚಿಕಿತ್ಸೆ ವೇಳೆ ಅರಿವಳಿಕೆ ತಜ್ಞರ ಪಾತ್ರ ಬಹಳ ಮುಖ್ಯದ್ದಾಗಿರುತ್ತದೆ. ಅದರಲ್ಲೂ ಹತ್ತು ತಿಂಗಳ ಮಗು ಎಂದರೆ ಬಹಳ ಸೂಕ್ಷ್ಮದ್ದಾಗಿರುತ್ತದೆ. ಮಗುವಿನ ತೂಕ ಮತ್ತು ದೈಹಿಕ ಸ್ಥಿತಿ ಆಧರಿಸಿ ಅರಿವಳಿಕೆ ನೀಡಬೇಕಾಗುತ್ತದೆ. ಅದರಲ್ಲೂ ಶಸ್ತ್ರಚಿಕಿತ್ಸೆ ವೇಳೆ ಚಿಕ್ಕ ಮಕ್ಕಳ ದೇಹದ ಉಷ್ಣತೆ ಇಳಿಮುಖವಾಗಿಬಿಡುತ್ತದೆ. ಹಾಗಾಗಿ ಮಗುವಿನ ಸುತ್ತಲೂ ಹತ್ತಿ ಇಟ್ಟು ಒಂದೇ ಸಮನಾದ ಉಷ್ಣತೆಯನ್ನು ಕಾಪಾಡುವ ಜತೆಗೆ ಮಗುವಿನ ದೇಹಸ್ಥಿತಿಗೆ ಅನುಗುಣವಾಗಿ ಅರಿವಳಿಕೆ ತಜ್ಞರಾದ ಡಾ.ಸುಹಾಸ್‌ ಕೂಡ ಅರಿವಳಿಕೆ ನೀಡಿ ಕ್ಷಣಕ್ಷಣದ ಮಾಹಿತಿಗನುಗುಣವಾಗಿ ಚಿಕಿತ್ಸೆ ನೀಡಿದ್ದರಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲು ಕಾರಣವಾಯಿತು ಎಂದು ತಿಳಿಸಿದರು.

ಈ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ: ಮಗುವಿನ ಬೆನ್ನ ಮೇಲೆ ಕೆಲವೆಡೆ ಮಾತ್ರ ಉದ್ದವಾದ ಕೂದಲು ಬೆಳೆಯುವುದು, ಬೆನ್ನಿನ ಸೊಂಟದ ಭಾಗದಲ್ಲಿ ಚರ್ಮದ ಸಾಧಾರಣ ಬಣ್ಣಕ್ಕಿಂತ ಕಪ್ಪಗಿನ ಮಚ್ಚೆಗಳು ಕಾಣಿಸಿಕೊಳ್ಳುವುದು, ಬೆನ್ನಿನಲ್ಲಿ ಗುಳ್ಳೆಗಳು ಏಳುವುದು, ತಲೆಯ ಭಾಗ ಹೆಚ್ಚು ಬೆಳವಣಿಗೆ ಆಗುವುದು..ಇಂತಹ ಲಕ್ಷಣಗಳೇನಾದರೂ ಮಗುವಿನಲ್ಲಿ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ತಾವು ಶಸ್ತ್ರಚಿಕಿತ್ಸೆ ಮಾಡಿರುವ ಮಗುವಿನ ಪೋಷಕರ ಮುಂಜಾಗ್ರತೆಯಿಂದಲೇ ಇಂದು ಈ ಮಗು ಭವಿಷ್ಯದಲ್ಲಿ ಆಗಬಹುದಾಗಿದ್ದ ನ್ಯೂನತೆಗಳಿಂದ ಪಾರಾಗಿದೆ. ಹಾಗೆಯೇ ಇಂತಹ ಲಕ್ಷಣಗಳೇನಾದರೂ ಕಂಡುಬಂದಲ್ಲಿ ಅಂತಹ ಪೋಷಕರು ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸುವ ಮೂಲಕ ತಮ್ಮ ಮಗುವನ್ನು ರಕ್ಷಿಸಬೇಕಾಗಿ ಮನವಿ ಮಾಡಿದರು.

ಈ ವೇಳೆ ಅರಿವಳಿಕೆ ತಜ್ಞರಾದ ಡಾ. ಬಿ.ಎಂ. ಸುಹಾಸ್, ಮಕ್ಕಳ ತಜ್ಞರಾದ ಡಾ. ಪ್ರೀತಂ ಹಾಗೂ ಯಶಸ್ವಿ ಶ್ಸಸ್ತ್ರಚಿಕಿತ್ಸೆ ಪಡೆದ ಮಗು ಹಾಗೂ ತಂದೆ ತಾಯಿ ಉಪಸ್ಥಿತರಿದ್ದರು.